ಏರ್ ಪೋರ್ಟ್ ಮಾದರಿಯಲ್ಲಿ ಯಶವಂತಪುರ ರೈಲು ನಿಲ್ದಾಣ
ಬೆಂಗಳೂರು ಜೂ. 15: ರಾಜಧಾನಿ ಬೆಂಗಳೂರಿನ ಒಂದೊಂದೆ ರೈಲು ನಿಲ್ದಾಣಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದುತ್ತಿವೆ. ಈ ಹಿಂದೆ ಬೈಯಪ್ಪನಹಳ್ಳಿಯ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಅಭಿವೃದ್ಧಿಗೊಂಡಿತ್ತು. ನಂತರ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ, ಇದೀಗ ಯಶವಂತಪುರ ರೈಲು ನಿಲ್ದಾಣಗಳಿಗೆ ವಿಮಾನ ನಿಲ್ದಾಣದಂತೆ ಆಧುನಿಕ ಸೌಕರ್ಯಗಳ ಒದಗಿಸಲು ನಿರ್ಧರಿಸಲಾಗಿದೆ..
130 ವರ್ಷಗಳಷ್ಟು ಹಳೆಯದಾದ ಯಶವಂತಪುರ ರೈಲ್ವೆ ನಿಲ್ದಾಣವನ್ನು ಒಟ್ಟು ಅಂದಾಜು 400ಕೋಟಿ ರೂ.ಗು ಅಧಿಕ ವೆಚ್ಚದಲ್ಲಿ ಏರ್ ಪೋರ್ಟ್ ಮಾದರಿಯಲ್ಲಿ ನವೀಕರಿಸಲಾಗುವುದು. ಆದಷ್ಟು ಶೀಘ್ರವೇ ರೈಲ್ವೆ ನಿಲ್ದಾಣ ಅಭಿವವೃದ್ಧಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಿದ್ದೇವೆ. ಸದ್ಯ ಎಲ್ಲವು ಆಡಳಿತ ಮಟ್ಟದಲ್ಲಿ ಈ ಬಗ್ಗೆ ನಿರ್ಧಾರವಾಗಿದೆ. ಟೆಂಡರ್ ಕರೆಯುವುದು ಬಾಕಿ ಇದೆ. ಈ ಹಿಂದೆ ಸುಮಾರು 314 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಬೈಯಪ್ಪನಹಳ್ಳಿಯ ಸರ್. ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಅಭಿವೃದ್ಧಿಪಡಿಸಲಾಗಿತ್ತು ಎಂದು ನೈಋತ್ಯ ರೈಲ್ವೆ ಆಡಳಿತ ವಿಭಾಗ ತಿಳಿಸಿದೆ.
ಪರಿಸರ ಸ್ನೇಹಿಯಾಗಿ ನಿಲ್ದಾಣ
1892ರಿಂದ ಯಶವಂಪುರ ರೈಲು ನಿಲ್ದಾಣ ಕಾರ್ಯಾಚರಣೆಯಲ್ಲಿದೆ. ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ರೈಲುಗಳು ಒಂದೇ ಮಾರ್ಗದಲ್ಲಿ ಸಂಚರಿಸುತ್ತವೆ. ಅವುಗಳಿಗೆ ಪ್ರತ್ಯೇಕ ಸಂಚಾರ ಮಾರ್ಗ ಅಭಿವೃದ್ಧಿಗೊಳ್ಳಲಿವೆ. ಪ್ರಯಾಣಿಕರಿಗೆ ವಿಶ್ರಾಂತಿಗಾಗಿ ಮಾದರಿ ಕೊಠಡಿ ನಿರ್ಮಾಣ, ಚಿಲ್ಲರೆ ಮಾರಾಟ ಮಳಿಗೆಗಳನ್ನು ವಿಮಾನ ನಿಲ್ದಾಣ ಹೋಲುವಂತೆ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ರೈಲು ನಿಲ್ದಾಣವನ್ನು ಪರಿಸರ ಸ್ನೇಹಿ ನಿಲ್ದಾಣವನ್ನಾಗಿ ಮಾಡಲು ತೀರ್ಮಾನಿಸಿದ್ದು, ಈ ಸಂಬಂಧ ವಿದ್ಯುತ್ ಬಳಕೆಗಾಗಿ ಸೋಲಾರ ಪ್ಯಾನಲ್ಗಳ ಅಳವಡಿಕೆ, ಮಳೆ ನೀರು ಕೊಯ್ಲು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಸಿಕೊಳ್ಳುವ ಮೂಲಕ ನಿಲ್ದಾಣವನ್ನು ಪರಿಸರ ಸ್ನೇಹಿಯಾಗಿಸಲು ನಿರ್ಧರಿಸಲಾಗಿದೆ.
