ಮಿಂಟೋ ಆಸ್ಪತ್ರೆ ವೈದ್ಯರ ಎಡವಟ್ಟು: ದೃಷ್ಟಿ ಕಳೆದುಕೊಂಡ 13 ಮಂದಿ
ಬೆಂಗಳೂರು, ಜುಲೈ 17: ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯ ವೈದ್ಯರು ಮಾಡಿರುವ ಯಡವಟ್ಟಿನಿಂದಾಗಿ ಬರೋಬ್ಬರಿ 13 ಮಂದಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ.
ಕಳೆದ ಮಂಗಳವಾರ 23 ಮಂದಿಗೆ ಕಣ್ಣಿನ ಪೊರೆಯ ಚಿಕಿತ್ಸೆ ನಡೆಸಲಾಗಿತ್ತು, ಇದರಲ್ಲಿ ಐವರು ಮಹಿಳೆಯರು, ಎಂಟು ಮಂದಿ ಪುರುಷರು ಒಟ್ಟು 13 ಮಂದಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ.
10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ದೃಷ್ಟಿದೋಷ, ಪರಿಹಾರವೇನು?
ದೃಷ್ಟಿ ಕಳೆದುಕೊಂಡಿರುವ 13 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದ್ದು, ಪ್ರತಿನಿತ್ಯ ಕಣ್ಣಿಗೆ ಔಷಧ, ಇಂಜೆಕ್ಷನ್ ಚುಚ್ಚುವುದು ನಡದೇ ಇದೆ, ಆದರೆ ಯಾವುದೇ ಫಲಿತಾಂಶ ಗೋಚರಿಸುತ್ತಿಲ್ಲವೆಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆ ವಿಫಲಗೊಳ್ಳಲು ಔಷಧದ ದುಷ್ಪರಿಣಾಮವೇ ಕಾರಣ ಎಂದು ಈಗಾಗಲೇ ವರದಿ ಬಂದಿದೆ, ಔಷಧದ ಮಾದರಿಯನ್ನು ಔಷಧ ನಿಯಂತ್ರಣ ಮಂಡಳಿಗೂ ಕಳುಹಿಸಿದ್ದ ವರದಿಗಾಗಿ ಕಾಯಲಾಗುತ್ತಿದೆ. ಶಸ್ತ್ರ ಚಿಕಿತ್ಸೆಗೆ ಬಳಸಿದ್ದ ಅಕ್ಯೂಜೆಲ್ 2% ಆಪ್ತಮಾಲಿಕ್ ವಿಸಿಯೋಸರ್ಜಿಕಲ್ ಡಿವೈಸ್ ಬ್ಯಾಚ್ ನಂ ಒಯುವಿ 19023 ಔಷಧವನ್ನು ವರದಿ ಬರುವ ವರೆಗೆ ಯಾವ ಶಸ್ತ್ರಚಿಕಿತ್ಸೆಗೂ ಬಳಸದಂತೆ ಸೂಚಿಸಲಾಗಿದೆ.
ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವುದನ್ನು ನಿಲ್ಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ಕೊಠಡಿಗೆ ಬೀಗ ಜಡಿಯಲಾಗಿದೆ. ಆಸ್ಪತ್ರೆಯ ವೈದ್ಯರ ವಿರುದ್ಧ ವಿವಿ ಪುರಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಮತ್ತು ಇತರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕಿದೆ.
ಒಟ್ಟಿನಲ್ಲಿ ಕೆಲವು ವೈದ್ಯರ ಯಡವಟ್ಟಿನಿಂದ 13 ಮಂದಿ ತಮ್ಮ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.