ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದ ಅಭ್ಯರ್ಥಿಗಳು ಮತ್ತೊಮ್ಮೆ ಸೋಲುತ್ತಾರೆ!
ಬಳ್ಳಾರಿ, ಮೇ. 05: ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಕ್ಷೇತ್ರ ಹೂವಿನಹಡಗಲಿ. ಒಮ್ಮೆ ಗೆದ್ದವರು, ಮತ್ತೊಮ್ಮೆ ಸೋತ ಇತಿಹಾಸದ ಕ್ಷೇತ್ರ. ಗೆದ್ದವರು ಪಕ್ಷ ರಾಜ್ಯಭಾರ ಮಾಡುವ ವಿಶೇಷ ಕ್ಷೇತ್ರ. ಈ ಬಾರಿ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರರ ಮಧ್ಯೆ ತೀವ್ರ ಸ್ಪರ್ಧೆ ಇದೆ. ಹೊಸ ಇತಿಹಾಸ ನಿರ್ಮಾಣ ಆಗುವ ಲೆಕ್ಕಾಚಾರ ಕ್ಷೇತ್ರದ ಮತದಾರರದ್ದು.
ಕ್ಷೇತ್ರದಲ್ಲಿ ಒಟ್ಟು 216 ಮತಗಟ್ಟೆಗಳು, 1.82 ಲಕ್ಷ ಮತದಾರರಿದ್ದಾರೆ. ಹಗರಿಬೊಮ್ಮನಹಳ್ಳಿಯ ಹಂಪಸಾಗರ ಸೇರಿದಂತೆ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ. ಎಂ.ಪಿ. ಪ್ರಕಾಶ, ಮ.ಮ. ಪಾಟೀಲ, ಅಂಗಡಿ ಚನ್ನಬಸಪ್ಪ, ಎನ್.ಎಂ.ಕೆ. ಸೋಗಿ, ಈಟಿ ಶಂಭುನಾಥ, ನಂದಿಹಳ್ಳಿ ಹಾಲಪ್ಪ ಅವರನ್ನು ಒಮ್ಮೆ ಗೆಲ್ಲಿಸಿ, ಮತ್ತೊಮ್ಮೆ ಸೋಲಿಸಿರುವ ಕ್ಷೇತ್ರದ ಮತದಾರ, ಪಿ.ಟಿ. ಪರಮೇಶ್ವರನಾಯಕ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾನೆ.
ಹಡಗಲಿ ಕ್ಷೇತ್ರ ಪರಿಚಯ : ಗೆಲುವಿನ ನಿರೀಕ್ಷೆಯಲ್ಲಿ ಕಮಲ ಪಕ್ಷ
ಕಾಂಗ್ರೆಸ್ ಗೆದ್ದರೆ ಇತಿಹಾಸ ನಿರ್ಮಾಣ. ಬಿಜೆಪಿ ಗೆದ್ದರೆ ಇತಿಹಾಸ ಸಂಪ್ರದಾಯ. ಪಕ್ಷೇತರ ಗೆಲುವು ಸಾಧಿಸಿದಲ್ಲಿ ಕ್ಷೇತ್ರದ ಮತದಾರರ ಪ್ರಬುದ್ಧತೆ ಸಾಬೀತು. ಕಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಂಇಪಿ, ಕೆಪಿಜೆಪಿ, ಪಕ್ಷೇತರ ಸೇರಿ 6 ಅಭ್ಯರ್ಥಿಗಳಿದ್ದಾರೆ.
