ಬ್ಯಾಂಕಿನಿಂದ 2.25 ಕೋಟಿ ರೂ ಮೋಸ: ಯಾವ ಬ್ಯಾಂಕ್, ನಡೆದಿದ್ದೇನು?
ಬೆಂಗಳೂರು, ಫೆಬ್ರವರಿ 17: ಬೇರೆಯವರಿಗೆ ಸೇಲ್ ಅಗ್ರಿಮೆಂಟ್ ಆಗಿರುವ ಸ್ವತ್ತನ್ನು ಇ-ಹರಾಜಿನಲ್ಲಿ ಮಾರಾಟಮಾಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.
ಈಗಾಗಲೇ ಸೇಲ್ ಅಗ್ರಿಮೆಂಟ್ ಹಾಕಿರುವ ಸ್ವತ್ತನ್ನು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸಿಬ್ಬಂದಿ ಇ-ಹರಾಜಿನಲ್ಲಿ ಮಾರಾಟ ಮಾಡಿ 2.25 ಕೋಟಿ ರೂ. ವಂಚಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
ಎಟಿಎಂನಲ್ಲಿ ಉಚಿತ ವಿತ್ ಡ್ರಾ 5 ರಿಂದ 3ಕ್ಕೆ ಇಳಿಕೆ?
ಉತ್ತರಹಳ್ಳಿ ಮುಖ್ಯರಸ್ತೆಯ ಚಿಕ್ಕಲಸಂದ್ರ ನಿವಾಸಿ ಬಾಲಕೃಷ್ಣ ಎಂಬುವವರು ವಂಚನೆಗೆ ಒಳಗಾದವರು. ಅವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮೋದಿ, ರಹೇಜಾ ಟವರ್ ಶಾಖೆಯ ವ್ಯವಸ್ಥಾಪಕ ಮುರಳಿ, ಸಿಬ್ಬಂದಿಯಾದ ಮಿರ್ಚಿ ವಿಕ್ಟರ್ , ಮನೋಹರ್ ಹಾಗೂ ರವಿ ಕುಮಾರ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನವರು ಎಂಬಿ ರಸ್ತೆಯಲ್ಲಿನ ರಹೇಜಾ ಟವರ್ ಕಟ್ಟಡದ 26 ಮತ್ತು 27 ಸಂಖ್ಯೆಯಲ್ಲಿರುವ ಸ್ವತ್ತನ್ನು ಬಹಿರಂಗ ಹರಾಜು ಹಾಕಿದ್ದರು. ಈ ವಿಚಾರ ತಿಳಿದ ಬಾಲಕೃಷ್ಣ ಅವರು ಕಳೆದ ವರ್ಷ ಮೇ 20 ರಂದು ಆನ್ಲೈನ್ ಮೂಲಕ 2.25 ಕೋಟಿಗೆ ಇ-ಹರಾಜು ಕೂಗಿದ್ದರು.
ಈ ಪೈಕಿ ಗೊತ್ತುಪಡಿಸಿದ ಹಣದ ಪೈಕಿ 50 ಲಕ್ಷ ಹಣವನ್ನು ಆರ್ಟಿಜಿಎಸ್ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಜಮೆ ಮಾಡಿದ್ದರು. ಉಳಿದ 1.50 ಕೋಟಿ ಹಣವನ್ನು ಫೆ.3ರಂದು ಜಮೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕರು ಹಾಗೂ ಇತರೆ ಆರೋಪಿಗಳು ಸೇಲ್ ಸರ್ಟಿಫಿಕೇಟ್ ನೀಡಿದ್ದರು.
ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ವತ್ತನ್ನು ನೋಂದಾಯಿಸಿಕೊಳ್ಳುವ ಸಲುವಾಗಿ ವಿಚಾರಣೆ ಮಾಡಲು ರಾಮಕೃಷ್ಣ ಅವರು ತೆರಳಿದ್ದರು.ಬ್ಯಾಂಕಿಗೆ ಸಂಬಂಧಪಟ್ಟ ಮನೋಹರ್ ಎನ್ನುವ ವ್ಯಕ್ತಿ ರವಿಕುಮಾರ್ ಎಂಬ ವ್ಯಕ್ತಿಗೆ ಸೇಲೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ ಎನ್ನುವ ವಿಷಯ ತಿಳಿದಿತ್ತು. ಆಗ ವಂಚನೆ ಮಾಡಿರುವುದು ಬೆಳಕಿಗೆ ಬಂದು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.