ಕೆಲಸಕ್ಕಿದ್ದ ಮನೆಗೆ ಕನ್ನ ಹಾಕಿ 50 ಲಕ್ಷ ರೂ. ಚಿನ್ನಾಭರಣ ದೋಚಿದ್ದ ಮೂವರ ಸೆರೆ
ಬೆಂಗಳೂರು, ಮೇ. 24: ಕೆಲಸಕ್ಕಿದ್ದ ಮನೆಯಲ್ಲಿ ಒಂದು ಕೆ.ಜಿ. ಚಿನ್ನಾಭರಣ ದೋಚಿದ್ದ ಕೆಲಸದಾಕೆ ಸೇರಿದಂತೆ ಮೂವರು ಕಳ್ಳರನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಛತ್ತೀಸಗಡ ಹಾಗೂ ಬಿಹಾರ ಮೂರು ರಾಜ್ಯದ ಮೂವರು ಆರೋಪಿಗಳು ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ವಿಶೇಷ. ಬಂಧಿತರಿಂದ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಛತ್ತೀಸಘಡ ಮೂಲದ ಸುನೈನಾ , ಅಸ್ಸಾಂನ ಮೀನ್ ಹಾಜುದ್ದೀನ್ ಬಾರ್ ಬಯ್ಯ, ಬಿಹಾರ ಮೂಲದ ಚಂದನ್ ಕುಮಾರ್ ರಹತೋ ಬಂಧಿತರು. ಇವರು ಮಾರತಹಳ್ಳಿ ಪೊಲೀಸ್ ಠಾಣೆಯ ದಿವ್ಯಶ್ರೀ ಅಪಾರ್ಟ್ ಮೆಂಟ್ ನಲ್ಲಿರುವ ನಿತಿನ್ ಅಗರ್ ವಾಲ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆ ಚಂದನ್ ಕುಮಾರ್ ರಹತೋ ಮತ್ತು ಸುನೈನಾ ಸೇರಿಕೊಂಡು ನಿತಿನ್ ಅಗರ್ ವಾಲ್ ಅವರ ಮನೆಯ ಲಾಕರ್ ನ್ನು ಕಳವು ಮಾಡಿದ್ದರು. ಒಂದು ಕೆ.ಜಿ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ಸಮೇತ ಪರಾರಿಯಾಗಿದ್ದರು. ಈ ಕುರಿತು ನಿತಿನ್ ಅಗರ್ ವಾಲ್ ದೂರು ನೀಡಿದ್ದರು.
Recommended Video
ಸುನೈನಾ ಕಣ್ಮರೆಯಾಗಿರುವ ಮಾಹಿತಿ ಆಧರಿಸಿ ಆಕೆಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಿ ತನಿಖೆ ನಡೆಸಿದಾಗ ಲಾಕರ್ ನ್ನು ಮುರಿದು ಚಿನ್ನಾಭರಣಗಳನ್ನು ಅಸ್ಸಾಂ ಮತ್ತು ಬೆಂಗಳೂರಿನಲ್ಲಿ ಮಾರಾಟ ಮಾಡಿದ್ದು, ಮೀನ್ ಹಾಜುದ್ದೀನ್ ಬಾರ್ ಬಯ್ಯನ ಬಳಿಯಿದ್ದ 1 ಕೆ.ಜಿ. ಚಿನ್ನಾಭರಣ ಮತ್ತು ನಗದು ಹಣ ಪತ್ತೆಯಾಗಿದೆ. ಒಟ್ಟಾರೆ ಐವತ್ತು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪತ್ತೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಾರತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿತಿನ್ ಅಗರ್ ವಾಲ್ ಮನೆಯಲ್ಲಿದ್ದ ಕದ್ದಿದ್ದ ಅಷ್ಟೂ ಚಿನ್ನಾಭರಣಗಳನ್ನು ಪತ್ತೆ ಮಾಡಿದ ಪೊಲೀಸರ ಕಾರ್ಯ ಶೈಲಿಯನ್ನು ಡಿಸಿಪಿ ಡಿ. ದೇವರಾಜು ಪ್ರಶಂಸೆ ಮಾಡಿದ್ದಾರೆ.