ಮುಂಬೈ ದಾಳಿಗೆ 10 ವರ್ಷ: ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದೇನು?
ಬೆಂಗಳೂರು, ನವೆಂಬರ್ 26: ಮುಂಬೈ 26/11 ದಾಳಿಗೆ 10 ವರ್ಷ ಆಗಿದ್ದು, ಆ ದಿನ ನಡೆದ ಭೀಕರ ದಾಳಿ ಬಗ್ಗೆ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ನೆನಪು ಮಾಡಿಕೊಂಡಿದ್ದಾರೆ. ಜತೆಗೆ ಆ ದಾಳಿಯ ನಂತರ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಕೂಡ ಪರಾಮರ್ಶೆ ಮಾಡಿಕೊಳ್ಳುವ ಸನ್ನಿವೇಶ ಇದು ಎಂದಿದ್ದಾರೆ.
ಪಾಕಿಸ್ತಾನದ ಉಗ್ರರು ನಡೆಸಿದ ಮುಂಬೈ ದಾಳಿಯಲ್ಲಿ 166 ಅಮಾಯಕರು ಮೃತಪಟ್ಟಿದ್ದರೆ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದರಲ್ಲಿ ಮಹಿಳೆಯರು-ಮಕ್ಕಳು ಒಳಗೊಂಡಿದ್ದರು. ತುಕಾರಾಮ್ ಓಂಬಳೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್, ಎನ್ ಎಸ್ ಜಿ ಸುನೀಲ್ ಯಾದವ್, ಪೊಲೀಸ್ ಅಧಿಕಾರಿಗಳಾದ ಸಲಸ್ಕರ್, ಕಾಮ್ಟೆ, ಕರ್ಕರೆ ಇನ್ನೂ ಹಲವು ಯೋಧರು, ಪೊಲೀಸ್ ಅಧಿಕಾರಿಗಳು ಆ ಭೀಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದಾರೆ.
ಮುಂಬೈ ದಾಳಿ: ಹತ್ತು ವರ್ಷ ಕಳೆದರೂ ಇನ್ನೂ ಮಾಸದ ಗಾಯದ ಕಲೆ
ನಮ್ಮ ದೇಶ ಹಾಗೂ ಆರ್ಥಿಕತೆ ಮೇಲೆ ನಡೆಸಿದ ಭೀಕರ ದಾಳಿ ಅದು. ಪಾಕಿಸ್ತಾನದಿಂದ ಬಂದ ಹತ್ತು ಉಗ್ರರು ಮೂರು ದಿನ ನಡೆಸಿದ ಕೃತ್ಯವ್ಯ್ ಗುಂಡಿನ ಚಕಮಕಿ, ಗ್ರೆನೇಡ್ ದಾಳಿಯಷ್ಟೇ ಆಗಿರಲಿಲ್ಲ. ಸೇನೆಯೊಂದು ನಡೆಸುವ ದಾಳಿಯ ರೀತಿಯಲ್ಲಿ ಯೋಜಿಸಿದ ಕೃತ್ಯ ಅದಾಗಿತ್ತು. ಭಾರತದ ವಾಣಿಜ್ಯ ರಾಜಧಾನಿಯನ್ನು ಸರ್ವನಾಶ ಮಾಡುವ ಹುನ್ನಾರ ಮಾಡಿದ್ದರು. ನಮ್ಮ ವಿರುದ್ಧದ ಪದೇಪದೇ ನಡೆಸಿದ ಯುದ್ಧವನ್ನು ನೆನಪಿಸುವ ಘಟನೆ ಅದು ಎಂದು ನೆನಪಿಸಿಕೊಂಡಿದ್ದಾರೆ.
ಆಗ ಸರಕಾರದ ಮೇಲ್ ಸ್ತರದಲ್ಲಿದ್ದವರು ವಿಫಲರಾಗಿದ್ದಕ್ಕೆ ಆ ದಾಳಿಯು ಸ್ಪಷ್ಟ ನಿದರ್ಶನ. ಆದ್ದರಿಂದ ಸಂಸತ್ ನ ಹೊರಗೆ ಹಾಗೂ ಒಳಗೆ ಉತ್ತರದಾಯಿತ್ವದ ಬಗ್ಗೆ ಧ್ವನಿ ಎತ್ತಿದೆ. ಅಮೆರಿಕದಲ್ಲಿ ನಡೆದ ಭಯೋತ್ಪಾದನಾ ದಾಳಿ ವೇಳೆ ವೈಫಲ್ಯಕ್ಕೆ ಏನು ಕಾರಣ ಎಂದು ತಿಳಿಯಲು ನಿಯೋಗ ರಚಿಸಲಾಗಿತ್ತು ಆದರೆ ಭಾರತ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಸಂತ್ರಸ್ತರಾದವರಿಗೆ ಉತ್ತರದಾಯಿತ್ವ ಯಾರು ಎಂಬ ಪ್ರಶ್ನೆಗೆ ಆಗಿನ ಯುಪಿಎ ಸರಕಾರ ಉತ್ತರ ಕೂಡ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
26/11 ದಾಳಿ ಪಕ್ಕಕ್ಕಿಟ್ಟು ತಾಜ್ನಲ್ಲಿ ಚಾ ಕುಡಿಯೋಣ ಬನ್ನಿ
ಉಗ್ರಗಾಮಿಗಳ ದಾಳಿ ಬಗ್ಗೆ ವರದಿಗಳನ್ನು ಕಾಂಗ್ರೆಸ್ ನಾಯಕರು ಹೇಗೆ ನಿರ್ಲಕ್ಷ್ಯ ಮಾಡುತ್ತಾ ಬಂದರು ಎಂಬುದು ನಮಗೆ ಗೊತ್ತಿದೆ ಎಂದಿರುವ ಅವರು, ಆ ನಂತರ ನನ್ನನ್ನೂ ಒಳಗೊಡಂತೆ ಅಜಿತ್ ದೋವಲ್ ಮತ್ತಿತರರು ನೀಡಿದ ವರದಿಯಲ್ಲಿ ರಾಷ್ಟ್ರೀಯ ಭಯೋತ್ಪಾದನಾ ಪ್ರತಿ ದಾಳಿ ರಚನೆ ಹೇಗಿರಬೇಕು ಎಂಬುದರ ಪ್ರಸ್ತಾವ ಮಾಡಿದ್ದೆವು. ಆದ್ದರಿಂದಲೇ ಕೌಂಟರ್ ಟೆರರಿಸಂ ಏಜೆನ್ಸಿ ಆರಂಭಿಸಲಾಯಿತು ಎಂದಿದ್ದಾರೆ.
