ಬಿ.ಡಿ.ಹಿರೇಮಠ ಸೇರಿ 2 ಸಾವಿರ ಬೇಡ ಜಂಗಮರು ಪೊಲೀಸ್ ವಶಕ್ಕೆ
ಬೆಂಗಳೂರು ಜು.5: ಸಾಂವಿಧಾನಿಕ ಹಕ್ಕಿಗಾಗಿ ನಗರದಲ್ಲಿ ಆರಂಭವಾಗಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಿ.ಡಿ ಹಿರೇಮಠ ಹಾಗೂ ಸುಮಾರು ಎರಡು ಸಾವಿರ ಪ್ರತಿಭಟನಾಕಾರರನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ರಾಜ್ಯದ ಬೇಡ ಜಂಗಮರಿಗೆ ಸಂವಿಧಾನಿಕವಾಗಿ ಸಿಗಬೇಕಾದ ಜಾತಿ ಪ್ರಮಾಣ ನೀಡುವುದು ಮತ್ತು ಜಾತಿ ಪ್ರಮಾಣ ಪತ್ರ ವಿತರಣೆ ವ್ಯವಸ್ಥೆ ಸರಳೀಕರಣ ಮಾಡುವಂತೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೇಡ ಜಂಗಮರು ಪ್ರತಿಭಟನೆ ನಡೆಸುತ್ತಿದ್ದರು. ಜೂ.30ರಂದು ರಾಜ್ಯದ ವಿವಿಧ ಮೂಲೆಗಳಿಂದಲೂ ಬೇಡ ಜಂಗಮ ಸಮುದಾಯದ ನಾಯಕರು, ಮಠಾಧೀಶರು ರಾಜಧಾನಿಗೆ ಆಗಮಿಸಿದ್ದರು. ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಿ.ಡಿ ಹಿರೇಮಠ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಕಳೆದ ಆರು ದಿನಗಳಿಂದಲೂ ರಾಜ್ಯ ಸರ್ಕಾರ ಪ್ರತಿಭಟನಾಕಾರರಿಗೆ ಸ್ಪಂದಿಸಿಲ್ಲ. ನೀಡಿದ ಭರವಸೆಯಂತೆ ನಡೆದುಕೊಳ್ಳದೇ 2018ರಲ್ಲಿ ಜಾತಿ ಪ್ರಮಾಣ ಪತ್ರ ಕುರಿತು ನೀಡಿದ್ದ ಆದೇಶವನ್ನೇ ಮತ್ತೆ ನೀಡಿ ಬೇಡ ಜಂಗಮರ ಆಕ್ರೋಶಕ್ಕೆ ಗುರಿಯಾಗಿತ್ತು. ನಿರ್ಲಕ್ಷಿಸುತ್ತಿರುವ ಸರ್ಕಾರದೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಲು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರತಿಭಟನಾಕಾರರು ಭೇಟಿ ಆಗಲು ತೆರಳಿದ್ದಾರೆ.
ಈ ವೇಳೆ ಬಿ.ಡಿ ಹಿರೇಮಠರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಬೇಡ ಜಂಗಮರ ವಾಗ್ವಾದ ನಡೆದಿದೆ. ಕೊನೆಗೆ ಬಿ.ಡಿ.ಹಿರೇಮಠ ಅವರ ಜತೆ ಸುಮಾರು 2 ಸಾವಿರ ಮಂದಿಯನ್ನು ಪೊಲಿಸರು ಬಂಧಿಸಿ ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ಇಡಲಾಗಿದೆ.
ಮೈದಾನದಲ್ಲೇ ಪ್ರತಿಭಟನೆ
ಬಿ.ಡಿ ಹಿರೇಮಠ ಸೇರಿದಂತೆ ಬಂಧಿತ ಎಲ್ಲ ಬೇಡ ಜಂಗಮರು ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಮಧ್ಯಾಹ್ನ ಪೊಲೀಸರು ನೀಡಿದ ಊಟ ಸೇವಿಸದೆ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಮೈದಾನದಲ್ಲೇ ಕುಳಿತು ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುತ್ತೇವೆ. ಮುಖ್ಯಮಂತ್ರಿಗಳೇ ಬಂದು ನಮ್ಮ ಸಮಸ್ಯೆ ಪರಿಹಾರ ಸೂಚಿಸಬೇಕು ಎಂದು ಪಟ್ಟು ಹಿಡಿದ್ದಾರೆ.
