ಯಶವಂತಪುರ ರೈಲು ನಿಲ್ದಾಣ ಅಭಿವೃದ್ಧಿಗೆ ಬಲಿಯಾಗಲಿವೆ 141 ಮರಗಳು, ಸಾರ್ವಜನಿಕರಿಗಿಲ್ಲ ಕಿಂಚಿತ್ತೂ ಕಾಳಜಿ!
ಬೆಂಗಳೂರು, ಜನವರಿ, 19: ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುವುದು, ಮರಗಳ್ನು ಕಡಿಯುವುದು ನಡೆಯುತ್ತಲೇ ಇದೆ. ಆದರೆ ಮೊದಲಾದರೇ ಇಂತಹ ಯೋಜನೆಗಳಿಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದಕ್ಕೆ ಇತ್ತಿಚೆಗೆ ಇದೆಲ್ಲಾ ಬದಲಾಗಿದೆ. ಜನರು ಪ್ರಕೃತಿ ನಾಶದ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳುತ್ತಿಲ್ಲ. ಇದಕ್ಕೆ ಜೀವಂತ ಉದಾಹರಣೆಯಾಗಿ ಯಶವಂತಪುರ ರೈಲು ನಿಲ್ದಾಣದ ಅಭಿವೃದ್ಧಿ ಯೋಜನೆಯಿದೆ.
ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗಾಗಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಿಲ್ದಾಣ ಮುಂಭಾಗ ನೂತನ ಕಟ್ಟಡ ಸೇರಿದಂತೆ ಮಾರ್ಪಾಡು ಕಾಮಗಾರಿ ಆರಂಭವಾಗಿದೆ. ಒಟ್ಟು 380 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ.
Karnataka Assembly Election: ಬೆಂಗಳೂರು ಉತ್ತರದ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು
ನಿಲ್ದಾಣದಲ್ಲಿ ಹೊಸದಾಗಿ ನಾಲ್ಕು ಅಂತಸ್ತಿನ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡವು ಮೆಟ್ರೊ ನಿಲ್ದಾಣದ ಕಡೆಗೆ ನಿರ್ಮಾಣಗೊಳ್ಳುತ್ತಿದೆ. 216 ಮೀಟರ್ ಅಗಲದ ಕಾನ್ಕೋರ್ಸ್, ಜೊತೆಗೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ನಿರ್ಮಿಸಲಾಗುತ್ತಿದೆ. ಪ್ಲಾಟ್ಫ್ಲಾಮ್ರ್ಗಳ ಮೇಲಿನ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳು, ಫುಡ್ ಕೋರ್ಟ್ಗಳು ಇರಲಿವೆ ಎನ್ನಲಾಗಿದೆ.
ಇದಕ್ಕಾಗಿ ಸ್ಥಳದಲ್ಲಿರುವ 141 ಪಾರಂಪರಿಕ ಮರಗಳನ್ನು ಕಡಿಯಬೇಕಾಗುತ್ತದೆ. ಬಿಬಿಎಂಪಿಗೆ 253 ಮರಗಳ ತೆರವಿಗೆ ಎಸ್ಡಬ್ಲ್ಯೂಆರ್ ಅರ್ಜಿ ಸಲ್ಲಿಸಿದ್ದು, 141 ಮರಗಳಿಗೆ ಮಾತ್ರ ಅನುಮತಿ ಸಿಕ್ಕಿದೆ. 79 ಮರಗಳನ್ನು ಉಳಿಸಿಕೊಳ್ಳಲು ಮತ್ತು 33 ಮರಗಳನ್ನು ಸ್ಥಳಾಂತರಿಸಲು ಆದೇಶಿಸಿದೆ.
