ಬಳ್ಳಾರಿಯ ಏಕಶಿಲಾ ಬೆಟ್ಟದ ಕೋಟೆ ಸ್ವಚ್ಛಗೊಳಿಸಿದ ಯುವಾ ಬ್ರಿಗೇಡ್
ಬಳ್ಳಾರಿ, ಜೂನ್. 25: ಯುವಾ ಬ್ರಿಗೇಡ್ ಸ್ವಚ್ಛ ಸ್ಮಾರಕ - ಸುಂದರ ಸ್ಮಾರಕ ಟ್ಯಾಗ್ ಲೈನ್ ಅಡಿಯಲ್ಲಿ ಐತಿಹಾಸಿಕ ಏಕಶಿಲಾ ಬೆಟ್ಟದ ಕೋಟೆಯ ಒಳಭಾಗದ ನೈರ್ಮಲ್ಯವನ್ನು ತೆಗೆದು ಇಡೀ ಕೋಟೆಯ ಸೌಂದರ್ಯವನ್ನು ಹೆಚ್ಚಿಸಿದೆ.
ಯುವಾ ಬ್ರಿಗೇಡ್ ರಾಜ್ಯಾದ್ಯಂತ ಐತಿಹಾಸಿಕ ಸ್ಮಾರಕಗಳಾದ ಕೋಟೆಗಳು, ಕಲ್ಯಾಣಿಗಳು, ದೇವಸ್ಥಾನಗಳನ್ನು ಸ್ವಚ್ಛಗೊಳಿಸುವ ಮೂಲಕ ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಬಳ್ಳಾರಿಯ ಐತಿಹಾಸಿಕ ಏಕಶಿಲಾ ಬೆಟ್ಟದ ಕೋಟೆಯ ಒಳಭಾಗದ ನೈರ್ಮಲ್ಯವನ್ನು ತೆಗೆದು ಇಡೀ ಕೋಟೆಯ ಸೌಂದರ್ಯವನ್ನು ಹೆಚ್ಚಿಸಿದೆ.
ಸ್ಮಶಾನದಲ್ಲಿ ಶಿವರಾತ್ರಿ ಆಚರಿಸುತ್ತಿರುವ ಯುವಾ ಬ್ರಿಗೆಡ್
ಕೋಟೆಯನ್ನು ಹತ್ತುವ ಮಾರ್ಗದ ಉದ್ದಕ್ಕೂ ಪ್ರವಾಸಿಗರು ಎಸೆದುಹೋಗಿದ್ದ ಪ್ಲಾಸ್ಟಿಕ್ ಗಳನ್ನು, ಹಾಳೆಗಳನ್ನು, ಬಾಟಲ್ ಗಳನ್ನು ಆರಿಸಿ, ಸ್ವಚ್ಛಗೊಳಿಸಲಾಯಿತು. ಕೋಟೆಯು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಮೂಟೆಗಟ್ಟಲೆ ಕುಡಿದು ಎಸೆದು ಹೋಗಿದ್ದ ಮದ್ಯದ ಬಾಟಲ್ ಗಳನ್ನು ಬ್ರಿಗೇಡ್ ಸದಸ್ಯರು ಆರಿಸಿದರು.
ನಂತರ, ಎಲ್ಲಾ ಕಸವನ್ನೂ ಆರಿಸಿದ ಬಳಿಕ ಕಲ್ಲಿನ ಮೇಲೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಬರಹಗಳನ್ನು ಬಣ್ಣದಿಂದ ಬಳಿದು, ಜಾಗೃತಿ ಮೂಡಿಸುವ ಯತ್ನ ಮಾಡಿದರು.
ಈ ಕುರಿತು ಮಾತನಾಡಿದ ಬಳ್ಳಾರಿಯ ಯುವಾ ಬ್ರಿಗೇಡ್ ನ ಜಿ.ಎಂ. ಜಗದೀಶ್ "ಬಳ್ಳಾರಿಯಲ್ಲಿ ಇದೊಂದು ಉತ್ತಮ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರಿಗಾಗಿ ಕುಡಿಯುವ ನೀರಿನ ಸೌಕರ್ಯ, ಕೋಟೆಯ ಬಗ್ಗೆ ಮಾಹಿತಿ ಫಲಕ, ಕಸ ಎಸೆಯಲು ಡಸ್ಟ್ ಬಿನ್ ವ್ಯವಸ್ಥೆ, ಸುಂದರ ಹಸಿರ ಹುಲ್ಲಿನ ವಾತಾವರಣ
ಕೋಟೆಯುದ್ದಕ್ಕೂ ಲೈಟ್ ಗಳ ವ್ಯವಸ್ಥೆ, ಅನೈತಿಕ ಚಟುವಟಿಕೆಗಳನ್ನು ತಡೆಯಲು ಸೂಕ್ತ ಪೋಲೀಸ್ ಭದ್ರತೆ, ಕೋಟೆಯ ಮಾಹಿತಿ ವಿವರಿಸಲು ಗೈಡ್ ಗಳನ್ನು ನಿಯೋಜಿಸುವ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ಇದು ರಾಜ್ಯದಲ್ಲಿಯೇ ಮಾದರಿ ಕೋಟೆಯಾಗಲಿದೆ" ಎಂದು ಅವರು ತಿಳಿಸಿದರು.
ಯುವಾ ಬ್ರಿಗೇಡ್ ನ ವಿಭಾಗೀಯ ಸಂಚಾಲಕರಾದ ಧೀರಜ್, ಜಿಲ್ಲಾ ಸಂಚಾಲಕರಾದ ಗುರುಪ್ರಸಾದ್, ಲಕ್ಷ್ಮಿನಾರಾಯಣ್, ಸುರೇಶ್, ಮಹಾಂತೇಶ, ವೀರೇಶ್, ಚಂದ್ರಶೇಖರ್, ಸಮೀರ್ ಆಚಾರ್, ಶಂಕರ್, ಶರಣ, ಶೇಖರ್ ಮತ್ತಿತರರು ಹಾಜರಿದ್ದರು.