ಖೋಡೆಸ್ ಕಂಪನಿಗೆ ಪ್ರಚಾರದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ನಾಮ !
ಬೆಂಗಳೂರು, ಮಾರ್ಚ್, 01 : ಐಟಿ ದಾಳಿಗೆ ತುತ್ತಾಗಿದ್ದ ಖೋಡೆಸ್ ಕಂಪನಿಯ ಮತ್ತೊಂದು ಕರ್ಮಕಾಂಡ ಹೊರಗೆ ಬಿದ್ದಿದೆ. ಕಂಪನಿ ಬ್ರಾಂಡಿಂಗ್ ಹೆಸರಿನಲ್ಲಿಖೋಡೆಸ್ ಕಂಪನಿಗೆ ಕೋಟಿ ಕೋಟಿ ನಾಮ ಹಾಕಿದ್ದಾರೆ. ಕಂಪನಿಯ ನಿರ್ದೇಶಕರು ಎಸಗಿರುವ ಈ ಮೋಸದ ಬಗ್ಗೆ ಕಂಪನಿ ನಿರ್ದೇಶಕರೊಬ್ಬರು ಶೇಷಾದ್ರಿಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇತ್ತೀಚೆಗೆ ಐಟಿ ದಾಳಿಗೆ ಒಳಗಾಗಿದ್ದ ಖೋಡೆಸ್ ಒಡೆತನದ ಕಂಪನಿಗಳು ಮತ್ತು ಮಾಲೀಕರಿಂದ 878 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಹೊರಗೆ ಬಿದ್ದಿತ್ತು. ದೇಶದ 26 ಕಡೆ ಐಟಿ ದಾಳಿ ನಡೆದಿತ್ತು. ಖೋಡೆಸ್ ಕಂಪನಿ ಮಾಲೀಕ ಹರಿ ಖೋಡೆ ಮನೆ ಸೇರಿದಂತೆ ಎಲ್ಲೆಲ್ಲೂ ಐಟಿ ಅಧಿಕಾರಿಗಳು ಶೋಧ ನಡೆಸಿದ್ದರು.
ಐಟಿ ದಾಳಿ ಪ್ರಕರಣ: ಖೋಡೆಸ್ ಕಂಪನಿಗಳ 878.8 ಕೋಟಿ ಅಕ್ರಮ ಆಸ್ತಿ ಪತ್ತೆ
ಖೋಡೆಸ್ ಕಂಪನಿಯ ಪ್ರಚಾರದ ಹೆದರಿನಲ್ಲಿ 17 ಕೋಟಿ ರೂಪಾಯಿ ವೆಚ್ಚ ಮಾಡಿರುವ ಸಂಗತಿ ಅಡಿಟ್ ವೇಳೆ ಬೆಳಕಿಗೆ ಬಂದಿದೆ. ಆದರೆ, ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ದಾಖಲೆಗಳನ್ನು ಸಲ್ಲಿಸಿ ಖೋಡೆಸ್ ಕಂಪನಿಯ ಹದಿನೇಳು ಕೋಟಿ ಹಣವನ್ನು ಪಡೆದಿರುವ ಸಂಗತಿ ಹೊರ ಬಿದ್ದಿದೆ. ಈ ಕುರಿತು ಖೋಡೆಸ್ ಕಂಪನಿಯ ಪಾಲುದಾರ ಬ್ರಿಜ್ ಮೋಹನ್ ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಅಕ್ರಮ: ಫಾರಿನ್ ಮದ್ಯ ತಯಾರಿಸುವಲ್ಲಿ ಖ್ಯಾತಿ ಪಡೆದಿರುವ ಖೋಡೆಸ್ ಈಶ್ವರಾಸ್ ಅಂಡ್ ಸನ್ಸ್ ಕಂಪನಿ ಅವೆನ್ಯೂ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದೆ. ಕಂಪನಿಯ ಮಾರ್ಕೆಂಟಿಂಗ್, ಸೇಲ್ಸ್, ಕಲೆಕ್ಷನ್ ಫೈನಾನ್ಸ್ ಮತ್ತಿತರ ಕೆಲಸಗಳನ್ನು ನಿರ್ದೇಶಕರಾದ ಪದ್ಮನಾಭಸಾ, ಆತನ ಪುತ್ರ ಘನಶ್ಯಾಮ್, ರಾಮಚಂದ್ರ ಸಿಂಗ್ರಿ ಸೇರಿಕೊಂಡು ಕಂಪನಿಯ ಪ್ರಚಾರ ಇತರೆ ಕೆಲಸಗಳಿಗಾಗಿ 17 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ.
Recommended Video
ದಾಖಲೆ ಪರಿಶೀಲನೆ ನಡೆಸಿದಾಗ ಧರ್ಮೇಂದ್ರ ಎಂಬ ವ್ಯಕ್ತಿಯ ಜತೆ ಶಾಮೀಲಾಗಿ ಸುರಭಿ ಎಂಟರ್ ಪ್ರೈಸಸ್ ಹೆಸರಿನಲ್ಲಿ ಒಡಂಬಡಿಕೆ ಮಾಡಿಕೊಂಡು ಅಕ್ರಮ ಎಸಗಿರುವುದು ಕಂಡು ಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 17 ಕೋಟಿ ರೂಪಾಯಿ ಯಾಮಾರಿಸಿ ಸುಳ್ಳು ಲೆಕ್ಕ ನೀಡಿರುವುದು ಕಂಡು ಬಂದಿದೆ. ಈ ಕುರಿತು ಖೋಡೆಸ್ ಕಂಪನಿ ನಿರ್ದೇಶಕ ಪದ್ಮನಾಭಸಾ, ಆತನ ಪುತ್ರ ಘನಶ್ಯಾಮ್, ಸುರಭಿ ಎಂಟರ್ ಪ್ರೈಸಸ್ ನ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ ಉತ್ಪಾದನೆ, ಪ್ರಚಾರದ ಹೆಸರಿನಲ್ಲಿ ಹಣ ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಶೇಷಾದ್ರಿಪುರ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.