ಬೆಂಗಳೂರಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬೋಗಿ ಏರಿದವರು ಮಾಡಿದ್ದೇನು?
ಬೆಂಗಳೂರು, ಜನವರಿ.20: ದಿನನಿತ್ಯ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರೇ ಇವರ ಟಾರ್ಗೆಟ್. ಪ್ರಯಾಣಿಕರ ಸೋಗಿನಲ್ಲಿ ರೈಲು ಬೋಗಿ ಏರುವ ಖದೀಮರು ಸೈಲೆಂಟ್ ಆಗಿ ತಮ್ಮ ಕೆಲಸ ಮುಗಿಸುತ್ತಿದ್ದರು. ಸಿಲಿಕಾನ್ ಸಿಟಿ ಪೊಲೀಸರಿಗೆ ತಲೆನೋವು ತಂದಿದ್ದ ಅಂತರ್ ರಾಜ್ಯ ಕಳ್ಳರು ಸೋಮವಾರ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾರೆ.
ಹೌದು, ಬೆಂಗಳೂರಿನ ರೈಲುಗಳಲ್ಲಿ ಪ್ರಯಾಣಿಕರ ಚಿನ್ನಾಭರಣ ದೋಚುತ್ತಿದ್ದ ಅಂತರ್ ರಾಜ್ಯ ಬಿಹಾರಿ ತಂಡವನ್ನು ಬಂಧಿಸುವಲ್ಲಿ ಕೆಂಟೋನ್ ಮೆಂಟ್ ಠಾಣೆಯ ಪೊಲೀಸರು ಯಶಸ್ವಿ ಆಗಿದ್ದಾರೆ. ಬಿಹಾರ ಮೂಲದ ಮಂಡಲ್, ಅಜಯ್ ಕುಮಾರ್, ಗುಜರಾತ್ ಮೂಲದ ಮೋಹಿತ್ ಸಯಾಜಿ ಪರಶುರಾಮ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿದ ಚಿಕ್ಕಮಗಳೂರು ಪೊಲೀಸರು
ಅಂತರ್ ರಾಜ್ಯ ಕಳ್ಳರಾಗಿರುವ ಆರೋಪಿಗಳು ರೈಲು ಪ್ರಯಾಣಿಕರ ಆಭರಣ ಕದಿಯುವುದನ್ನೇ ಮುಖ್ಯ ಕೆಲಸವನ್ನಾಗಿ ಮಾಡಿಕೊಂಡಿದ್ದರು. ಈ ಆರೋಪಿಗಳ ವಿರುದ್ಧ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಇನ್ನು, ಮೂವರು ಬಂಧಿತ ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 800 ಗ್ರಾಂ ಆಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲೇ 14 ಪ್ರಕರಣ ದಾಖಲು:
ಸೋಮವಾರ ಬಂಧಿತವಾದ ಮೂವರು ಆರೋಪಿಗಳ ಬಂಧನದಿಂದ ಬೈಯಪ್ಪನಹಳ್ಳಿ, ಕಂಟೋನ್ ಮೆಂಟ್ ರೈಲ್ವೆ ಠಾಣೆ, ಬೆಂಗಳೂರು ನಗರ, ಗ್ರಾಮಾಂತರ ರೈಲ್ವೆ ಠಾಣಾ ವ್ಯಾಪ್ತಿಗಳಲ್ಲಿನ 14 ಕಳವು ಪ್ರಕರಣಗಳು ಪತ್ತೆಯಾಗಿವೆ. ಪ್ರಯಾಣಿಕರಂತೆ ರೈಲು ಏರುತ್ತಿದ್ದ ಆರೋಪಿಗಳು ಆಭರಣಗಳಿರುವ ಲಗೇಜ್ ಗಳನ್ನು ಮೊದಲೇ ಗುರುತು ಮಾಡಿಕೊಳ್ಳುತ್ತಿದ್ದರು.