2ಜಿ ಹಗರಣ ಯುಪಿಎ ನಂಬಿಕಾರ್ಹತೆ ಧ್ವಂಸ ಮಾಡಿತು : ದಿನೇಶ್ ಗುಂಡೂರಾವ್
ಬೆಂಗಳೂರು, ಡಿಸೆಂಬರ್ 21 : "ದೇಶದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರುಪಾಯಿಯಷ್ಟು ನಷ್ಟವಾಗಿದೆ ಎಂದು ಮಾಜಿ ಮಹಾ ಲೆಕ್ಕ ಪರಿಶೋಧಕ ವಿನೋದ್ ರೈ ಅವರು ಕೋಲಾಹಲವೆಬ್ಬಿಸುವಂಥ ವರದಿ ನೀಡಿದ್ದ ಯುಪಿಎ ಸರಕಾರದ ನಂಬಿಕಾರ್ಹತೆಯನ್ನೇ ಧ್ವಂಸ ಮಾಡಿತು."
2ಜಿ ಸ್ಪೆಕ್ಟ್ರಂ: ಎಲ್ಲಾ ಆರೋಪಿಗಳು ಖುಲಾಸೆ, ಯಾರು, ಏನು ಹೇಳಿದರು?
ಹೀಗೆಂದು 2ಜಿ ತರಂಗಗುಚ್ಛ ಹಗರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಿ ಸಿಬಿಐ ವಿಶೇಷ ನ್ಯಾಯಾಲಯ, ಡಿಸೆಂಬರ್ 21ರಂದು ಮಹತ್ವದ ತೀರ್ಪು ನೀಡಿದ ನಂತರ ಹೇಳಿಕೆ ನೀಡಿದವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಎಐಸಿಸಿ ರಾಷ್ಟ್ರೀಯ ವಕ್ತಾರರಾಗಿರುವ ದಿನೇಶ್ ಗುಂಡೂರಾವ್ ಅವರು.
2ಜಿ ಹಗರಣದಲ್ಲಿ ಡಿಎಂಕೆ ಪಕ್ಷದ ನಾಯಕ, ಮಾಜಿ ಟೆಲಿಕಾಂ ಸಚಿವ ಎ ರಾಜಾ, ಕನ್ನಿಮೋಳಿ ಮತ್ತಿತರರು ಭ್ರಷ್ಟಾಚಾರವೆಸಗಿದ್ದಾರೆ ಎಂದು ನಿರೂಪಿಸುವಲ್ಲಿ ಜಾರಿ ನಿರ್ದೇಶನಾಲಯವಾಗಲಿ, ಸಿಬಿಐ ಅಧಿಕಾರಿಗಳಾಗಲಿ ವಿಫಲವಾಗಿದ್ದರಿಂದ ಅವರೆಲ್ಲರನ್ನು ಕೋರ್ಟ್ ನಿರ್ದೋಷಿಯನ್ನಾಗಿ ಸಾರಿದೆ.
ದೇಶದ ಬೊಕ್ಕಸಕ್ಕೆ ಅಷ್ಟೊಂದು ನಷ್ಟವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಯುಪಿಎ ಸರಕಾರದ ನಂಬಿಕಾರ್ಹತೆಗೆ ಭಾರೀ ಪೆಟ್ಟು ಬಿದ್ದಿದ್ದು ಮಾತ್ರವಲ್ಲ, ಅದು 2014ರಲ್ಲಿ ನಡೆದ ಲೋಕಸಭಾ ಚುನಾವಣೆಯ ಮೇಲೆಯೂ ಭಾರೀ ದುಷ್ಪರಿಣಾಮ ಬೀರಿತು ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು.
2ಜಿ ಸ್ಪೆಕ್ಟ್ರಂ, ಏನಿದು ಹಗರಣ? ಇಲ್ಲಿದೆ ಟೈಮ್ ಲೈನ್
2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಜಯಗಳಿಸಿ, ಬಿಜೆಪಿ ಏಕಾಂಗಿಯಾಗಿ 282 (ಎನ್ಡಿಎ ಒಟ್ಟಾರೆ 336) ಸ್ಥಾನ ಗಳಿಸಿದ್ದರೆ, ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಮಾತ್ರ ಗಳಿಸಿ, ಹೀನಾಯವಾಗಿ ಸೋತಿತ್ತು.
ಕಾಂಗ್ರೆಸ್ ಪಕ್ಷದ ಮೇಲೆ 2ಜಿ ಹಗರಣ ಸೇರಿದಂತೆ ಇತರ ಹಗರಣಗಳ ಸುಳ್ಳು ಆರೋಪ ಹೊರಿಸಿದ್ದರಿಂದ ಚುನಾವಣೆಯಲ್ಲಿ ಸೋಲಬೇಕಾಯಿತು ಎಂಬುದು ದಿನೇಶ್ ಗುಂಡೂರಾವ್ ಅವರ ಮಾತಿನ ಅರ್ಥ.