ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀಗಳ "ರಾಮಾಯಣ ಚಾತುರ್ಮಾಸ್ಯ"
ಬೆಂಗಳೂರು, ಜೂನ್ 5: ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 26ನೇ ಚಾತುರ್ಮಾಸ ಬೆಂಗಳೂರಿನ ಗಿರಿನಗರದ ಶಾಖಾಮಠ ಆವರಣದಲ್ಲಿ ನಡೆಯಲಿದೆ.
ಜುಲೈ 16ರಂದು ಆರಂಭವಾಗುವ ಚಾತುರ್ಮಾಸ ಸೆಪ್ಟೆಂಬರ್ 14ರಂದು ಸಂಪನ್ನವಾಗಲಿದ್ದು, ಈ ಬಾರಿಯ ಚಾತುರ್ಮಾಸಕ್ಕೆ "ರಾಮಾಯಣ ಚಾತುರ್ಮಾಸ್ಯ" ಎಂದು ಹೆಸರಿಸಲಾಗಿದೆ. ಸೆಪ್ಟೆಂಬರ್ 14ರಂದು ಶನಿವಾರ ಸೀಮೋಲ್ಲಂಘನ ನಡೆಯಲಿದೆ.
ನರಕ ಸದೃಶ ಮನವನ್ನು ನಾಕವಾಗಿಸಲು ಶಂಕರರು ಬೇಕು: ರಾಘವೇಶ್ವರ ಶ್ರೀ
ಈ ಕುರಿತಾಗಿ ಬೆಂಗಳೂರಿನ ಪದಾಧಿಕಾರಿಗಳು ಹಾಗೂ ಶಿಷ್ಯಭಕ್ತರು ಶ್ರೀಗಳಿಗೆ ಫಲ ಸಮರ್ಪಣೆ ಮಾಡಿ, ಬೆಂಗಳೂರಿನಲ್ಲಿ ಚಾತುರ್ಮಾಸ್ಯವ್ರತ ಕೈಗೊಳ್ಳುವಂತೆ ನಿವೇದಿಸಿದರು.
ಶ್ರೀಗಳು ಸನ್ಯಾಸ ಸ್ವೀಕರಿಸಿ 25 ವರ್ಷಗಳನ್ನು ಪೂರೈಸಿದ್ದು, ಈ ಬಾರಿ 26ನೇ ವರ್ಷದ ಚಾತುರ್ಮಾಸವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲು ಶ್ರೀಮಠದ ಶಿಷ್ಯರು ಹಾಗೂ ಭಕ್ತರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ.
25 ರ ರಜತ ವರ್ಷ ಪೂರೈಸಿ, ಸ್ವರ್ಣ ವರ್ಷದೆಡೆಗೆ ಪಾದಾರ್ಪಣೆ ಮಾಡುವುದು ಈ ವರ್ಷದ ವಿಶೇಷವಾಗಿದೆ. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ ಚಾತುರ್ಮಾಸ ಸಮಿತಿ ರಚನೆಯಾಗಿದ್ದು, ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ.