'ಸ್ಫೋಟಕ್ಕೂ ಮುನ್ನ 10ಕ್ಕೂ ಹೆಚ್ಚು ಮಕ್ಕಳು ಅಲ್ಲೇ ಆಡುತ್ತಿದ್ದರು'
ಬೆಂಗಳೂರು, ಮೇ 20: ವೈಯಾಲಿಕಾವಲ್ ನಲ್ಲಿ ಸ್ಫೋಟಕ್ಕೂ ಮುನ್ನ 10ಕ್ಕೂ ಹೆಚ್ಚು ಮಕ್ಕಳು ಆಟವಾಡುತ್ತಿದ್ದರು, ಒಂದೊಮ್ಮೆ ಮಕ್ಕಳು ಆಟವಾಡುತ್ತಿರಬೇಕಾದರೇ ಸ್ಪೋಟ ಸಂಭವಿಸಿದ್ದರೆ ಏನು ಗತಿ? ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಸಕ ಮುನಿರತ್ನ ನಿವಾಸವಿರುವ ವೈಯಾಲಿಕಾವಲ್ನಲ್ಲಿ ಭಾನುವಾರ ಸಂಭವಿಸಿದ ಕೆಮಿಕಲ್ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದರು.
ಆದರೆ ಸ್ಪೋಟಕ್ಕೂ ಕೆಲವೇ ನಿಮಿಷಗಳ ಮೊದಲು ಅದೇ ಜಾಗದಲ್ಲಿ 10ಕ್ಕೂ ಹೆಚ್ಚು ಮಕ್ಕಳು ಆಟವಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಶಾಸಕ ಮುನಿರತ್ನ ನಿವಾಸದ ಬಳಿ ಸ್ಫೋಟ, 1 ಸಾವು
ಒಂದೊಮ್ಮೆ ಮಕ್ಕಳಿದ್ದಾಗ ಸ್ಪೋಟ ಸಂಭವಿಸಿದ್ದರೆ ಗತಿ ಏನು, ಜೀವಕ್ಕೆ ಆಪತ್ತು ತರುವ ರಾಸಾಯನಿಕವನ್ನು ಯಾರಾದರೂ ಮನೆಯಲ್ಲಿ ತಂದಿರಿಸಿಕೊಳ್ಳುತ್ತಾರೆಯೇ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಕೆಮಿಕಲ್ ಮನೆಗೆ ತರುವಾಗ ಮುನಿರತ್ನ ಅವರು ಯಾಕೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿಲ್ಲ, ಅವರ ಮನೆಯಲ್ಲಿ ಅದೇ ರೀತಿಯ ಇನ್ನೂ 20 ಕಂಟೈನರ್ಗಳಿವೆ. ಜೆಪಿನಗರದಲ್ಲಿ ಮೂರ್ತಿಯೊಂದನ್ನು ನಿರ್ಮಿಸುವ ಸಲುವಾಗಿ ಅದನ್ನು ತರಿಸಲಾಗಿತ್ತು.
ಶಾಸಕರ ನಿರ್ಲಕ್ಷ್ಯಕ್ಕೆ ಕೆಲಸಗಾರ ಬಲಿಯಾಗಬೇಕಾಯಿತು, ಕೇವಲ 20 ಸೆಕೆಂಡುಗಳಲ್ಲಿ ವೆಂಕಟೇಶ್ ಪ್ರಾಣ ಹೋಗಿತ್ತು.
ವೆಂಕಟೇಶ್ ಹಾಗೂ ನನ್ನ ತಂದೆ ಸ್ನೇಹಿತರಾಗಿದ್ದರು, ನಾವು ಕೂಡ ಉತ್ತಮ ಸ್ನೇಹಿತರಾಗಿದ್ದೆವು, ಅವರ ಮನೆಗೆ ಯಾವ ರೀತಿಯ ಹಣಕಾಸಿನ ನೆರವು ಬೇಕಾದರೂ ನಾನು ಮಾಡುತ್ತೇನೆ ಎಂದು ಶಾಸಕ ಮುನಿರತ್ನ ತಿಳಿಸಿದ್ದಾರೆ.