ಸೋಜಿಗ ಹುಟ್ಟಿಸುವ ಗೀಜಗದ ಜಗತ್ತು, ಸಂತಸ ಪಡಲು ಕಾರಣ ಅದೆಷ್ಟೋ!
ಬಳ್ಳಾರಿ, ಆಗಸ್ಟ್ 17: ಅಲ್ಲಿ ಗೀಜಗದ ಕಲರವ. ಗುಂಪು ಗುಂಪಾಗಿ ಹಾರಾಡುವ ಗೀಜಗಗಳು ನೆಲೆಸುವುದು ತಾವೇ ಕಟ್ಟಿಕೊಂಡ ಗೂಡುಗಳಲ್ಲಿ. ಗಿಡಗಳ ಕೊಂಬೆ - ರೆಂಬೆಗಳಿಗೆ ತೂಗಿಕೊಂಡು ನೇತಾಡುವ ಗೂಡುಗಳ ಮಧ್ಯೆ ಸದಾಕಾಲ ಗೀಜಗಗಳ ಸದ್ದು, ಗದ್ದಲ, ಹಾರಾಟ, ನಿನಾದ ಇರುತ್ತವೆ.
ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಸೇರಿ ಹಲವೆಡೆ ಇರುವ ಐತಿಹಾಸಿಕ ಬಾವಿಗಳ ಕಡೆ ಸುತ್ತಾಡಿದಾಗ ಕಂಡುಬರುವ ಕುರುಚಲು ಗಿಡಗಳ ಕೊಂಬೆ - ರೆಂಬೆಗಳಿಗೆ ನೇತಾಡುತ್ತಿರುವ ಗೀಜದ ಗೂಡುಗಳನ್ನು ನೋಡುವುದೂ ಪಕ್ಷಿಗಳನ್ನು ನೋಡಿದಷ್ಟೇ ಅಹ್ಲಾದಕರ.
ಹಂಪಿಯಲ್ಲಿ ಕಾಣಿಸಿಕೊಂಡಿದೆ ಅಪರೂಪದ ಹಳದಿಕಾಲಿನ ಹಸಿರು ಪಾರಿವಾಳ
ಮೇ ತಿಂಗಳಿಂದ ಸೆಪ್ಟೆಂಬರ್ ಅಂತ್ಯದ ವರೆಗೂ ಗೀಜಗಗಳು ಗುಂಪು ಗುಂಪಾಗಿ ಕಟ್ಟಿರುವ, ತಲೆಕೆಳಗಾಗಿ ನೇತಾಡುವ ಕಾಲುಚೀಲವನ್ನು ಹೋಲುವ ಕಲಾತ್ಮಕ ಗೂಡುಗಳನ್ನು ಹಾಗೂ ಗೂಡುಗಳಲ್ಲಿನ ಮರಿಗಳಿಗೆ ತಮ್ಮ ಕೊಕ್ಕಿನಿಂದ ಆಹಾರವನ್ನು ಉಣಿಸುವ ದೃಶ್ಯಗಳನ್ನು ಕಣ್ಣು ತಣಿಯುವವರೆಗೂ ನೋಡಬಹುದು.
ಗುಬ್ಬಿಯಷ್ಟೇ ದಪ್ಪ, ಉದ್ದ ಇರುವ ಗೀಜಗ ಹಕ್ಕಿಗಳು ಗುಂಪು ಗುಂಪಾಗಿ ವಾಸಿಸಿ, ಹಾರಾಡಿ, ಆಹಾರಕ್ಕಾಗಿ ಹುಡುಕಾಡುತ್ತವೆ. ಅವುಗಳು ಒಂದಕ್ಕಿಂತ ಒಂದು ವಿಶೇಷವಾಗಿ ಪಕ್ಷಿಪ್ರಿಯರನ್ನು ಪುಳಕಗೊಳಿಸುತ್ತವೆ.
ಕೆಂಚನಗುಡ್ಡದ ಸುತ್ತ ಕಿಂಗ್ ಫಿಷರ್ ಗಳ ಕಲರವ ಕೇಳ ಬನ್ನಿ
ನೀರಾವರಿ ಪ್ರದೇಶದ ಭತ್ತದ ಗದ್ದೆಗಳಲ್ಲಿ ಕಟಾವಿನ ನಂತರ ಉದುರಿರುವ ಕಾಳು, ಚಿಕ್ಕಪುಟ್ಟ ಕ್ರಿಮಿ-ಕೀಟಗಳು ಇವುಗಳ ಮುಖ್ಯ ಆಹಾರ. ಗುಂಪು ಗುಂಪಾಗಿಯೇ ನಿದ್ರಿಸುವ ಈ ಹಕ್ಕಿಗಳು, ಸಣ್ಣ ಸದ್ದಿಗೂ ಥಟ್ಟನೆ ಎಚ್ಚರಗೊಳ್ಳುತ್ತವೆ. ಸೂರ್ಯನ ಕಿರಣಗಳ ಜೊತೆ ಜೊತೆ ಹಾರಾಟ ಶುರುವಿಟ್ಟು, ಆಕಾಶದಲ್ಲಿ ಗಾಳಿಯ ಜೊತೆ ನರ್ತಿಸಿ, ಕುಣಿದು - ಕುಪ್ಪಳಿಸಿ ನೆಲಕ್ಕೆ ಬರುತ್ತವೆ.