ಬುಧವಾರ ರಾಜ್ಯವ್ಯಾಪಿ ಪ್ರತಿಭಟನೆ
ಮೈದಾನದಲ್ಲಿ ಮುಂದುವರಿದ ಪ್ರತಿಭಟನೆ ವೇಳೆ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಿ.ಡಿ ಹಿರೇಮಠ ಮಾತನಾಡಿ, ಸರ್ಕಾರ ಬೇಡ ಜಂಗಮರ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನಗಳನ್ನು ಹತ್ತಿಕ್ಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬುಧವಾರ ರಾಜ್ಯ ಪ್ರತಿ ಜಿಲ್ಲೆಗಳಲ್ಲಿ ತಹಶೀಲ್ದಾರ ಕಚೇರಿ ಮುಂದೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಅವರು ಇದೇ ವೇಳೆ ಕರೆ ನೀಡಿದರು. ಅದರಂತೆ ನಾಳೆ ಪ್ರತಿಭಟನೆಗೆ ಬೇಡ ಜಂಗಮ ಸಂಘಟನೆಗಳು, ಮುಖಂಡರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಪ್ರತಿಭಟನೆ ನಮ್ಮ ಹಕ್ಕು
ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಪ್ರತಿಭಟಿಸುತ್ತೇವೆ. ಅದು ನಮ್ಮ ಹಕ್ಕು ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಅದೇ ರೀತಿ ಶಾಂತಿಯುತವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಮುಂದಾದೆವು. ಅಷ್ಟರಲ್ಲೇ ಪೊಲೀಸರು ನಮ್ಮನ್ನು ತಡೆದು ಬಂಧಿಸಿದ್ದಾರೆ. ಇಷ್ಟಾದರೂ ಗೃಹ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಯ ತಿಳಿದು ಸ್ಥಳಕ್ಕೆ ಬಂದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಮಾಧ್ಯಮದವರಿಗೆ ಪ್ರವೇಶ ನೀಡಿಲ್ಲ
ಬೇಡ ಜಂಗಮರನ್ನು ಬಂಧಿಸಿ ಚಾಮರಾಜಪೇಟೆಯ ಪೊಲೀಸ್ ತರಬೇತಿ ನೀಡುವ ಸಿಎಆರ್ ಮೈದಾನದಲ್ಲಿ ಇಡಲಾಗಿತ್ತು. ಈ ವೇಳೆ ವರದಿ ಮಾಡಲು ಬಂದ ಮಾಧ್ಯಮದವರನ್ನು ಸಹ ಪೊಲೀಸ್ ಅಧಿಕಾರಿಗಳು ಒಳಗಡೆ ಬಿಟ್ಟಿಲ್ಲ. ಇದನ್ನು ನೋಡಿದರೆ ಬೇಡ ಜಂಗಮರಿಗೆ ಹಕ್ಕುಗಳಿಂದ ವಂಚಿಸಲು ಹುನ್ನಾರ ನಡೆಯುತ್ತಿದೆ. ರಾಜ್ಯದಲ್ಲಿ ಸಮಾನ ಕಾನೂನು ಇಲ್ಲ. ವಾಕ್ ಸ್ವಾತಂತ್ರ್ಯವು ಇಲ್ಲ. ಸರ್ಕಾರ ಮಾಧ್ಯಮಗಳ ಧ್ವನಿ ಹತ್ತಿಕ್ಕಲು ಮುಂದಾಗಿದೆ ಎಂದು ಬಿ.ಡಿ.ಹಿರೇಮಠ ಗುಡುಗಿದರು.