ವಿಷ್ಣುಸಹಸ್ರನಾಮದ ಮಹಿಮೆ ಅಪಾರ: ಡಾ ಅರಳುಮಲ್ಲಿಗೆ ಪಾರ್ಥಸಾರಥಿ
ಬೆಂಗಳೂರು, ಜನವರಿ 03: ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್ ನ 19ನೇ ವರ್ಷದ ಪ್ರವಚನ ವಾಹಿನಿಯ ಶುಭಾರಂಭವು ವಿಷ್ಣು ಸಹಸ್ರನಾಮ ತರಂಗಗಳನ್ನು ದೇಶಾದ್ಯಂತ ಹಾಗೂ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಪ್ರಸರಿಸುತ್ತಿರುವ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೇಡರೇಷನ್ನ ಸಂಸ್ಥಾಪಕರಾದ ವಿಷ್ಣುಸಹಸ್ರನಾಮ ವಿಚಕ್ಷಣ, ಅಂತರಾಷ್ಟ್ರೀಯ ಖ್ಯಾತಿಯ ವಿದ್ವಾಂಸ, ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ರವರು ಚಾಲನೆ ನೀಡಿ ಮಾತನಾಡಿದ್ದರು.
ಜಗತ್ತಿನ ಲಕ್ಷಲಕ್ಷ ಜನರ ಬದುಕಿಗೆ ಅಮೃತಸ್ಪರ್ಶ ಮಾಡಿಸಿದ ಮಹಾಮಂತ್ರ ವಿಷ್ಣುಸಹಸ್ರನಾಮ.ಯಾರು ಈ ವಿಷ್ಣುಸಹಸ್ರನಾಮ ಹೇಳುವರೋ, ಕೇಳುವರೋ ಅಂತಹವರಿಗೆ ಇಹದಲ್ಲಿ, ಪರದಲ್ಲಿ ಎಂದಿಗೂ ಅಶುಭ, ಅಮಂಗಳವೆನ್ನುವುದೇ ಇಲ್ಲ. ಇದರ ಪಾರಾಯಣದಿಂದ ಯಶಸ್ಸು, ಶ್ರೇಯಸ್ಸು, ಲಭ್ಯ. ಎಲ್ಲ ತಾಪತ್ರಯ, ಭಯಗಳೂ ನಿವಾರಣೆಯಾಗುತ್ತವೆ. ಆರೋಗ್ಯ, ಕಾಂತಿ, ಬಲ, ಸೌಂದರ್ಯ, ಹೆಚ್ಚುತ್ತದೆ. ಅಂತಃಕರಣ ಶುದ್ಧವಾಗುತ್ತದೆ.
ಹನುಮ ಜಯಂತಿ ಜತೆ ರಾಗಿಗುಡ್ಡ ದೇಗುಲದ ಸುವರ್ಣ ಸಂಭ್ರಮ
ಶ್ರದ್ಧೆ ಭಕ್ತಿಯಿಂದ ವಿಷ್ಣು ಸಹಸ್ರನಾಮ ಪಾರಾಯಣದಿಂದ ಸುಖ, ಕ್ಷಮೆ, ಸಂಪತ್ತು, ಧೈರ್ಯ, ಸ್ಮೃತಿ, ಕೀರ್ತಿಗಳನ್ನು ಹೊಂದುತ್ತಾರೆ. ಶೀಘ್ರದಲ್ಲಿ ಎಲ್ಲ ನೋವು, ಸಂಕಟಗಳಿಂದ ಪಾರಾಗುತ್ತಾರೆ. ಶಾಂತಿ, ಸಮಾಧಾನ, ಧ್ಯಾನ, ನೆಮ್ಮದಿ, ದಯೆ, ತ್ಯಾಗ ಪ್ರೇಮ ಅವರಿಗೆ ಲಭಿಸುತ್ತವೆ. ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೇಧಾಶಕ್ತಿ, ಧೃತಿ, ಸ್ಥಿತಿ, ಬಲ, ಶ್ರವಣ, ಮನನ, ಶೀಲ, ವಿನಯ, ವಿದ್ಯೆ, ನೆಮ್ಮದಿ, ಮನಶ್ಶಾಂತಿ ಇವಿಷ್ಟು ವಿಷ್ಣುಸಹಸ್ರನಾಮದ ಪಾರಾಯಣ ಮಾಡುವುದರಿಂದ ಲಭ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಗರದ ಜಯನಗರ 9ನೇ ಬ್ಲಾಕ್ನಲ್ಲಿರುವ ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ಮಂದಿರದಲ್ಲಿ ಜನವರಿ 7 ರವರೆಗೆ ಪ್ರತಿದಿನ ಸಂಜೆ 6 ರಿಂದ 6.30 ರವರೆಗೆ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಸಂಜೆ 6.30 ರಿಂದ 8 ರವರೆಗೆ ವಿಷ್ಣುಸಹಸ್ರನಾಮದ ವಿಶಿಷ್ಟ ಚಿಂತನೆಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾಮೂಹಿಕ ಪಾರಾಯಣ ನಡೆಯುವ ಸ್ಥಳದಲ್ಲಿ ಸಕಾರಾತ್ಮಕ ತರಂಗಗಳು ಸುತ್ತಲಿನ ವಾತಾವರಣವನ್ನು ಶುದ್ಧಿಗೊಳಿಸಿ ದೈವಿಕ ಆನಂದದ ಅನುಭವ ತರುವ ಈ ಸತ್ಸಂಗ ಕಾರ್ಯಕ್ರಮಕ್ಕೆ ಆಧ್ಯಾತ್ಮಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೇಡರೇಷನ್ ಸೆಕ್ರೇಟರಿ ಜನರಲ್ ಭಾನುಪ್ರಕಾಶ್ ರವರು ತಿಳಿಸಿದ್ದಾರೆ.