ಬೆಂಗಳೂರಿನ 2ನೇ ಅತೀ ಉದ್ದದ 6 ಪಥದ ಫ್ಲೈಓವರ್ ಬಳಕೆಗೆ ಮುಕ್ತ
ಬೆಂಗಳೂರು, ಸೆಪ್ಟಂಬರ್ 22: ಬೆಂಗಳೂರಿನ ಎರಡನೇ ಅತೀ ಉದ್ದದ ಆರು ಪಥಗಳನ್ನು ಹೊಂದಿರುವ ಮೇಲ್ಸೇತುವೆಯ ಒಂದು ಬದಿ ಬುಧವಾರ ಸಾರ್ವಜನಿಕರಿಗೆ ಮುಕ್ತವಾಗಿದೆ. ಇನ್ನೊಂದು ಬದಿ ಸಂಚಾರವು ದಸರಾ ಹಬ್ಬದ ವೇಳೆ ತೆರೆಯಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಈ ಬಗ್ಗೆ ವಿವರಿಸಿದ ಅವರು, ಬೆಂಗಳೂರು - ಮೈಸೂರು ರಸ್ತೆಯಲ್ಲಿ ನಿರ್ಮಾಣಗೊಂಡ ಕುಂಬಳಗೋಡು ಮೇಲ್ಸೇತುವೆಯು ಪ್ರಯಾಣಿಕರಿಗೆ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಸಹಾಯ ಮಾಡಲಿದೆ. ಫ್ಲೈಓವರ್ನ ಬಿಡದಿ ಕಡೆ ಬುಧವಾರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು ಕಡೆಗಿನ ಮತ್ತೊಂದು ಬದಿಯನ್ನು ದಸರಾ ಹಬ್ಬದ ವೇಳೆ ಮುಕ್ತಗೊಳಿಸಲಾಗುವುದು ಎಂದರು.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಎಕ್ಸ್ಪ್ರೆಸ್ವೇ (9.985 ಕಿ.ಮೀ) ನಗರದದ ಮೊದಲ ಅತೀ ಉದ್ದದ ಫ್ಲೈಓವರ್, ಕುಂಬಳಗೂಡು (4.5 ಕಿ.ಮೀ.) ಎರಡನೇ ಅತಿ ಉದ್ದದ ಮೇಲ್ಸೇತುವೆ ಎನ್ನಲಾಗುತ್ತಿದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಕುಂಬಳಗೋಡು ಇತ್ತೀಚಿಗೆ ಕ್ಷಿಪ್ರ ಬೆಳವಣಿಗೆ ಹೊಂದುತ್ತಿರುವ ಪ್ರದೇಶವಾಗಿದೆ. ಅಲ್ಲದೇ ಮೈಸೂರು ಸಂಪರ್ಕಿಸುವ ಈ ರಸ್ತೆಯಲ್ಲಿ ಅಧಿಕ ವಾಹನ ಸಂಚರಿಸುತ್ತವೆ. ಈ ರಸ್ತೆಯಲ್ಲಿನ ಸಂಚಾರಕ್ಕೆ ಮೇಲ್ಸೇತುವೆಯ ಅಗತ್ಯವಿತ್ತು ಎಂದು ಕೆಂಗೇರಿ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಕುಂಬಳಗೋಡು ಮೇಲ್ಸೇತುವೆ ಉದ್ದ 4.5ಕಿ.ಮೀ
ನಗರದ ಎಲೆಕ್ಟ್ರಾನಿಕ್ ಸಿಟಿ ಎಕ್ಸ್ಪ್ರೆಸ್ವೇ (9.985 ಕಿಮೀ) ನಗರದಲ್ಲಿ ಅತಿ ಉದ್ದ, ಎತ್ತರದ ಮೇಲ್ಸೇತುವೆಯಾಗಿದ್ದು, ಈ ಯೋಜನೆ 2006 ರಲ್ಲಿ ಕೆಲಸ ಪ್ರಾರಂಭವಾಯಿತು. ನಂತರ 2010ರಲ್ಲಿ ಈ ಅತೀ ಉದ್ದದ ನಾಲ್ಕು ಪಥದ ಮೇಲತ್ಸೇವೆ ಸಂಚಾರಕ್ಕೆ ಮುಕ್ತವಾಯಿತು. ಇನ್ನೂ 4.3 ಕಿ.ಮೀ. ಉದ್ದವಿರುವ ಪೀಣ್ಯ ಮೇಲ್ಸೇತುವೆ ನಗರದ ಮೂರನೇ ಅತ್ಯಂತ ಎತ್ತರವಾಗಿದ್ದು, ಇದು ಸಹ ನಾಲ್ಕು ಲೇನ್ ಹೊಂದಿದೆ. ಇವುಗಳಿಗೆ ಹೋಲಿಕೆ ಮಾಡಿದರೆ 4.5 ಕಿಮೀ ಉದ್ದದ ಕುಂಬಳಗೋಡು ಮೇಲ್ಸೇತುವೆಯು ನಗರದಲ್ಲಿನ ಎರನೇ ಅತೀ ಉದ್ದದ ಮತ್ತು ಆರು ಲೇನ್ ಹೊಂದಿರುವ ಮೇಲ್ಸೇತುವೆ ಯೋಜನೆ ಆಗಿದೆ.
