ಕೊರೊನಾ ವಾರಿಯರ್ಸ್ "ಆಂಬ್ಯುಲೆನ್ಸ್" ಚಾಲಕರಿಗೆ 2 ತಿಂಗಳಿನಿಂದ ವೇತನವಿಲ್ಲ!
ಬೆಂಗಳೂರು, ಏಪ್ರಿಲ್ 28: ಸ್ವಾಮೀ, ಎರಡು ತಿಂಗಳಿನಿಂದ ನನ್ನ ಹೆಂಡತಿ ಮಕ್ಕಳು ಉಪವಾಸ ಇದ್ದಾರೆ. ರೋಗಿಗಳು ಪ್ರೀತಿಯಿಂದ ಕೊಡುವ ಐವತ್ತು, ನೂರು ರೂಪಾಯಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕೆಲಸ ಬಿಟ್ಟು ಹೋರಾಟ ಮಾಡೋಣ ಅಂತಿದ್ದೆ. ಕೊರೊನಾದಿಂದ ಜನರು ನರಳುತ್ತಿರುವುದನ್ನು ನೋಡಿ ಉಸಿರು ಬಿಗಿ ಹಿಡಿದು ಆಂಬ್ಯುಲೆನ್ಸ್ ಚಾಲನೆ ಮಾಡ್ತಿದ್ದೇನೆ. ದಿನಕ್ಕೆ ಒಂದೊತ್ತು ಊಟ ಮಾಡಿದ್ರೂ ಅದೇ ಹೆಚ್ಚು. ಎರಡು ತಿಂಗಳಿನಿಂದ ಸಂಬಳ ವಿಲ್ಲದೇ ಜನರ ಕರುಣೆ ಭಿಕ್ಷೆಯಲ್ಲಿ ಬದುಕುತ್ತಿದ್ದೇನೆ. !
ರಾಜ್ಯದಲ್ಲಿ ಕೊರೋನಾ ಸೋಂಕಿತರನ್ನು ಕರೆ ಮಾಡಿದ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಜ್ಯದ 108 ಆರೋಗ್ಯ ಕವಚ ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿರುವ ಚಾಲಕನೊಬ್ಬನ ಮನದಾಳದ ಮಾತು. ಇದು ಒಬ್ಬರ ಸ್ಥಿತಿಯಲ್ಲ, ಕೊರೋನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಮೂರು ಸಾವಿರ 108 ಆಂಬ್ಯುಲೆನ್ಸ್ ಚಾಲಕರ ಮತ್ತು ನರ್ಸ್ ಗಳ ಸ್ಥಿತಿಯಿದು.
ಎರಡು ತಿಂಗಳಿನಿಂದ ವೇತನವಿಲ್ಲ
ರಾಜ್ಯದಲ್ಲಿ ಚಾಲಕರು ಸೇರಿ ಮೂರು ಸಾವಿರ ಸಿಬ್ಬಂದಿ 108 ಆಂಬ್ಯುಲೆನ್ಸ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಐದು ನಿಮಿಷ ವಿಶ್ರಾಂತಿ ಪಡೆಯಲು ಆಗುತ್ತಿಲ್ಲ. ಅಷ್ಟೊಂದು ಬೇಡಿಕೆ ಸೃಷ್ಟಿಯಾಗಿದೆ. ಹಗಳಿರುಳು ದುಡಿಯುತ್ತಿದ್ದಾರೆ. ಎರಡು ತಿಂಗಳಿನಿಂದ ವೇತನ ಬಿಡುಗಡೆ ಮಾಡಿಲ್ಲ. ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಕ್ಕೆ ನೀಡಬೇಕಿದ್ದ ವಿಶೇಷ ಭತ್ಯೆಯನ್ನು ಕೂಡ ಬಿಡುಗಡೆ ಮಾಡಿಲ್ಲ. ಹೀಗಾಗಿ 108 ಚಾಲಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ವೇತನ ಬಿಡುಗಡೆಗೆ ಆಗ್ರಹಿಸಿ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದ ಆಂಬ್ಯುಲೆನ್ಸ್ ಚಾಲಕರು ಕೊರೊನಾದಿಂದ ಜನರಿಗೆ ತೊಂದರೆ ಆಗಬಾರದು ಎಂದು ಉಸಿರು ಬಿಗಿ ಹಿಡಿದು ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿವಿಕೆ ಇಎಂಎಆರ್ಐ ಸಬೂಬು
108 ಆಂಬ್ಯುಲೆನ್ಸ್ ನಿರ್ವಹಣೆ ಮಾಡುತ್ತಿರುವ ಜಿವಿಕೆ ಇಎಂಎಆರ್ಐ ಸಂಸ್ಥೆಯ ಅಧಿಕಾರಿಗಳನ್ನು ಸಂಬಳ ಕೊಡಿ ಎಂದು ಕೇಳಿದರೆ, ಸರ್ಕಾರ ಈ ಮೊದಲು ಮೂರು ತಿಂಗಳಿಗೆ ಬೇಕಾದ ಹಣ ಮುಂಗಡವಾಗಿ ನೀಡುತ್ತಿತ್ತು. ಈಗ ಕೊಡುತ್ತಿಲ್ಲ. ಸರ್ಕಾರ ಕೊಡುವ ಗ್ಯಾರೆಂಟಿ ಇಲ್ಲ. ಹೀಗಾಗಿ ನಾವೆಲ್ಲಿಂದ ತಂದು ಕೊಡೋಣ. ನೀವು ರಾಜ್ಯ ಸರ್ಕಾರವನ್ನೇ ಕೇಳಿ, ಅವರು ಕೊಟ್ಟಿದ ಕೂಡಲೇ ನಿಮಗೆ ವೇತನ ಕೊಡುತ್ತೇವೆ ಎಂದು ಜಿವಿಕೆ ಸಂಸ್ಥೆಯ ಅಧಿಕಾರಿಗಳು ನೀಡುತ್ತಿರುವ ಉತ್ತರ. ಜಿವಿಕೆ ಸಂಸ್ಥೆಯ ಈ ಸಬೂಬು ಉತ್ತರಿಂದ ಬೇಸತ್ತು ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ಆಂಬ್ಯುಲೆನ್ಸ್ ಚಾಲಕರ ಸಂಘ ಆರೋಗ್ಯ ಸಚಿವ ಸುಧಾಕರ್ ಅವರಿಗೆ ಮನವಿ ನೀಡಿದೆ. ಆರೋಗ್ಯ ಇಲಾಖೆ ಆಯುಕ್ತರಿಗೂ ಮನವಿ ನೀಡಿ ಸಂಬಳ ಬಿಡುಗಡೆ ಮಾಡುವಂತೆ ಕೋರಿ ಹದಿನೈದು ದಿನಗಳಾಗಿವೆ. ಈವರೆಗೂ ವೇತನ ಬಿಡುಗಡೆಯ ಭರವಸೆಯೇ ಸಿಕ್ಕಿಲ್ಲ ಎಂದು ಸಂಘದ ಅಧ್ಯಕ್ಷ ಚಂದ್ರು ಪುಣ್ಯಕೋಟಿ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಆರೋಗ್ಯ ಸಚಿವರೇ ಎಲ್ಲಿ ವೇತನ ?
