ಹೃದಯ ದಾನ ಮಾಡಿ ಮರುಜೀವ ಕೊಟ್ಟ 23ರ ಯುವಕ
ಬೆಂಗಳೂರು, ಆಗಸ್ಟ್ 29 : ಬೆಂಗಳೂರು ನಗರದಲ್ಲಿ ಮತ್ತೊಂದು ಜೀವಂತ ಹೃದಯ ಮಿಡಿದಿದೆ. ಮಹಾರಾಷ್ಟ್ರ ಮೂಲದ 23 ವರ್ಷದ ಯುವಕ ಹೃದಯ ದಾನ ಮಾಡಿದ್ದು, ಮತ್ತೊಂದು ಜೀವಕ್ಕೆ ಆಸರೆಯಾಗಿದ್ದಾರೆ. ನಾರಾಯಣ ಹೃದಯಾಲಯದಲ್ಲಿ 23 ವರ್ಷದ ಯುವಕನ ಹೃದಯವನ್ನು 32 ವರ್ಷದ ರೋಗಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಜೀವಂತ ಹೃದಯ ಹೆಬ್ಬಾಳದ ಆಸ್ಟರ್ ಸಿ.ಎಮ್.ಐ ಆಸ್ಪತ್ರೆಯಿಂದ, ಬೊಮ್ಮಸಂದ್ರದಲ್ಲಿರುವ ನಾರಾಯಣ ಹೆಲ್ತ್ ಸಿಟಿಗೆ 57 ನಿಮಿಷದಲ್ಲಿ ಬಂದು ತಲುಪಿತು.
ವೃದ್ಧೆಗೆ ಪುನರ್ಜನ್ಮ ನೀಡಿದ ಬೇಲೂರು ಮಹಿಳೆಯ ಹೃದಯ
ಆಗಸ್ಟ್ 22ರಂದು ಕೆ.ಆರ್.ಪುರಂ ಬಳಿ ನಡೆದ ಅಪಘಾತದಲ್ಲಿ 23ವರ್ಷದ ಯುವಕ ಗಾಯಗೊಂಡಿದ್ದ. ಹೆಬ್ಬಾಳದ ಆಸ್ಟರ್ ಸಿ.ಎಮ್.ಐ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಆಗಸ್ಟ್ 27ರಂದು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಹೇಳಿದರು. ನಂತರ ಪೋಷಕರು ಅಂಗಾಗ ದಾನ ಮಾಡಲು ಒಪ್ಪಿಗೆ ಕೊಟ್ಟರು.
ನಾರಾಯಣ ಹೆಲ್ತ್ ಸಿಟಿಯಲ್ಲಿ ಡಿಲೇಟೆಡ್ ಕಾರ್ಡಿಯೋ ಮಯೋಪತಿ ಎಂಬ ಹೃದಯ ತೊಂದರೆಯಿಂದ ಬಳಲುತ್ತಿದ 32 ವರ್ಷದ ವ್ಯಕ್ತಿಗೆ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ವಾರಂತ್ಯದ ರಜೆಗಳು, ಬೆಂಗಳೂರಿನ ಸಂಚಾರ ದಟ್ಟಣೆಯ ನಡುವೆಯೂ ಗ್ರೀನ್ ಕಾರಿಡಾರ್ ಮೂಲಕ ಜೀವಂತ ಹೃದಯ 57 ನಿಮಿಷದಲ್ಲಿ ಆಸ್ಪತ್ರೆ ತಲುಪಲು ಸಂಚಾರಿ ಪೊಲೀಸರು ಸಹಕಾರ ನೀಡಿದರು.
ಚೆನ್ನೈ ವ್ಯಕ್ತಿಯ ಜೀವ ಉಳಿಸಿದ ಬೆಂಗಳೂರು ಮಹಿಳೆಯ ಹೃದಯ!
ವೈದ್ಯರ ತಂಡ : ಯುವಕನ ದೇಹದಿಂದ ಹೃದಯ ಮರು ಪಡೆಯುವಿಕೆ ಶಸ್ತ್ರಚಿಕಿತ್ಸೆಯನ್ನು ನಾರಾಯಣ ಹೆಲ್ತಿ ಸಿಟಿಯ ಡಾ. ಜುಲಿಯೆಸ್ ಪುನ್ನೆನ್ ಮತ್ತು ಡಾ. ರವಿಶಂಕರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಸಲಾಯಿತು. ಹೃದಯ ಕಸಿ ಶಸ್ತ್ರ ಚಿಕಿತ್ಸೆಯನ್ನು ಡಾ. ಜುಲಿಯೆಸ್ ಪುನ್ನೆನ್, ಡಾ. ವರುಣ್ ಶೆಟ್ಟಿ ಮುಂತಾದ ವೈದ್ಯರ ತಂಡ ಮಾಡಿದೆ.