ಬೆಂಗಳೂರಿನ ಶೇ 25ರಷ್ಟು ಕಂಟೈನ್ಮೆಂಟ್ ಝೋನ್ ಅಪಾರ್ಟ್ಮೆಂಟ್ಗಳು!
ಬೆಂಗಳೂರು, ಆಗಸ್ಟ್ 03; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಸೋಂಕು ಹರಡುವಿಕೆ ತಡೆಯಲು ಸೋಂಕಿತರ ಮನೆಯನ್ನು ಬಿಬಿಎಂಪಿ ಸೀಲ್ಡೌನ್ ಮಾಡುತ್ತಿದೆ. ನಗರದ ಶೇ 25ರಷ್ಟು ಕಂಟೈನ್ಮೆಂಟ್ ಝೋನ್ ಅಪಾರ್ಟ್ಮೆಂಟ್ಗಳಾಗಿವೆ ಎಂಬ ಮಾಹಿತಿ ಸಿಕ್ಕಿದೆ.
ಪ್ರಸ್ತುತ ಬೆಂಗಳೂರು ನಗರದಲ್ಲಿ 136 ಕಂಟೈನ್ಮೆಂಟ್ ಝೋನ್ಗಳಿವೆ. ಇವುಗಳಲ್ಲಿ ಶೇ 25 ಅಪಾರ್ಟ್ಮೆಂಟ್ಗಳಾಗಿವೆ. ಅಲ್ಲಿ ಜನಸಂದಣಿ ಹೆಚ್ಚಿದ್ದು, ಕೋವಿಡ್ ಸೋಂಕು ಹರಡುವ ಸಾಧ್ಯತೆ ಸಹ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಲ್ಲಿ ಕೋವಿಡ್ ಪ್ರಕರಣ ದಿಢೀರ್ ಹೆಚ್ಚಳ; ಬಿಬಿಎಂಪಿ ಅಲರ್ಟ್
ಅಪಾರ್ಟ್ಮೆಂಟ್ಗಳಲ್ಲಿ ಪತ್ತೆಯಾದ ಹೊಸ ಕೋವಿಡ್ ಪ್ರಕರಣಗಳಲ್ಲಿ ಅನೇಕರು ಅಂತರರಾಜ್ಯ ಪ್ರಯಾಣ ಮಾಡಿದವರು. ಅಪಾರ್ಟ್ಮೆಂಟ್ಗಳಲ್ಲಿ ಸೋಂಕು ಬೇಗನೆ ಹಬ್ಬಬಹುದು ಎಂದು ತಜ್ಞರು ಸಹ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಂಖ್ಯೆ ಕುಸಿತ; ಕೇರ್ ಸೆಂಟರ್ ಮುಚ್ಚಿದ ಬಿಬಿಎಂಪಿ
ನಗರದ ಪಶ್ಚಿಮ ಭಾಗದಲ್ಲಿರುವ ಅಪಾರ್ಟ್ಮೆಂಟ್ಗಳಲ್ಲಿ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಶನಿವಾರ 35 ಕಂಟೈನ್ಮೆಂಟ್ ಝೋನ್ಗಳಿದ್ದವು, ಇವುಗಳಲ್ಲಿ 13 ಅಪಾರ್ಟ್ಮೆಂಟ್ಗಳಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಬಿಬಿಎಂಪಿ ಲಸಿಕಾ ವಾಹನಕ್ಕೆ ಚಾಲನೆ; ವಿಶೇಷತೆಗಳು
ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳಿರುವ 4 ಝೋನ್ ಗುರುತಿಸಲಾಗಿದೆ, ಇವುಗಳು ಅಪಾರ್ಟ್ಮೆಂಟ್ಗಳಾಗಿವೆ. ಯಲಹಂಕ ವಲಯದಲ್ಲಿ 2, ಮಹದೇವಪುರ, ಪಶ್ಚಿಮ ವಲಯದಲ್ಲಿ 2 ಅಪಾರ್ಟ್ಮೆಂಟ್ಗಳಲ್ಲಿ ಸೋಂಕು ಪತ್ತೆಯಾಗಿದೆ.
ಭಾನುವಾರ ಯಶವಂತಪುರದ ಅಪಾರ್ಟ್ಮೆಂಟ್ವೊಂದರಲ್ಲಿ 21 ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಸೋಂಕು ಪತ್ತೆಯಾದ ಬ್ಲಾಕ್ನಲ್ಲಿರುವ ಎಲ್ಲಾ ಮನೆಗಳನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್ಡೌನ್ ಮಾಡಿದ್ದರು.
ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ. ರಣದೀಪ್ ಈ ಕುರಿತು ಮಾತನಾಡಿದ್ದಾರೆ, "ಅಪಾರ್ಟ್ಮೆಂಟ್ನಲ್ಲಿ ಕೋವಿಡ್ ಸೋಂಕು ಪತ್ತೆಯಾಗುತ್ತಿರುವ ಕುರಿತು ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಕೇಸ್ ಪತ್ತೆಯಾದರೆ ಅಲ್ಲಿನ ನಿವಾಸಿಗಳ ಸಂಘ ಬಿಬಿಎಂಪಿಗೆ ಮಾಹಿತಿ ನೀಡಲಿದೆ" ಎಂದರು.
ಅಂತರರಾಜ್ಯ ಪ್ರವಾಸ ಮಾಡಿ ಬಂದ ಜನರಿಂದ ಸೋಂಕು ಹರಡುತ್ತಿದೆ. ಆದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ವಾರಂಟೈನ್ ನಿಯಮಗಳನ್ನು ಪರಿಷ್ಕರಣೆ ಮಾಡಿದೆ. ಒಂದು ವೇಳೆ ಕೋವಿಡ್ ನೆಗೆಟಿವ್ ವರದಿ ಇಲ್ಲದೇ ಬೆಂಗಳೂರಿಗೆ ಆಗಮಿಸಿದರೆ ಕೇರಳ ಮತ್ತು ಮಹಾರಾಷ್ಟ್ರದ ಜನರು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿರಬೇಕು ಎಂದು ಹೇಳಿದೆ.
ಸೋಮವಾರದಿಂದಲೇ ಜಾರಿಗೆ ಬರುವಂತೆ ಬಿಬಿಎಂಪಿ ಸಾಂಸ್ಥಿಕ ಕ್ವಾರಂಟೈನ್ ನಿಯಮವನ್ನು ಬಿಗಿಗೊಳಿಸಿದೆ. ಆರ್ಟಿಪಿಸಿಆರ್ ವರದಿ ಇಲ್ಲದೇ ಕೇರಳ, ಮಹಾರಾಷ್ಟ್ರದಿಂದ ಬೆಂಗಳೂರು ನಗರಕ್ಕೆ ಬರುವ ಜನರು ಅವರ ಕೋವಿಡ್ ಪರೀಕ್ಷೆ ವರದಿ ಬರುವ ತನಕ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿರಬೇಕು.
ಕೋವಿಡ್ 1 ಮತ್ತು 2ನೇ ಅಲೆ ಸಂದರ್ಭದಲ್ಲಿ ಬಿಬಿಎಂಪಿ ಮದುವೆ ಹಾಲ್, ಹೋಟೆಲ್ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಿತ್ತು. ಈ ಬಾರಿ ಬಿಬಿಎಂಪಿ ಯಾವ ವ್ಯವಸ್ಥೆ ಮಾಡಲಿದೆ? ಎಂದು ಕಾದು ನೋಡಬೇಕಿದೆ. ಗಡಿಗಳಲ್ಲಿ ಆರ್ಟಿಪಿಸಿಆರ್ ವರದಿ ಇಲ್ಲದ ಜನರನ್ನು ವಾಪಸ್ ಕಳಿಸುವ ಕೆಲಸ ಸಹ ಮಾಡಲಾಗುತ್ತಿದೆ.
ನಗರದ ವಿವಿಧ ವಲಯಗಳಲ್ಲಿರುವ ಕೋವಿಡ್ ಕೇರ್ ಸೆಂಟರ್ಗಳನ್ನು ಬಿಬಿಎಂಪಿ ಇನ್ನೂ ಮುಚ್ಚಿಲ್ಲ. ಇವುಗಳಲ್ಲಿ ಯಾವುದೇ ಕೋವಿಡ್ ಸೋಂಕಿತರು ಸಹ ಈಗ ದಾಖಲಾಗಿಲ್ಲ. ಇವುಗಳನ್ನು ಅಂತರರಾಜ್ಯದಿಂದ ಬರುವ ಪ್ರಯಾಣಿಕರ ಸಾಂಸ್ಥಿಕ ಕ್ವಾರಂಟೈನ್ಗೆ ಬಳಕೆ ಮಾಡಿಕೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ.
"ನಮ್ಮ ವಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ಗಾಗಿ ಇನ್ನು ಸಹ ಸ್ಥಳವನ್ನು ನಿಗದಿ ಮಾಡಿಲ್ಲ. ಅಧಿಕಾರಿಗಳು ನೀಡುವ ಸೂಚನೆಗಾಗಿ ಕಾಯುತ್ತಿದ್ದೇವೆ" ಎಂದು ದಕ್ಷಿಣ ವಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೋಮವಾರ ಬೆಂಗಳೂರು ನಗರದಲ್ಲಿ 290 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಪ್ರಕರಣಗಳ ಸಂಖ್ಯೆ ಇಳಿಮುಖಗೊಂಡಿದೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 8670 ಆಗಿದೆ. ನಗರದಲ್ಲಿ ಇದುವರೆಗೂ 15,885 ಜನರು ಮೃತಪಟ್ಟಿದ್ದಾರೆ.
Recommended Video