ಮೊಳಕಾಲ್ಮೂರು ಟಿಕೆಟ್ ಕೇಳಿ ಕಾಂಗ್ರೆಸ್ಸಿಗರ ಬಲೆಗೆ ಬಿದ್ದರಾ ರಾಮುಲು?
ಬಳ್ಳಾರಿ, ಏಪ್ರಿಲ್ 14: ಸಂಸದ ಬಿ. ಶ್ರೀರಾಮುಲುಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪರಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಲಹೆ ನೀಡಿದವರು ಯಾರು? ಈ ಪ್ರಶ್ನೆ ಕಳೆದ ಮೂರ್ನಾಲ್ಕು ದಿನಗಳಿಂದ ಬಳ್ಳಾರಿ ಜಿಲ್ಲೆಯ ರಾಜಕೀಯ ಮತ್ತು ಪರಿಶಿಷ್ಟ ಪಂಗಡದವರಲ್ಲಿ ತೀವ್ರವಾಗಿ ಚರ್ಚೆ ಆಗುತ್ತಿದೆ.
ಅಂದು ಗಾಲಿ ಜನಾರ್ದನ ರೆಡ್ಡಿ ಹಾಕಿದ್ದ ಸ್ಕೆಚ್ ಯಾವುದು?
ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಂತೆಲ್ಲಾ ಪ್ರತೀ ಹಂತದಲ್ಲೂ ಕುತೂಹಲಕಾರಿ ತಿರುವುಗಳು ಸಿಗುತ್ತಿದ್ದು, ಕೊನೆಯಲ್ಲಿ ಸಿಕ್ಕ ಉತ್ತರ, 'ಹೀಗೂ ಉಂಟೇ?' ಎನ್ನುವಂತಿದೆ. ಏಕೆಂದರೆ ಈ ಸಲಹೆ ಕೊಟ್ಟ ವ್ಯಕ್ತಿ 'ಕಾಂಗ್ರೆಸ್ಸಿಗ'. ಯಾರು ಆ ಕಾಂಗ್ರೆಸ್ಸಿಗ? ಎಂಬ ಪ್ರಶ್ನೆ ಬೆನ್ನಟ್ಟಿ ಹೋದರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಕಾಂಗ್ರೆಸ್ಸಿಗರ ಹೆಸರು ಎದುರಾಗುತ್ತದೆ ವಿನಾ ಇವರೇ ಎಂಬ ಕೊನೆಯೇ ಸಿಗಲಿಲ್ಲ.
ಆದರೆ, ಬಳ್ಳಾರಿ ನಗರ ನಿವಾಸಿ, ಹಿರಿಯ ಕಾಂಗ್ರೆಸ್ ಮುಖಂಡ, ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ರಾಜಕೀಯ ಏಳುಬೀಳುಗಳಲ್ಲೂ ಜತೆಯಾಗಿದ್ದ ಹಿರಿಯ ಮುಖಂಡರೊಬ್ಬರ ಸಲಹಯಿಂದಲೇ ಬಿ. ಶ್ರೀರಾಮುಲು ಮೊಳಕಾಲ್ಮೂರು ಎಸ್ಟಿ ವಿಧಾನಸಭಾ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ ಎಂದು ಹೇಳುತ್ತಿದೆ ಮೂಲಗಳು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಆ ಹಾಲಿ ವಿಧಾನ ಪರಿಷತ್ ಸದಸ್ಯರು ಎಂಥ ದಾಳ ಉರುಳಿಸಿದರು ಎಂದು ಬಳ್ಳಾರಿ ನಗರದ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಕಾಂಗ್ರೆಸ್ ನಲ್ಲಿರುವ ತನ್ನ ವೈಯಕ್ತಿಕ - ವ್ಯಕ್ತಿಗತ ವಿರೋಧಿ ಮುಖಂಡರ ಭವಿಷ್ಯವನ್ನು ಹಾಳು ಮಾಡುವ ಉತ್ಸಾಹದಲ್ಲಿ, ಪರೋಕ್ಷ ಅಜೆಂಡಾಗಳ ಮೂಲಕ ಹಿರಿಯ ಕಾಂಗ್ರೆಸ್ಸಿಗ ನೀಡಿದ ಸಲಹೆಯಂತೆ ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ ಬಿಜೆಪಿ ವರಿಷ್ಠರಲ್ಲಿ ಮೊಳಕಾಲ್ಮೂರು ಟಿಕೆಟ್ ಕೇಳಿದ್ದಾರೆ. ಪಕ್ಷವೂ ತಕ್ಷಣವೇ 'ಯೆಸ್' ಅಂದುಬಿಟ್ಟಿದೆ.
ಉಪ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಬಿ. ಶ್ರೀರಾಮುಲು ಅವರ ರಾಜಕೀಯ ಭವಿಷ್ಯಕ್ಕೆ ಮೊಳಕಾಲ್ಮೂರು ಕ್ಷೇತ್ರದಿಂದ ತಿರುವು ನೀಡಿ, ಗೆಲುವು ಸಾಧಿಸಿದಲ್ಲಿ ಒಂದು ಕೈ ನೋಡೋಣ, ಸೋತಲ್ಲಿ ಅವರ ಕನಸು ಕಮರಿಸೋಣ ಎನ್ನುವ ಲೆಕ್ಕಾಚಾರ ಹಾಕಿ, ಹಾಲಿ ಶಾಸಕರ ಬಗ್ಗೆ ಕಿಂಚಿತ್ತೂ ಗಮನ ನೀಡದೆ ಟಿಕೆಟ್ ಘೋಷಣೆ ಮಾಡಿಯೇಬಿಟ್ಟಿದೆ. ಬಿ. ಶ್ರೀರಾಮುಲು ಈಗ ಮೊಳಕಾಲ್ಮೂರು ಕ್ಷೇತ್ರದ ಮತದಾರರ ತೀವ್ರ ವಿರೋಧ ಎದುರಿಸುವಂತಾಗಿದೆ.