ಮರ ಕಡಿಯುವ ಪ್ರಸ್ತಾವನೆಗೆ ಎಸ್ಡಬ್ಲ್ಯೂಆರ್ ಸಲ್ಲಿಸಿದ ಅರ್ಜಿಗೆ ಸಾರ್ವಜನಿಕ ಪ್ರತಿಕ್ರಿಯೆ ತೀವ್ರ ಕಳಪೆಯಾಗಿದೆ. ಹೌದು, ಕೇವಲ ಒಂದು ಆಕ್ಷೇಪಣೆ ಸಲ್ಲಿಕೆಯಾಗಿದೆ. ಮರಗಳನ್ನು ಕಡಿಯುವುದರಿಂದ ಕೇವಲ ಯಶವಂತಪುರ ಪರಿಸರ ಮಾತ್ರವಲ್ಲದೆ ಇಡೀ ಬೆಂಗಳೂರಿನ ಪರಿಸರದ ಮೇಲೆ ಪರಿಣಾಮ ಬೀರಲಿದ್ದು, ತಾಪಮಾನ ಏರಿಕೆಯಾಗಲಿದೆ ಎಂಬ ಏಕೈಕ ಆಕ್ಷೇಪ ವ್ಯಕ್ತವಾಗಿದೆ ಎಂದು ವೃಕ್ಷ ಅಧಿಕಾರಿ ಹಾಗೂ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ಸರೀನಾ ಸಿಕ್ಕಲಿಗಾರ್ ಹೇಳಿದ್ದಾರೆ.
"ಕಾಮಗಾರಿ ನಡೆಯಲಿರುವ ಪ್ರದೇಶದಲ್ಲಿ ಇರುವ ಗಿಡಗಳಿಗೆ ತೊಂದರೆಯಾಗದಂತೆ ನಿಲ್ದಾಣದ ಅಭಿವೃದ್ಧಿ ಯೋಜನೆಯನ್ನು ಮಾರ್ಪಡಿಸಲು ಅಥವಾ ಮರಗಳಿಲ್ಲದ ಪಕ್ಕದ ಸ್ಥಳಕ್ಕೆ ಸ್ಥಳಾಂತರಿಸಲು ಆಕ್ಷೇಪಣೆದಾರರು ಸೂಚಿಸಿದ್ದಾರೆ. ಈ ವಿಷಯವನ್ನು ಎಸ್ಡಬ್ಲ್ಯೂಆರ್ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅದರ ಪ್ರಕಾರ ಯೋಜನೆ ಮಾಡಲಾಗಿದೆ" ಎಂದಿದ್ದಾರೆ.
ಇನ್ನು, ಅಭಿವೃದ್ಧಿಗಾಗಿ ಕಡಿಯಲು ಗುರುತಿಸಲಾದ ಮರಗಳಲ್ಲಿ ಸಿಲ್ವರ್ ಓಕ್, ಮಾವು, ಹಲಸು, ಬಗಿನಿ, ರಾಯಲ್ ಓಕ್, ತೇಗ, ಬೇವು, ತೆಂಗು, ಸರ್ವೆ, ನೀಲಗಿರಿ, ಅಟ್ಟಿ, ರೈನ್ಟ್ರೀ, ಸೀಮೆ ತಂಗಡಿ, ಅರೆಕಾ ಮತ್ತು ಪೇಪರ್ ಮಲ್ಬರಿ ಸೇರಿವೆ.
"ನೀವು ಏನನ್ನಾದರೂ ಅಭಿವೃದ್ಧಿ ಮಾಡಬೇಕಿದ್ದರೇ, ಬೇರೆ ಯಾವುದನ್ನಾದರೂ ಕೆಡವಬೇಕಾಗುತ್ತದೆ. ಅಭಿವೃದ್ಧಿ ಹೊಂದಿದ ನಿಲ್ದಾಣದಲ್ಲಿ ಹೆಚ್ಚಿನ ಮರಗಳನ್ನು ನೆಡಲು ನಾವು ಯೋಚಿಸುತ್ತಿದ್ದೇವೆ" ಎಂದುಎಸ್ಡಬ್ಲ್ಯೂಆರ್ನ ಮುಖ್ಯ ಆಡಳಿತಾಧಿಕಾರಿ ಎಸ್ಪಿಎಸ್ ಗುಪ್ತಾ ಹೇಳಿದ್ದಾರೆ.