ಆ ವರದಿ ಬಿಡುಗಡೆಯಾದ ಮೇಲೆ ಪಾಕಿಸ್ತಾನವು ಆತಂಕಕ್ಕೆ ಒಳಗಾಯಿತು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಸಂಸತ್ ನಲ್ಲೂ ನಿರಂತರವಾಗಿ ಧ್ವನಿ ಎತ್ತುತ್ತಿದ್ದೇನೆ. ಕಡಲ ತೀರದಲ್ಲಿ ತೆಗೆದುಕೊಂಡ ಸುರಕ್ಷಾ ಕ್ರಮಗಳ ಬಗ್ಗೆ ಆಗಿನ ಸರಕಾರವನ್ನು ಪ್ರಶ್ನಿಸಿದ್ದೆ. ಆಗ ನಾನು ವರದಿಯಲ್ಲಿ ಮಾಡಿದ್ದ ಶಿಫಾರಸು ಜಾರಿಗೊಳಿಸಲಾಗಿತ್ತು ಎಂದು ತಿಳಿದು ಹೃದಯ ತುಂಬಿ ಬಂತು. ಇನ್ನು ಮುಂಬೈ ದಾಳಿಯ ತನಿಖೆ ಎಲ್ಲಿಯವರೆಗೆ ಬಂತು ಎಂಬ ಬಗ್ಗೆ ಕೂಡ ಪ್ರಶ್ನೆ ಕೇಳಿದ್ದೆ ಎಂದು ಹೇಳಿದ್ದಾರೆ.
ಮುಂಬೈ ದಾಳಿಗೆ 10 ವರ್ಷ: ಉಗ್ರರ ಸುಳಿವು ನೀಡಿದರೆ 35 ಕೋಟಿ ರು
ಎರಡು ವರ್ಷಗಳ ಹಿಂದೆ ಸಂಸತ್ ನಲ್ಲಿ ನಿರ್ಣಯವನ್ನು ಮಂಡಿಸಿದ್ದೆ. ಪಾಕಿಸ್ತಾನವನ್ನು ಭಯೋತ್ಪಾದನಾ ರಾಷ್ಟ್ರ ಎಂದು ಘೋಷಣೆ ಮಾಡುವಂತೆ ಖಾಸಗಿ ಮಸೂದೆ ಮಂಡಿಸಿದ್ದೆ. ದಾಳಿ ನಡೆದ ಹತ್ತು ವರ್ಷದ ನಂತರವೂ ಪಾಕಿಸ್ತಾನ ಮೂಲದ ದಾಳಿಕೋರರು ಉತ್ತರದಾಯಿತ್ವ ಹಾಗೂ ನ್ಯಾಯ ತೀರ್ಮಾನದಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದನೆಗೆ ಬಲಿಪಶುಗಳಾದವರನ್ನು ಈ ದಿನ ನೆನಪಿಸಿಕೊಳ್ಳೋಣ. 26/11ರ ಘಟನೆಯಲ್ಲಿ ಜೀವ ತ್ಯಾಗ ಮಾಡಿದವರು ಹಾಗೂ ಹೋರಾಡಿದವರನ್ನು ನೆನಪಿಸಿಕೊಳ್ಳೋಣ. ಪಾಕಿಸ್ತಾನ ಮಾತ್ರ ಅಲ್ಲ, ಬೇರೆ ಯಾವುದೇ ದೇಶವು ಭಾರತವನ್ನು ದುರ್ಬಲ, ಕೈಲಾಗದ ದೇಶ ಅಂದುಕೊಳ್ಳಬಾರದು. ದೇಶದ ನಾಗರಿಕರ ರಕ್ಷಣೆ ಹಾಗೂ ಸುರಕ್ಷೆಗಾಗಿ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.