ಬೆಂಗಳೂರು ಸುತ್ತ 161 ಹಳ್ಳಿಗಳಿಗೆ ಕಾವೇರಿ ಭಾಗ್ಯ!
ಬೆಂಗಳೂರು, ಜನವರಿ 13 : ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ನಗರ ಜಿಲ್ಲೆಯ 161 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇದಕ್ಕಾಗಿ ಜಲಮಂಡಳಿಯು ನಿತ್ಯ 16.10 ದಶಲಕ್ಷ ಲೀಟರ್ ನೀರು ಪೂರೈಸಲಿದೆ. ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿರುವ ಕರ್ನಾಟಕ ಗೃಹ ಮಂಡಳಿಯ ಸೂರ್ಯನಗರ 1,2,3 , ಮತ್ತು 4 ನೇ ಹಂತ ಆನೇಕಲ್ ಪಟ್ಟಣ ಮತ್ತು ಸುತ್ತಮುತ್ತಲಿನ 17 ಗ್ರಾಮಗಳಿಗೆ ಕಾವೇರಿ ನೀರು ಸರಬರಾಜು ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಈ ಪೈಕಿ ಈಗಾಗಲೇ ಆನೇಕಲ್ ಪಟ್ಟಣಕ್ಕೆ ನಿತ್ಯ 7.5 ಎಂ ಎಲ್ ಡಿ ಪೂರೈಕೆ ಮಾಡಲಾಗುತ್ತಿದೆ.
ಜನವರಿ 13ರಿಂದ ಕೆಆರ್ ಎಸ್ ನಿಂದ ನಾಲೆಗಳಿಗೆ ನೀರು ಹರಿಸಲು ತೀರ್ಮಾನ
30 ಎಂಎಲ್ ಡಿ ನೀಡು ಹಂಚಿಕೆ: ರಾಜ್ಯ ಸರ್ಕಾರವು ಸೂರ್ಯನಗರ ವಸತಿ ಬಡಾವಣೆಗಳಿಗೆ 15 ಎಂ ಎಲ್ ಡಿ , ಆನೇಕಲ್ ಪಟ್ಟಣಕ್ಕೆ 7.5 ಎಂಎಲ್ ಡಿ ಮತ್ತು 17 ಹಳ್ಳಿಗಳಿಗೆ 7.5 ಎಂಎಲ್ ಡಿ ಸೇರಿ ಒಟ್ಟು 30 ಎಂಎಲ್ ಡಿ ಕಾವೇರಿ ನೀಡು ಹಂಚಿಕೆ ಮಾಡಿದೆ.
ಇದಕ್ಕಾಗಿ ಜಲಮಂಡಳಿಗೆ 168 ಕೋಟಿ ರೂ. ಪಾವತಿಸಬೇಕು. ಕೆಎಚ್ ಬಿ 84 ಕೋಟಿ ರೂ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 47 ಕೋಟಿ ರೂ. ಮತ್ತು ಆನೇಕಲ್ ಪುರಸಭೆಯು 43.5 ಕೋಟಿ ರೂ ಗಳನ್ನು ಜಲಮಂಡಳಿಗೆ ಪಾವತಿ ಮಾಡಬೇಕಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ರಾಜಾಪುರ, ಹೆನ್ನಾಗರ, ಲಿಂಗಾಪುರ, ಇಂಡ್ಲವಾಡಿಪುರ, ಚಿಕ್ಕ ಹೊಸೂರು, ಬೋಗನದೊಡ್ಡಿ, ಮೈಸೂರಮ್ಮನದೊಡ್ಡಿ, ಬೊಮ್ಮಹಳ್ಳಿ, ಕೋಣಸಂದ್ರ,ಕಾಡಜಕ್ಕಸಂದ್ರ, ಜಿಗಣಿ, ಸೇರಿದಂತೆ 17 ಹಳ್ಳಿಗಳಿಗೆ7.5 ಎಂಎಲ್ ಡಿ ಕಾವೇರಿ ನೀರನ್ನು ಹಂಚಿಕೆ ಮಾಡಿ ಸರ್ಕಾರ ಅನುಮೋದನೆ ನೀಡಿದೆ.
161 ಹಳ್ಳಿಗಳಿಗೆ ಕಾವೇರಿ ಭಾಗ್ಯ: ಸರ್ಕಾರವು ಆನೇಕಲ್ ತಾಲೂಕಿನ ಕೇವಲ 17 ಹಳ್ಳಿಗಳಿಗೆ ಮಾತ್ರ ನೀರು ಪೂರೈಸಲು 7.5 ಎಂಎಲ್ ಡಿ ಹಂಚಿಕೆ ಹಂಚಿಕೆ ಮಾಡಿತ್ತು. ಈ ಮಧ್ಯೆ ಸಂಸದ ಡಿ.ಕೆ. ಸುರೇಶ್ ಅವರು 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ 161 ಜನ ವಸತಿ ಪ್ರದೇಶಗಳಿಗೂ ಕಾವೇರಿ ನೀರು ಒದಗಿಸಬೇಕೆಂದು ಒತ್ತಡ ಹೇರಿದ್ದಾರೆ.
8.60 ಎಂ.ಎಲ್.ಡಿ ನೀರು ಒದಗಿಸಲು ಸಮ್ಮತಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮನವಿ ಪತ್ರಕ್ಕೆ ಸ್ಪಂದಿಸಿರುವ ಜಲಮಂಡಳಿ ತಾತ್ಕಾಲಿಕವಾಗಿ 8.60 ಎಂಎಲ್ ಡಿ ನೀರು ನೀಡಲು ಒಪ್ಪಿಗೆ ನೀಡಿದೆ.