ಬೆಂಗಳೂರು : 4533 ಎಕರೆ ಕರೆ ಭೂಪ್ರದೇಶ ಒತ್ತುವರಿ
ಬೆಂಗಳೂರು, ನವೆಂಬರ್ 22 : ಬೆಂಗಳೂರು ನಗರ ಒಂದರಲ್ಲಿಯೇ 4533 ಎಕರೆ ಕೆರೆ ಅಂಗಳವನ್ನು ಒತ್ತುವರಿ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 6252 ಎಕರೆ ಕೆರೆ ಭೂಪ್ರದೇಶ ಭೂ ನುಂಗುಕೋರರ ಬಾಯಿ ಸೇರಿದೆ.
ಕೆರೆ ಒತ್ತುವರಿ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಬಿ.ಎಂ.ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಬೆಳಗಾವಿಯಲ್ಲಿ ನಿನ್ನೆ (ನವೆಂಬರ್ 22) ರಂದು ವರದಿ ಸಲ್ಲಿಸಿದ್ದು, ಬೆಂಗಳೂರು ನಗರದಲ್ಲಿ ಕೆರೆ ಒತ್ತುವರಿ ಹೆಚ್ಟು ಅವ್ಯಾಹತವಾಗಿ ನಡೆದಿದೆ ಹಾಗೂ ಇದರಲ್ಲಿ ದೊಡ್ಡ ದೊಡ್ಡ ಸಾಪ್ಟ್ ವೇರ್ ಕಂಪೆನಿಗಳು, ಅಂತರರಾಷ್ಟ್ರೀಯ ಉದ್ದಿಮೆಗಳು ಭಾಗಿಯಾಗಿವೆ ಎಂಬುದಾಗಿ ಹೇಳಲಾಗಿದೆ.
ರಾಜಕಾಲುವೆ ಒತ್ತುವರಿ ಮಾಡಿರುವ ಸಂಸ್ಥೆಗಳ ಪಟ್ಟಿ ಬಹಿರಂಗ
ಮೂರು ವರ್ಷ ತನಿಖೆ ನಡೆಸಿ 247 ಪುಟಗಳ ವಿಸ್ತೃತ ವರದಿ ಸಲ್ಲಿಸಿರುವ ಕೋಳಿವಾಡ ತಂಡ, "ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕೆರೆ ಒತ್ತುವರಿ ನಡೆದಿದೆ. ಒತ್ತುವರಿಯ ಗಾತ್ರ ಎಷ್ಟು ದೊಡ್ಡದಿದೆಯೆಂದರೆ ಒತ್ತವುರಿಯನ್ನು ತೆರವು ಮಾಡುವುದು ಕಷ್ಟ' ಎಂದು ಅದು ಹೇಳಿದೆ. ಬೆಂಗಳೂರು ನಗರ ಮತ್ತು ಗ್ರಮಾಂತರ ಜಿಲ್ಲೆಯಲ್ಲಿರುವ ಒಟ್ಟು 1547 ಕೆರೆಗಳಲ್ಲಿ 158 ಕೆರೆಗಳಷ್ಟೆ ಒತ್ತವರಿಯಾಗದೆ ಉಳಿದಿವೆ. ಇನ್ನೆಲ್ಲಾ ಕೆರೆಗಳು ಭೂಗಳ್ಳರ ದಾಳಿಗೆ ಒಳಗಾಗಿವೆ.