ಬಿಜೆಪಿಯ ಬಿ. ಚಂದ್ರನಾಯ್ಕ, ಕಾಂಗ್ರೆಸ್ ನ ಪಿ.ಟಿ. ಪರಮೇಶ್ವರನಾಯ್ಕ ಮಧ್ಯೆ ನೇರ ಸ್ಪರ್ಧೆ ಇದೆ. ಜೆಡಿಎಸ್ ನ ಪುತ್ರೇಶ, ಪಕ್ಷೇತರ ಓದೋ ಗಂಗಪ್ಪ ಉತ್ತಮ ಸ್ಪರ್ಧೆ ನೀಡಿದ್ದು, ಗೆಲುವಿನ ಕೇಕೆ ಹಾಕುವ ತವಕದಲ್ಲಿದ್ದಾರೆ. ಎಂಇಪಿಯಿಂದ ಎಲ್. ಕೃಷ್ಣನಾಯ್ಕ ಹಾಗೂ ಕೆಪಿಜೆಪಿಯ ಹರೀಶಕುಮಾರ್ ಕಣದಲ್ಲಿದ್ದಾರೆ.
ಬಿಜೆಪಿಯ ಚಂದ್ರನಾಯ್ಕ, ಸಿಂಗಟಾಲೂರು ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿರುವುದು, ಕ್ಷೇತ್ರದಲ್ಲಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕುಡಿವ ನೀರಿನ ಯೋಜನೆ, ರಸ್ತೆ, 10 ಸಾವಿರ ಮನೆಗಳು ನಿರ್ಮಾಣ ಸೇರಿ ಅಭಿವೃದ್ಧಿಯನ್ನು ಪ್ರಸ್ತಾಪಿಸಿ ಮತಯಾಚನೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ನ ಪಿ.ಟಿ. ಪರಮೇಶ್ವರನಾಯ್ಕ, ರಸ್ತೆ, ಕುಡಿವ ನೀರು, ಸಿಸಿ ರಸ್ತ್ತೆ, ತುಂಗಭದ್ರಾ ನದಿಯಿಂದ ಕ್ಷೇತ್ರದ 23 ಕೆರೆಗಳಲ್ಲಿ ನೀರು ತುಂಬಿಸಿರುವುದು, ಕ್ಷೇತ್ರದ ಸಮಗ್ರ ನೀರಾವರಿ ಯೋಜನೆಯ ಭರವಸೆ ನೀಡುವ ಮೂಲಕ ಮತದಾರರನ್ನು ತಲುಪುತ್ತಿದ್ದಾರೆ.
ಪಕ್ಷೇತರ ಅಭ್ಯರ್ಥಿ ಓದೋ ಗಂಗಪ್ಪ, ಹಾಲಿ ಶಾಸಕ ಪರಮೇಶ್ವರನಾಯ್ಕರ ದೌರ್ಜನ್ಯ, ಭ್ರಷ್ಟಾಚಾರ, ಆಡಳಿತಾತ್ಮಕ ವೈಫಲ್ಯ, ಎಂ.ಪಿ. ಪ್ರಕಾಶ್ ಕುಟುಂಬಕ್ಕೆ - ಬೆಂಬಲಿಗರಿಗೆ ಮಾಡಿರುವ ವಂಚನೆ, ಪೊಲೀಸ್ ಅಧಿಕಾರಿ ಅನುಪಮ ಶಣೈ ವಿಷಯವನ್ನೇ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪುತ್ರೇಶ, ತಮ್ಮ ಸ್ವಜಾತಿ ಓಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದಾರೆ.
ಈ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರದಲ್ಲಿ ಲಿಂಗಾಯತರು 50ಸಾವಿರ, ಕುರುಬ 35ಸಾವಿರ, ವಾಲ್ಮೀಕಿ 18ಸಾವಿರ, ಮುಸ್ಲಿಂ 15ಸಾವಿರ, ಪ.ಜಾ ಎಡಗೈ, ಬಲಗೈ ಸೇರಿ 60ಸಾವಿರ, ಬ್ರಾಹ್ಮಣರು 2ಸಾವಿರ ಹಾಗೂ ಇತರ 5ಸಾವಿರ ಮತದಾರರಿದ್ದಾರೆ. ಇಲ್ಲಿ ಲಿಂಗಾಯತ, ಕುರುಬ ಮತಗಳೇ ನಿರ್ಣಾಯಕ.