ಉಪನಗರ ರೈಲುಗಳಿಗೆಗ ಪ್ರತ್ಯೇಕ ವ್ಯವಸ್ಥೆ:
ಪ್ರಸ್ತುತ ಯಶವಂತಪುರ ರೈಲು ನಿಲ್ದಾಣಗಳಲ್ಲೇ ಉಪನಗರ ರೈಲುಗಳಾದ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದಿಂದ ದೇವನಹಳ್ಳಿ ಕಡೆಗೆ ರೈಲುಗಳು ಸಂಚರಿಸುತ್ತವೆ. ಸಾಲದೆಂಬಂತೆ 77 ಪ್ಯಾಸ್ಸೆಂಜರ್ ರೈಲುಗಳು ವಿವಿಧೆಡೆ ಸಂಚರಿಸುತ್ತವೆ. ಈ ಭಾಗದಲ್ಲಿ 8000ಕ್ಕೂ ಅಧಿಕ ಪ್ರಯಾಣಿಕರು ನಿತ್ಯ ಸಂಚರಿಸುತ್ತಾರೆ. ಹೀಗಾಗಿ ನಿಲ್ದಾಣವು ಸದಾ ಜನದಟ್ಟಣೆ ಕೂಡಿರುತ್ತದೆ. ಇದು ಕೆಲವೊಮ್ಮ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಇದೆಲ್ಲವನ್ನು ಮನಗಂಡು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಉಪನಗರ ರೈಲುಗಳ ಸಂಚಾರಕ್ಕೆ ಪ್ರತ್ಯೇಕ ಕಾರಿಡಾರ್ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಈ ಯೋಜನೆಗಾಗಿ ತಾಂತ್ರಿಕ ಪರಿಣಿತ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದೆ. ಯಶವಂತಪುರ ನಿಲ್ದಾಣವನ್ನು ಸಂಪೂರ್ಣವಾಗಿ ಕೆಡವಿ ಪನರ್ ನಿರ್ಮಾಣ ಮಾಡಬೇಕೋ? ಅಥವಾ ಇರುವ ನಿಲ್ದಾಣದ ಕಟ್ಟಡವನ್ನು ನವೀಕರಿಸಿ ಅಲ್ಲಿಯೇ ವಿಮಾನ ನಿಲ್ದಾಣ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕೋ? ಎಂಬುದರ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚೆ ನಡೆದಿದೆ. ಇನ್ನು ಯಾವುದು ಅಂತಿಮವಾಗಿಲ್ಲ ಎಂದು ತಿಳಿದು ಬಂದಿದೆ.
12 ಕೋಟಿ ಬಳಕೆ
ಕಳೆದ ವರ್ಷ ನೈಋತ್ಯ ರೈಲ್ವೆ ಇಲಾಖೆಯಿಂದ ನವೀಕರಣ ಯೋಜನೆಗಾಗಿ ಒಟ್ಟು 12 ಕೋಟಿ ರೂ. ಬಿಡುಗಡೆ ಮಾಡಿತ್ತು. ಆ ಹಣದಲ್ಲಿ ಯಶವಂತಪುರ ನಿಲ್ದಾಣದಲ್ಲಿ ಫ್ಲಾಟ್ ಫಾರ್ಮ್ ಮೇಲ್ಛಾವಣಿ, ಫ್ಲಾಟ್ ಫಾರ್ಮ್ ಸುತ್ತಮುತ್ತಲಿನ ಪ್ರದೇಶ, ಕೂರಲು ಆಸನ ವ್ಯವಸ್ಥೆ, ಕುಡಿಯಲು ನೀರಿನ ವ್ಯವಸ್ಥೆ, ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ ನಿಲ್ದಾಣಕ್ಕೆ ಹೊರಗಿನಿಂದ ಬಂದು ಸೇರುವ ರಸ್ತೆಗಳನ್ನು ಅಗಲೀಕರಿಸಲಾಗಿದೆ.
2017ರಲ್ಲಿ ಯಶವಂತಪುರ ರೈಲ್ವೆ ನಿಲ್ದಾಣ ಸುಮಾರು 20 ಎಕರೆ ಜಾಗವನ್ನು ಪುನರ್ ಅಭಿವೃದ್ಧಿಗೊಳಿಸಲು ಸಾರ್ವಜನಿಕ, ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಯಡಿ ನಿರ್ಧರಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಅದು ಕೈ ಬಿಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ 12 ಕೋಟಿ ಅನುದಾನದಿಂದ ಮಾಡಲಾದ ಅಭಿವೃದ್ಧಿಯಿಂದ ಹೆಚ್ಚು ಲಾಭವಾಗಿದೆ ಎಂದು ಅನ್ನಿಸುತ್ತಿಲ್ಲ. ನಿಲ್ದಾಣಕ್ಕೆ ಹೊಸ ಮೇಲ್ಛಾವಣೆ ಅಳವಡಿಸಿದರೂ ಸಹ ಮಳೆ ಬಂದಾಗ ನೀರು ಸೋರುವುದು ತಪ್ಪಿಲ್ಲ. ಇಷ್ಟು ದೊಡ್ಡ ಮೊತ್ತವನ್ನು ಒಂದೇ ಯೋಜನೆಗಾಗಿ ಬಳಸುವ ಬದಲು ಕನಿಷ್ಠ ಸೌಲಭ್ಯಗಳು ಕಾಣದ ಸಣ್ಣ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಬೇಕು. ಇದರಿಂದ ಆಯಾ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಪ್ರಯಾಣಿಕರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜೂ. 20 ರಂದು ಮೋದಿ ಶಂಕುಸ್ಥಾಪನೆ?
Recommended Video
ಪ್ರಧಾನಿ ನರೇಂದ್ರ ಮೋದಿ ಅವರು ಜೂ.20 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಅಂದು ಉಪನಗರ ರೈಲ್ವೆ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಅಂದೇ ಈ ಯಶವಂತಪುರ ನಿಲ್ದಾಣ ಅಭಿವೃದ್ಧಿ ಯೋಜನೆಗೂ ಚಾಲನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.