ರನ್ ವೇ ಬಿಟ್ಟು ವಿಮಾನ ಓಡಿಸಿ, ಮನೆಗೆ ಹೋದ ಪೈಲಟ್ಗಳು!
ಬೆಂಗಳೂರು, ಜನವರಿ 10: ವಿಮಾನವನ್ನು ಸರಿಯಾಗಿ ರನ್ವೇನಲ್ಲಿ ಇಳಿಸದೇ ಪಕ್ಕದ ಹುಲ್ಲು ಹಾಸಿನ ಮೇಲೆ ಓಡಿಸಿದ್ದಕ್ಕೆ 'ಗೋ ಏರ್' ವಿಮಾನದ ಇಬ್ಬರು ಪೈಲಟ್ಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಕೆಲಸದಿಂದ ಅಮಾನತು ಮಾಡಿ, ಮನೆಗೆ ಕಳುಹಿಸಿದೆ.
ಕಳೆದ ವರ್ಷ ನವೆಂಬರ್ 11 ರಂದು ಬೆಂಗಳೂರು ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಘಟನೆಯನ್ನು ತನಿಖೆ ನಡೆಸಿ, ಡಿಜಿಸಿಎ ಗುರುವಾರ ಈ ಕ್ರಮ ಕೈಗೊಂಡಿದೆ. ನ 11 ರಂದು ನಾಗಪುರದಿಂದ ಬೆಂಗಳೂರಿಗೆ ಬರುತ್ತಿದ್ದ 'ಗೋ ಏರ್' ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಮಂಜು ಮುಸುಕಿದ್ದ ಕಾರಣ ರನ್ವೇ ಬಿಟ್ಟಿ ವಿಮಾನವನ್ನು ಪೈಲಟ್ಗಳು ಪಕ್ಕದ ಹುಲ್ಲು ಹಾಸಿನ ಮೇಲೆ ಓಡಿಸಿದ್ದಾರೆ.
ಬೆಂಗಳೂರಿನಿಂದ ಲಂಡನ್ಗೆ ನೇರ ವಿಮಾನ ಕಾರ್ಯಾಚರಣೆ
ವಿಮಾನ ಸರಿಯಾಗಿ ಲ್ಯಾಂಡ್ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಪೈಲಟ್ಗಳು ವಿಮಾನವನ್ನು ಹೈದರಾಬಾದ್ನತ್ತ ತಿರುಗಿಸಿ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದರು. ಅಂದು ಆ ವಿಮಾನದಲ್ಲಿ 180 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಡಿಜಿಸಿಎ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿತ್ತು. ಪೈಲಟ್ಗಳು ಮಂಜು ಮುಸುಕಿದ ವಾತಾವರಣ ಇದ್ದಾಗ ಅನುಸರಿಸ ಬೇಕಾದ ಕ್ರಮಗಳನ್ನು ಬಿಟ್ಟು, ಮನಬಂದಂತೆ ವರ್ತಿಸಿದ್ದಾರೆ. ಹೀಗಾಗಿ ಅಮಾನತು ಮಾಡಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.
ಪೈಲಟ್ ಹಾಗೂ ಕೋ ಪೈಲಟ್ನ್ನು ಘಟನೆ ನಡೆದ ದಿನದಿಂದ ಮುಂದಿನ ಆರು ತಿಂಗಳವರೆಗೆ ಅಮಾನತು ಮಾಡಲಾಗಿದೆ. ಈ ಹಿಂದೆ ಕೂಡ ಈ ಇಬ್ಬರೂ ಪೈಲಟ್ಗಳು ಅಮಾನತುಗೊಂಡಿದ್ದರು ಎಂಬುದು ತಿಳಿದು ಬಂದಿದೆ.