ಐದನೇ ಉದ್ದದ ಮೇಲ್ಸೇತುವೆ ನಿರ್ಮಾಣ ಹಂತದಲ್ಲಿದೆ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿನ ಎಸ್ಟೀಮ್ ಮಾಲ್ನಿಂದ ಕೋಗಿಲು ಕ್ರಾಸ್ ವರೆಗಿನ 3.722 ಕಿ.ಮೀ. ಉದ್ದದ ಮೇಲ್ಸೇತುವೆ ಬೆಂಗಳೂರಿನ ನಾಲ್ಕನೇ ಅತೀ ಉದ್ದದ ಫ್ಲೈಓವರ್ ಆಗಿದೆ. ಇದು ಸಹ ಆರು ಪಥಗಳನ್ನು ಹೊಂದಿದೆ. ಐದನೇ ಅತೀ ಉದ್ದದ ಮೇಲ್ಸೇತುವೆ ಜಯದೇವ ಆಸ್ಪತ್ರೆ ಜಂಕ್ಷನ್ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಅನ್ನು ಸಂಪರ್ಕಿಸುವ 3.35 ಕಿಮೀ ಉದ್ದದ ಮೇಲ್ಸೇತುವೆಯಾಗಿದೆ. ಇದು ನಿರ್ಮಾಣ ಹಂತದಲ್ಲಿದೆ.
ಪ್ರಮುಖ ಅಂಶವೆಂದರೆ ನಗರದ ಮೊದಲ ಎಲಿವೇಟೆಡ್ ಸ್ಟ್ರೆಚ್ ಹಾಗೂ ಮೊದಲ ಮೇಲತ್ಸೇತುವೆ ಎಂದರೆ ಮೈಸೂರು ರಸ್ತೆಯಲ್ಲಿ ನಿರ್ಮಿಸಲಾದ 2.65 ಕಿ.ಮೀ. ಉದ್ದದ ಟೌನ್ಹಾಲ್-ಸಿರ್ಸಿ ವೃತ್ತದವರೆಗಿನ ಮೇಲ್ಸೇತುವೆ. ಇದೇ ನಗರದ ಮೊದಲ ಮೇಲ್ಸೇತುವೆಯೂ ಆಗಿದೆ.
ರಾಜರಾಜೇಶ್ವರಿ ನಗರದ ನಿವಾಸಿಯೊಬ್ಬರು ತಜ್ಞರ ಪ್ರಕಾರ ಟ್ರಾಫಿಕ್ ಸಮಸ್ಯೆ ಪರಿಹರಿಸುವಲ್ಲಿ ಫ್ಲೈಓವರ್ಗಳು ನಿಜವಾಗಿಯೂ ಸಹಾಯಕವಲ್ಲ ಎನ್ನುತ್ತಾರೆ. ಆದ್ದರಿಂದ ಸರ್ಕಾರ ಮೇಲ್ಸೇತುವೆಗಾಗಿ ದೊಡ್ಡ ಮೊತ್ತದ ಹಣ ವ್ಯಯಿಸುವ ಬದಲು, ಜನರು ಸಾರ್ವಜನಿಕ ಸಾರಿಗೆ ಅವಲಂಬಿಸುವಂತೆ ಯೋಜನೆ ರೂಪಿಸಿ ಅದಕ್ಕೆ ಹಣ ಹೂಡಿಕೆ ಮಾಡಬೇಕು ಎಂದರು.