ಬೆಂಗಳೂರಿನ ಏರ್ ಪೋರ್ಟ್ ನಿಂದ 3 ಕೋಟಿ ಪ್ರಯಾಣಿಕರ ಪ್ರಯಾಣ
ಬೆಂಗಳೂರು, ಜನವರಿ.28: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಂದೇ ವರ್ಷದಲ್ಲಿ 3 ಕೋಟಿ 36 ಲಕ್ಷ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂದು ವರದಿಯಾಗಿದೆ. ಕಳದೆ 2018ರ ವರ್ಷಕ್ಕೆ ಹೋಲಿಸಿ ನೋಡಿದಾಗ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.4.1ರಷ್ಟು ಏರಿಕೆ ಕಂಡು ಬಂದಿದೆ.
2019ರ ಸಾಲಿನಲ್ಲಿ 3.36 ಕೋಟಿ ಜನರು ಪ್ರಯಾಣಿಸಿರುವ ಬಗ್ಗೆ ದಾಖಲಾಗಿದ್ದು, ಕಳೆದ 2018ರಲ್ಲಿ 3 ಕೋಟಿ 23 ಲಕ್ಷ 30 ಸಾವಿರ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ.
ಕೆಂಪೇಗೌಡ ಏರ್ ಪೋರ್ಟ್ ಗೆ ವಾರದಲ್ಲೇ ಎರಡನೇ ಹುಸಿ ಬಾಂಬ್ ಕರೆ
ಇನ್ನು, 3.36 ಕೋಟಿ ಪ್ರಯಾಣಿಕರ ಪೈಕಿ 2.87 ಕೋಟಿ ಅಂತರ್ ದೇಶೀಯ ಪ್ರಯಾಣಿಕರಾಗಿದ್ದು, 40 ಲಕ್ಷ 87 ಸಾವಿರ ಅಂತಾರಾಷ್ಟ್ರೀಯ ಪ್ರಯಾಣಿಕರು ಎಂದು ವರದಿಯಾಗಿದೆ. ಕಳೆದ 2018ರ ಸಾಲಿಗೆ ಹೋಲಿಸಿ ನೋಡಿದಾಗ ಅಂತರ್ ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.2.6ರಷ್ಟು ಏರಿಕೆ ಕಂಡಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ.
5 ವರ್ಷಗಳಲ್ಲಿ 6 ಕೋಟಿ ಪ್ರಯಾಣಿಕರನ್ನು ತಲುಪುವ ಗುರಿ
ಕಳೆದ 2018ಕ್ಕೆ ಹೋಲಿಸಿದರೆ 2019ರ ಸಾಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿದೆ. ಮುಂದಿನ 5 ವರ್ಷಗಳಲ್ಲಿ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. 2025ರ ವೇಳೆಗೆ ವಾರ್ಷಿಕ ಪ್ರಯಾಣಿಕರ ಸಂಖ್ಯೆಯನ್ನು 5 ರಿಂದ 6 ಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
13 ಸಾವಿರ ಕೋಟಿ ಏರ್ ಪೋರ್ಟ್ ಅಭಿವೃದ್ಧಿಗೆ ಮೀಸಲು
ಇನ್ನು, ಪ್ರಯಾಣಿಕರನ್ನು ಆಕರ್ಷಿಸುವ ದೃಷ್ಟಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಮೆರಗು ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಏರ್ ಪೋರ್ಟ್ ಅಭಿವೃದ್ಧಿಪಡಿಸಲು ಹಾಗೂ ಮೂಲಸೌಕರ್ಯಗಳನ್ನು ವಿಸ್ತರಿಸಲು 13 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಲಾಗುತ್ತದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಇಓ ಹರಿ ಮರಾರ್ ತಿಳಿಸಿದ್ದಾರೆ.
ಅತಿಹೆಚ್ಚು ಪ್ರಯಾಣಿಕರು ಸಂಚರಿಸಿದ್ದೇ ದೆಹಲಿ, ಮುಂಬೈಗೆ
ಬೆಂಗಳೂರಿನ ಹೊರವಲಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ ಎನಿಸಿದೆ. ಬೆಂಗಳೂರು ಏರ್ ಪೋರ್ಟ್ ನಿಂದ ದೆಹಲಿ ಮತ್ತು ಮುಂಬೈಗೆ ಅತಿಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದೆ. ಇನ್ನು, ವಿದೇಶಗಳ ಪೈಕಿ ಸಿಂಗಾಪುರ್ ಹಾಗೂ ದುಬೈಗೆ ಅತಿಹೆಚ್ಚು ಮಂದಿ ಪ್ರಯಾಣಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮನರಂಜನೆ ನೀಡಲು ಹೊಸ ಯೋಜನೆ ರೂಪಿಸಿದ ಕೆಐಎಎಲ್
ಇತ್ತೀಚಿಗಷ್ಟೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿಯು ಒಪ್ಪಂದವೊಂದಕ್ಕೆ ಸಹಿ ಹಾಕಿದೆ. 2021ರ ವೇಳೆಗೆ ಪ್ರಯಾಣಿಕರಿಗೆ ಮನರಂಜನೆ ನೀಡಲು ಸಂಗೀತ ಕಾರ್ಯಕ್ರಮ, ಕ್ರೀಡಾಕೂಟ ಹಾಗೂ ಎಕ್ಸಿಬಿಷನ್ ಆಯೋಜನೆ ಮಾಡಲಾಗುತ್ತದೆ. ಬೆಂಗಳೂರು ವಿಮಾನ ನಿಲ್ದಾಣ ಕೇವಲ ಪ್ರಯಾಣಕ್ಕಷ್ಟೇ ಸೀಮಿತವಾಗದಂತೆ ಜನರನ್ನು ಆಕರ್ಷಿಸಲು ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ಕೆಐಎಎಲ್ ಸಿಇಓ ಹರಿ ಮರಾರ್ ತಿಳಿಸಿದ್ದಾರೆ.