ಪೆರೋಲ್ ರಜೆ ಮೇಲೆ ತೆರಳಿದ 11 ಕೈದಿಗಳು ವಾಪಸು ಜೈಲಿಗೆ ಬಂದಿಲ್ಲ!
ಬೆಂಗಳೂರು, ಜು. 17: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳು ಜೈಲು ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಪೆರೋಲ್ ರಜೆ ಮೇಲೆ ತೆರಳಿರುವ ಹನ್ನೊಂದು ಮಂದಿ ಕೈದಿಗಳು ರಜೆ ಅವಧಿ ಮುಗಿದರೂ ವಾಪಸು ಜೈಲಿಗೆ ಬಂದಿಲ್ಲ. ಪೆರೋಲ್ ರಜೆ ಮೇಲೆ ಕೈದಿಗಳನ್ನು ಮೂರು ತಿಂಗಳ ರಜೆ ಮೇಲೆ ಕಳಿಸಿದ ಜೈಲು ಅಧಿಕಾರಿಗಳು ಇದೀಗ ಇಂಗು ತಿಂದ ಮಂಗನಂತಾಗಿದ್ದಾರೆ.
ಜೀವಾವಧಿ ಅಥವಾ ಬೇರೆ ಯಾವುದೇ ಶಿಕ್ಷೆಗೆ ಗುರಿಯಾಗುವ ಕೈದಿಗಳಿಗೆ ವರ್ಷದಲ್ಲಿ ಮೂರು ತಿಂಗಳು ರಜೆ ಹೋಗಲು ಅವಕಾಶ ನೀಡಲಾಗಿದೆ. ಕೈದಿಗಳು ಜೈಲಿನಲ್ಲಿ ತೋರುವ ಸನ್ನಡತೆ ಆಧಾರದ ಮೇಲೆ ಪೆರೋಲ್ ರಜೆ ಮೇಲೆ ಕಳಿಸಲಾಗುತ್ತದೆ. ಆದರೆ ಭ್ರಷ್ಟ ಅಧಿಕಾರಿಗಳು ಕೈದಿಗಳಿಂದ ಬಿಡಿಗಾಸಿಗೆ ಕೈ ಚಾಚಿ ಅನರ್ಹರನ್ನು ಸಹ ಪೆರೋಲ್ ಮೇಲೆ ಕಳಿಸುತ್ತಾರೆ. ಪೆರೋಲ್ ರಜೆ ಮೇಲೆ ಹೊರ ಬರುವ ಕೈದಿಗಳು ಕೆಲವರು ಸನ್ನಡತೆಯಿದ ಮನೆಯಲ್ಲಿ ಕುಟುಂಬದ ಜತೆ ಕಾಲ ಕಳೆದು ವಾಪಸು ಜೈಲಿಗೆ ಬರುತ್ತಾರೆ. ಇನ್ನೂ ಕೆಲವರು ಜೈಲಿನಿಂದ ಹೊರಗೆ ಹೋಗಿ ಮಾಡಬಾರದ ಕೃತ್ಯಗಳನ್ನು ಮಾಡಿ ಬರುತ್ತಾರೆ. ಅಂತಹ ಅಪರಾಧಗಳು ಬಹುತೇಕ ಬರುವುದೇ ಇಲ್ಲ. ಈ ಸತ್ಯ ಗೊತ್ತಿದ್ದರೂ ಕೈದಿಗಳನ್ನು ಪೆರೋಲ್ ರಜೆ ಮೇಲೆ ಕಳುಹಿಸಲಾಗುತ್ತದೆ.
ಹನ್ನೊಂದು ಕೈದಿಗಳು ಎಸ್ಕೇಪ್ : ಜೀವಾವಧಿ, ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಹನ್ನೊಂದು ಮಂದಿ ಕೈದಿಗಳು ಮೂರು ತಿಂಗಳ ಪೆರೋಲ್ ರಜೆ ಮೇಲೆ ತೆರಳಿದ್ದರು. ರಜೆ ಮೇಲೆ ಹೋಗಿದ್ದ ಅನೇಕರು ವಾಪಸು ಬಂದಿದ್ದಾರೆ. ಹನ್ನೊಂದು ಮಂದಿ ಕೈದಿಗಳು ವಾಪಸು ಬಂದಿಲ್ಲ. ಪೆರೋಲ್ ರಜೆ ಮೇಲೆ ಹೋಗಿರುವರ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇಲ್ಲ.ಹೀಗಾಗಿ ಕಾರಾಗೃಹ ಅಧಿಕಾರಿಗಳು ತಲೆ ಚಚ್ಚಿಕೊಳ್ಳುವಂತಾಗಿದೆ.
Recommended Video
ಸನ್ನಡತೆ ಆಧಾರದ ಮೇಲೆ ಪೆರೋಲ್ ರಜೆ ಮೇಲೆ ಹೋಗುವ ಕೈದಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಹಿ ಹಾಕಬೇಕು. ಈ ಮೂಲಕ ತನ್ನ ಇರುವಿಕೆಯನ್ನು ಕಾರಾಗೃಹ ಸಿಬ್ಬಂದಿಗೆ ಖಚಿತ ಪಡಿಸಬೇಕು. ಕಾರಾಗೃಹ ಅಧಿಕಾರಿಗಳು ಮಾಡಿರುವ ಎಡವಟ್ಟಿಗೆ ಇದೀಗ ಜೈಲು ಅಧಿಕಾರಿಗಳಲ್ಲಿ ನಡುಕ ಹುಟ್ಟಿದೆ. ಪೆರೋಲ್ ರಜೆ ಮೇಲೆ ಹೋದವರು ಈವರೆಗೂ ಬಂದಿಲ್ಲ. ಮೂರು ತಿಂಗಳ ರಜೆ ಅದಿ ಮುಗಿದು ಒಂದು ತಿಂಗಳು ಆದರೂ ಬಂದಿಲ್ಲ. ಹೀಗಾಗಿ ಕಣ್ಮರೆಯಾಗಿರುವ ಶಿಕ್ಷಾ ಬಂಧಿಗಳನ್ನು ಹುಡುಕುವ ಕಾರ್ಯಕ್ಕೆ ಕಾರಾಗೃಹ ಇಲಾಖೆ ಅಧಿಕಾರಿಗಳೇ ಮುಂದಾಗಿದ್ದರೆ. ಪೆರೋಲ್ ರಜೆ ಮೇಲೆ ತೆರಳಿದವರು ನಿಗದಿತ ಕಾಲ ಮಿತಿಯಲ್ಲಿ ಬರದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸಿಕ್ಕಿಬಿದ್ದು ಕಾರಾಗೃಹಕ್ಕೆ ತೆರಳಿದರೆ ಮತ್ತೆ ಅವರಿಗೆ ಪೆರೋಲ್ ರಜೆ ಸೌಲಭ್ಯ ಸಿಗುವುದಿಲ್ಲ. ಜತೆಗೆ ಹದಿನೈದು ತಿಂಗಳ ತುರ್ತು ರಜೆ ಕೂಡ ಸಿಗುವುದಿಲ್ಲ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.