ಅನಿಲ್ ಲಾಡ್ ಗೇ ಬಳ್ಳಾರಿ ಕಾಂಗ್ರೆಸ್ ಟಿಕೆಟ್ ಫೈನಲ್?!
ಬಳ್ಳಾರಿ, ಏಪ್ರಿಲ್ 14: ಕೈ ತಪ್ಪಬಹುದಾಗಿದ್ದ ಟಿಕೆಟ್ ಅನ್ನು ಬಿಗಿಯಾಗಿ ಹಿಡಿದುಕೊಳ್ಳುವಲ್ಲಿ ಬಳ್ಳಾರಿ ನಗರ ಶಾಸಕ ಅನಿಲ್ ಎಚ್. ಲಾಡ್ ಅವರು ಯಶಸ್ವಿ ಆಗಿದ್ದು, 'ನನಗೇ ಕಾಂಗ್ರೆಸ್ ಟಿಕೆಟ್. ಏಪ್ರಿಲ್ 19 ಅಥವಾ 20ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ನೀವೆಲ್ಲರೂ ಬನ್ನಿ. ನನ್ನನ್ನು - ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ' ಎಂದು ಆಪ್ತರಿಗೆ ಮಾಹಿತಿ ನೀಡುತ್ತಿದ್ದಾರೆ.
ಅನಿಲ್ ಲಾಡ್ ಕೈ ತಪ್ಪಲಿದೆ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್?
ಒನ್ಇಂಡಿಯಾ ಕನ್ನಡ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ಸಾಕಷ್ಟು ಎಡರು ತೊಡರುಗಳನ್ನು ದಾಟಿಕೊಂಡು ಬಂದಿದ್ದೇನೆ. ಶ್ರಮಪಟ್ಟು ಟಿಕೆಟ್ ಪಡೆಯುವಲ್ಲಿ ಯಶಸ್ಸು ಸಾಧಿಸಿದ್ದೇನೆ. ಕೊನೆಯದಾಗಿ ಪಟ್ಟಿ ಚುನಾವಣಾ ಸಮಿತಿಯನ್ನು ಸೇರಿದ್ದು, ನನ್ನ ಹೆಸರು ಇದೆ. ಖಂಡಿತವಾಗಿಯೂ ನಾನೇ ಬಳ್ಳಾರಿ ನಗರದಿಂದ ಸ್ಪರ್ಧಿಸುತ್ತೇನೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಅನಿಲ್ ಎಚ್. ಲಾಡ್ ಅವರಿಗೆ ಟಿಕೆಟ್ ನೀಡದಂತೆ ಬಳ್ಳಾರಿ ನಗರ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಅನೇಕ ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದಾರೆ. ಸ್ವಯಂ ಸಿದ್ದರಾಮಯ್ಯ ಅವರ ವ್ಯಕ್ತಿಗತ ವಿರೋಧ ಎದುರಿಸುತ್ತ, ಮಲ್ಲಿಕಾರ್ಜುನ ಖರ್ಗೆ ಆಶೀರ್ವಾದ ಪಡೆದಿರುವ ಅನಿಲ್, ಈ ಬಾರಿ ಟಿಕೇಟ್ ಪಡೆಯುವುದು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಪಕ್ಷದಲ್ಲೇ ವಿರೋಧ ಉಂಟಾಗಿತ್ತು.
ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷ ನಡೆಸಿದ್ದ ಎರಡು ಹಂತದ ಸಮೀಕ್ಷೆಯಲ್ಲಿ ಅನಿಲ್ ಲಾಡ್ ಮತ್ತೊಮ್ಮೆ ಸ್ಪರ್ಧಿಸಿದಲ್ಲಿ ಸೋಲುತ್ತಾರೆ. ಬೇರೆಯವರನ್ನು ಆರಿಸಿಕೊಳ್ಳುವುದು ಸೂಕ್ತ ಎನ್ನುವ ಲಿಖಿತ ಅಭಿಪ್ರಾಯ ಮೂಡಿತ್ತು. ಆದರೆ ಬಹು ನಿರೀಕ್ಷಿತ ಅಭ್ಯರ್ಥಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸದ ಕಾರಣ, ಹಾಲಿ ಶಾಸಕರಿಗೇ ಟಿಕೇಟ್ ನೀಡುವ ನೀತಿ ಅಡಿಯಲ್ಲಿ ಅನಿಲ್ ಎಚ್. ಲಾಡ್ ಟಿಕೆಟ್ ಪಡೆಯುವುದು ಬಹುತೇಕ ಖಚಿತವಾಗಿದೆ.
ಆದರೆ, ಮೊದಲ ಪಟ್ಟಿಯಲ್ಲಿ ಅನಿಲ್ ಲಾಡ್ ಹೆಸರಿದ್ದಲ್ಲಿ ಸೂಕ್ತ. ಮೊದಲ ಪಟ್ಟಿಯಲ್ಲಿ ಹೆಸರಿಲ್ಲ ಎಂದಾದಲ್ಲಿ ಎರಡನೇ, ಮೂರನೇ ಪಟ್ಟಿಯಲ್ಲೂ ಅವರ ಹೆಸರಿರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಮಧ್ಯೆ ಬಳ್ಳಾರಿ, ಹಗರಿಬೊಮ್ಮನಹಳ್ಳಿ ಟಿಕೆಟ್ ವಿಚಾರವಾಗಿ ಸಂರ್ಘರ್ಷ ನಡೆದಿದೆ. ಈಗ ಈ ಇಬ್ಬರಲ್ಲಿ ಗೆಲ್ಲುವವರು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.