ಲಘು ಪಾನೀಯ ಕಂಪೆನಿಯಿಂದಲೂ ಒತ್ತುವರಿ
ಬೆಂಗಳೂರು ನಗರದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಲಘುಪಾನೀಯ ಕಂಪೆನಿ ಹಾಗೂ ಎರಡು ಬೃಹತ್ ಸಾಪ್ಟ್ ವೇರ್ ಕಂಪೆನಿಗಳು ಸೇರಿದಂತೆ 73 ಪ್ರಖ್ಯಾತ ವ್ಯಕ್ತಿಗಳು ಉದ್ದಿಮೆಗಳೇ ಕೆರೆ ಒತ್ತುವರಿ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬೆಂಗಳೂರು ಪೂರ್ವಕ್ಕೆ ಮೊದಲ ಸ್ಥಾನ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿನ ಒಟ್ಟು 57,932 ಎಕರೆ ಕೆರೆ ಪ್ರದೇಶದಲ್ಲಿ 10,785 ಎಕರೆ ಕೆರೆ ಒತ್ತುವರಿಗೊಳಗಾಗಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಒತ್ತುವರಿ ನಡೆದಿರುವುದು ಬೆಂಗಳೂರು ಫೂರ್ವ ಭಾಗದಲ್ಲಿ ಇಲ್ಲಿ 18 ಕೆರೆಗಳು ಒತ್ತವರಿಗೊಳಪಟ್ಟಿವೆ. ನಂತರದ ಸ್ಥಾನ 17 ಕೆರೆಗಳು ಒತ್ತುವರಿಯಾಗಿರುವ ಬೆಂಗಳೂರು ದಕ್ಷಿಣ ಭಾಗಕ್ಕೆ, ಆನೆಕಲ್ ತಾಲ್ಲೂಕಿನಲ್ಲಿ 11 ಕೆರೆಗಳು, ಬೆಂಗಳೂರು ಉತ್ತರದಲ್ಲಿ 14 ಕೆರೆಗಳು, ದೇವನಹಳ್ಳಿಯಲ್ಲಿ 5 ಕೆರೆಗಳು, ನೆಲಮಂಗಲದಲ್ಲಿ 3 ಕೆರೆಗಳು ಒತ್ತವರಿಯಾಗಿವೆ.
ಭೂಗಳ್ಳರು ಕದ್ದಿರುವುದು ಎಷ್ಟು ಎಕರೆ
ವರದಿಯ ಪ್ರಕಾರ 900 ಎಕರೆ ಇದ್ದ ಬೆಳ್ಳಂದೂರು ಕೆರೆ 20 ಎಕರೆಯನ್ನು ಕಳೆದುಕೊಂಡಿದೆ. ಹುಳಿಮಾವು ಕೆರೆ 30.5 ಎಕರೆ ಒತ್ತುವರಿಗೆ ಹೋಗಿದೆ, ಚನ್ನಸಂದ್ರ ಕೆರೆ 17.26 ಎಕರೆ, ಪುಟ್ಟೇನಹಳ್ಳಿ ಕೆರೆ 12.26 ಎಕರೆ ನಷ್ಟ ಮಾಡಿಕೊಂಡಿದೆ. ಪ್ರತಿ ಕೆರೆಯೂ ಎಷ್ಟು ಎಕರೆ ಭು ಪ್ರದೇಶವನ್ನು ಹೇಗೆ ಕಳೆದುಕೊಂಡಿದೆ ಹಾಗೂ ಯಾರು ಒತ್ತುವರಿ ಮಾಡಿದ್ದಾರೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಸತಿ ಸ್ಥಳಗಳಲ್ಲಿ ನಿಧಾನ ಕಾರ್ಯಾಚರಣೆ
ಕೆರೆ ಉಳಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಯೊಬ್ಬರನ್ನು ನೇಮಿಸಿ, ಅವರ ಮಾರ್ಗದರ್ಶನದಲ್ಲಿ ಕೆರೆ ಒತ್ತುವರಿ ಆಗದಂತೆ ತಡೆಯಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. ಮತ್ತು ಈಗಾಗಲೇ ಆಗಿರುವ ಒತ್ತವರಿಯನ್ನು ತೆರವು ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು ಮತ್ತು ಒತ್ತುವರಿ ಜಾಗದಲ್ಲಿ ನಿರ್ಮಿಸಿರುವ ವಸತಿ ಮನೆಗಳು, ಅಪಾರ್ಟ್ ಮೆಂಟ್ ಗಳ ಒತ್ತುವರಿಯನ್ನು ಸ್ವಲ್ಪ ನೀಧಾನವಾಗಿ ಮುಂಚೆಯೇ ನೋಟೀಸ್ ನೀಡಿ ಮಾಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.