ಕೂಡ್ಲಿಗಿಯಲ್ಲಿ ಹೋಳಿಗೆಮ್ಮ ಹಬ್ಬ, ಮಾತಾಡಂಗಿಲ್ಲ, ಊಟ ಹಾಕಂಗಿಲ್ಲ
ಬಳ್ಳಾರಿ, ಜೂನ್ 9: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಉತ್ತಮ ಮಳೆ, ಬೆಳೆ ಮತ್ತು ಜನ -ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ, 'ಹೋಳಿಗೆಮ್ಮ' ಹಬ್ಬವನ್ನು ಆಚರಿಸಿ, ಊರಮ್ಮಳನ್ನು ತೃಪ್ತಿಪಡಿಸಿದ್ದಾರೆ.
ಇದು ವಿಶಿಷ್ಟವಾದ ಆಚರಣೆ. ಸಂಪ್ರದಾಯ. ಈ ಹಬ್ಬದ ಆರಣೆಯಿಂದಾಗಿಯೇ ತಾಲೂಕಿನಲ್ಲಿ ಯಾವುದೇ ಭೀಕರ ರೋಗ- ರುಜಿನಗಳು, ಪ್ರಕೃತಿ ವಿಕೋಪಗಳು ನಡೆಯುತ್ತಿಲ್ಲ. ಆ ಕಾರಣ ನಾವೆಲ್ಲರೂ ಜಾತ್ಯತೀತರಾಗಿ ಈ ಹಬ್ಬವನ್ನು ಆಚರಿಸುತ್ತೇವೆ ಎನ್ನುತ್ತಾರೆ ಇಲ್ಲಿಯ ಹೆಂಗಳೆಯರು.
ಜೂ 13ಕ್ಕೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಪೇಜಾವರ ಶ್ರೀಗಳ ಇಫ್ತಾರ್ ಕೂಟ
ಗೃಹಿಣಿಯರು ಶ್ರದ್ಧೆ, ಭಕ್ತಿ ಮತ್ತು ಮಡಿವಂತಿಕೆಯಿಂದ ಹೂರಣ ಮಾಡಿ, ಹೋಳಿಗೆ ಬೇಯಿಸಿ, ನಾನಾ ರೀತಿ ಅಡುಗೆಗಳನ್ನು ಸಿದ್ಧಪಡಿಸುತ್ತಾರೆ. ಆ ನಂತರ ಮಡಿಕೆಯಲ್ಲಿ ಅವುಗಳೆಲ್ಲವನ್ನೂ ಬೇವಿನ ಎಲೆಯ ಜೊತೆಯಲ್ಲಿ ಇರಿಸಿ, ಪೂಜೆ ಮಾಡುತ್ತಾರೆ. ಊರಮ್ಮ ದೇವಿಯ ಆಲದ ಮರದ ಕೆಳಗಡೆ ಮಡಿಕೆಯನ್ನು ಇರಿಸಿ, ದೇವಿಗೆ ನಮಸ್ಕಾರ ಮಾಡಿ, ಪ್ರಾರ್ಥನೆ ಸಲ್ಲಿಸಿ, ನೈವೇದ್ಯ ಮಾಡುವುದು ವಾಡಿಕೆ.
ಈ ಆಚರಣೆಯ ಹಿನ್ನೆಲೆ - ಇತಿಹಾಸ ಇಲ್ಲಿನ ಜನರಿಗೆ ತಿಳಿದಿಲ್ಲ. ಆದರೂ ಈ ಹಬ್ಬದ ಆಚರಣೆ ತಪ್ಪಿಲ್ಲ, ಯಾರೂ ಕೈ ಬಿಟ್ಟಿಲ್ಲ. ಪ್ರತೀ ವರ್ಷ ತಪ್ಪದೇ ನಿಗದಿತ ದಿನದಂದು, ನಕ್ಷತ್ರ - ತಿಥಿ ಆಧರಿಸಿ ಆಚರಣೆ ಆಗುತ್ತಿದೆ.
ಹ್ಞಾಂ, ಈ ಹಬ್ಬದ ಆರಣೆಯಲ್ಲಿ ಒಂದೆರೆಡು ಷರತ್ತುಗಳು ಇವೆ. ಮೊದಲನೆಯದ್ದು, ಊರಮ್ಮಳಿಗೆ ಅಡುಗೆ ತೆಗೆದುಕೊಂಡು ಹೋಗುವಾಗ ಮನೆಯವರು ಎಲ್ಲರೂ, ಸಾಧ್ಯವಿದ್ದವರು ಮೌನವಾಗಿಯೇ ದೇವರಲ್ಲಿಗೆ ಹೋಗಬೇಕು. ದೇವರ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದ ನಂತರವೇ ಮೌನ ಮುರಿಯಬೇಕು.
ದೇವರಿಗೆ ಹರಕೆ ಸಲ್ಲಿಸಿ, ಮನೆಗೆ ಬಂದ ನಂತರ ಅಡುಗೆಯನ್ನು ಮನೆ ಮಂದಿಯೇ ತಿನ್ನಬೇಕು. ಹೊರಗಿನವರು ರುಚಿ ನೋಡಲೂ ಅವಕಾಶ ನೀಡಬಾರದು.
ಈ ಎರಡು ಷರತ್ತುಗಳು ತಪ್ಪದೇ ಅನುಷ್ಠಾನಗೊಳ್ಳುತ್ತವೆ. ಊರೆಲ್ಲಾ ಹಬ್ಬದಲ್ಲಿ ತೊಡಗಿರುವಾಗ ಪಕ್ಕದ ಮನೆಗೆ ಊಟಕ್ಕೆ ಯಾರು ಹೋಗುತ್ತಾರೆ ಅಂತ ಮೂಗು ಮುರಿಯಬೇಡಿ. ಹಬ್ಬಕ್ಕಾಗಿ ನೆಂಟರನ್ನೂ ಕರೆಯುವಂತಿಲ್ಲ. ಈ ಹಬ್ಬವನ್ನು ಊರಲ್ಲಿ ಎಲ್ಲರೂ ಆಚರಿಸುತ್ತಾರೆ. ಆ ಕಾರಣ ಊರವರು ಯಾರ ಮನೆಗೂ ಊಟಕ್ಕೆ ಹೋಗುವುದಿಲ್ಲ.
ಅಂದಹಾಗೆ, ಈಚೆಗೆ ಅಂದರೆ ನಾಲ್ಕು ದಿನದ ಹಿಂದೆ, ಜೂನ್ 5ರ ಮಂಗಳವಾರ ಹೋಳಿಗೆಯಮ್ಮ ಹಬ್ಬವನ್ನು ಊರವರು ಅದ್ಧೂರಿಯಾಗಿ ಮನೆ ಮನೆಯಲ್ಲೂ ಆಚರಣೆ ಮಾಡಿದ್ದಾರೆ.