ಮೇ ತಿಂಗಳಿಂದ ಸೆಪ್ಟೆಂಬರ್ ವರೆಗೂ ಗೂಡುಗಳಲ್ಲಿ ಮೊಟ್ಟೆಗಳನ್ನಿಟ್ಟು ಮರಿ ಮಾಡುವ ಈ ಹಕ್ಕಿಗಳು ಮರಿ ಮಾಡದ ಸಮಯದಲ್ಲಿ ದೇಹದ ಮೇಲಿನ ಹಳದಿ ಬಣ್ಣ ಮಂಕಾಗಿರುತ್ತದೆ. ಮರಿ ಮಾಡುವ ಸಮಯದಲ್ಲಿ ತಲೆ ಭಾಗ, ಹೊಟ್ಟೆಯ ಭಾಗದ ಹಳದಿ ಹೊಳೆಯುವ ಬಣ್ಣಕ್ಕೆ ತಿರುಗುತ್ತದೆ. ಆ ಕಾರಣಕ್ಕೆ ಗೂಡಿನ ಹತ್ತಿರ ಕಾಣುವ ಹಕ್ಕಿಗಳು ತಮ್ಮ ಬಣ್ಣದಿಂದಾಗಿಯೇ ಆಕರ್ಷಿಸುತ್ತವೆ.
ಸ್ವಾತಂತ್ರ್ಯ ದಿನದಂದು ದೇಶದಲ್ಲೇ ಮೊದಲ ಪೆಂಗ್ವಿನ್ ಜನನದ ಸಂಭ್ರಮ
ಸಂತಾನೋತ್ಪತ್ತಿ ಸಮಯದಲ್ಲಿ ಭತ್ತದ ಹುಲ್ಲು ಕಡ್ಡಿ ಹಾಗೂ ಕಬ್ಬಿನ ಎಲೆಗಳನ್ನು ತೆಳುವಾಗಿ ಸೀಳಿ ದಾರದಂತೆ ಮಾಡಿ, ಸುಂದರವಾದ ಗೂಡನ್ನು ನೇಯುತ್ತವೆ. ಅವುಗಳಲ್ಲಿ ಕೆಳ ಭಾಗದಲ್ಲಿ ಗೂಡಿಗೆ ಹೋಗುವ ಮಾರ್ಗವನ್ನು ಮಾಡಿಕೊಂಡಿರುತ್ತವೆ. ಮರಿ ಹಕ್ಕಿಗಳಿಗೆ ಅನುಕೂಲವಾಗುವಂತಹ ತಳಪಾಯದ ರಚನೆ ಇವುಗಳ ಕೌಶಲಕ್ಕೆ ಮಾದರಿ.
ಮನುಷ್ಯರು ಹಾಗೂ ಪ್ರಾಣಿಗಳು ಗೂಡನ್ನು ನಾಶ ಮಾಡದಂತೆ ಇವುಗಳು ಬಾವಿ, ಕಮರಿಗಳ ಕಡೆ ವಾಲಿರುವ ರೆಂಬೆಗಳಲ್ಲಿ ಮಾತ್ರ ಗೂಡನ್ನು ಕಟ್ಟುತ್ತವೆ. 'ಗೀಜದ ಗೂಡುಗಳು, ಅವುಗಳ ಹಾರಾಟ, ಅವುಗಳ ಕೂಗು ಎಲ್ಲವೂ ವಿಶೇಷ. ಅವುಗಳನ್ನು ಕಂಡಾಗಲೆಲ್ಲಾ ಪಕ್ಷಿಪ್ರಿಯರು ವಿಶೇಷವಾದ ಸಂತಸ ಅನುಭವಿಸುವುದು ಖಚಿತ' ಎಂದು ಪಕ್ಷಿ ತಜ್ಞ ಹಾಗೂ ಛಾಯಾಗ್ರಾಹಕ ಅಂದಾನಗೌಡ ದಾನಪ್ಪಗೌಡರ್ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.