ಕೊರೋನಾ ಸೋಂಕು ತಗುಲಿದವರ ಬಳಿ ಅವರ ಸಂಬಂಧಿಕರೇ ಹೋಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಆಂಬ್ಯುಲೆನ್ಸ್ ಚಾಲಕರಿಗೆ ವೇತನ ಎರಡು ತಿಂಗಳಿನಿಂದ ಕೊಟ್ಟಿಲ್ಲ. ಅವರು ಜೀವನ ಹೇಗೆ ಸಾಧಿಸಬೇಕು ? ನನ್ನಂತ ಬ್ರಿಲಿಯಂಟ್ ಮಿನಿಸ್ಟರ್ ಯಾರೂ ಇಲ್ಲ. ನಾನೊಬ್ಬ ವೈದ್ಯ. ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಸಚಿವ ಎರಡೂ ಇದ್ದರೆ ಕಾರ್ಯ ನಿರ್ವಹಿಸಲು ಸುಗಮ ಎಂದು ಲಾಬಿ ನಡೆಸಿ ಬಿ. ಶ್ರೀರಾಮುಲು ಖಾತೆ ಕಸಿದುಕೊಂಡ ಸುಧಾಕರ್ ಅವರೇ ಆಂಬ್ಯುಲೆನ್ಸ್ ಚಾಲಕರಿಗೆ ಸಂಬಳ ನೀಡಲಾಗದ ಸ್ಥಿತಿಗೆ ಆರೋಗ್ಯ ಇಲಾಖೆಯನ್ನು ತಂದು ಬಿಟ್ಟರೇ ಎಂಬ ಅನುಮಾನ ಕಾಡತೊಡಗಿದೆ. ಕರೋನಾ ವಾರಿಯರ್ಸ್ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿ ಅವರಿಂದ ಸೇವೆ ಮಾಡಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ಬಿಎಂಟಿಸಿ ಚಾಲಕರಂತೆ ಅವರೂ ಬೀದಿಗೆ ಇಳಿದಿದ್ದರೆ, ಸುಧಾಕರ್ ಅವರೇ ನಿಮ್ಮ ಸಚಿವಗಿರಿ ಸ್ಥಿತಿ ಏನಾಗುತ್ತಿತ್ತು ?
Recommended Video
ಸಂಬಳ ಕೊಡಿ ಸತ್ತ ಹಣ ನೀವೇ ಹಿಡ್ಕೊಳ್ಳಿ
ನನಗೆ ಇಬ್ಬರು ಮಕ್ಕಳು. ಪತ್ನಿ, ಪ್ರತಿ ದಿನ ಕರೋನಾ ಪೀಡಿತರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದೇನೆ. ನನ್ನ ಮಕ್ಕಳಿಗೂ ಕೊರೋನಾ ಬರುವ ಭೀತಿಯಿಂದ ಎರಡೆರಡು ಪಾಳಿಯಲ್ಲಿ ಆಂಬ್ಯುಲೆನ್ಸ್ನಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಹೊರಗೆ ಮಲಗುತ್ತೇನೆ. ಹೆಸರಿಗೆ ನಾವು ಕರೋನಾ ವಾರಿಯರ್ಸ್, ಕೊರೊನಾ ಬಂತು ಸತ್ತರೆ, 30 ಲಕ್ಷ ಕೊಡ್ತೀವಿ ಅಂತ ಹೇಳ್ತಾರೆ. ಸ್ವಾಮಿ ಆ ಮೂವತ್ತು ಲಕ್ಷ ನೀವೇ ಇಟ್ಟುಕೊಳ್ಳಿ. ಸದ್ಯ ನಮಗೆ ಬದುಕಲಿಕ್ಕೆ ಬೇಕಿರುವುದು ನಮ್ಮ ಶ್ರಮದ ವೇತನ. ಅದನ್ನು ಕೊಡಿ ಸಾಕು. ಜೀವದ ಹಂಗು ತೊರೆದು ದುಡಿದರೂ ಉಪವಾಸ ಇರಬೇಕಾ ? ನಮ್ಮ ಸೇವೆಯ ಬಗ್ಗೆ ಆರೋಗ್ಯ ಸಚಿವರಿಗೆ ಸಣ್ಣ ಕಾಳಜಿಯೂ ಇಲ್ಲ ! ಇದ್ದಿದ್ದರೆ ಇಂತಹ ಕಷ್ಟ ಕಾಲದಲ್ಲಿ ಸಂಬಳ ಕೊಡದೇ ಇರುತ್ತಿರಲಿಲ್ಲ. ನಮಗೆ ಸಂಬಳ ನೀಡಲಾಗದಂಥ ದರಿದ್ರಾ ಬಂದು ಬಿಟ್ಟಿದೆಯೇ ? ಎಂದು ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಚಾಲಕರೊಬ್ಬರು ಒನ್ಇಂಡಿಯಾ ಕನ್ನಡ ಜತೆ ತನ್ನ ನೋವು ತೋಡಿಕೊಂಡರು.