ಬಳ್ಳಾರಿ-ಹೈದರಾಬಾದ್ ನಡುವಿನ ವಿಮಾನ ಸೇವೆಗೆ ಚಾಲನೆ
ಬಳ್ಳಾರಿ, ಸೆಪ್ಟೆಂಬರ್ 21 : ಬಳ್ಳಾರಿ-ಹೈದರಾಬಾದ್ ನಡುವೆ ಗುರುವಾರದಿಂದ ವಿಮಾನ ಸಂಚಾರ ಆರಂಭವಾಗಿದೆ. ಹೈದರಾಬಾದ್ ಮೂಲದ ಟ್ರೂ ಜೆಟ್ ಸಂಸ್ಥೆ ಎರಡೂ ನಗರಗಳ ನಡುವೆ ವಿಮಾನ ಸೇವೆ ಆರಂಭಿಸಿದ್ದು, 999 ರೂ.ನಿಂದ 2500 ರೂ. ತನಕ ಪ್ರಯಾಣದರ ನಿಗದಿ ಮಾಡಲಾಗಿದೆ.
ಗುರುವಾರ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ವಿಮಾನ ಸೇವೆಗೆ ಚಾಲನೆ ನೀಡಿದರು. ಹೈದರಾಬಾದ್-ವಿದ್ಯಾನಗರ (ಬಳ್ಳಾರಿ) ನಡುವೆ ಟ್ರೂ ಜೆಟ್ ವಿಮಾನ ದಿನಕ್ಕೆ ಒಂದು ಬಾರಿ ಹಾರಾಟ ನಡೆಸಲಿದೆ.
ಸೆ.21ರಿಂದ ಬಳ್ಳಾರಿ-ಹೈದರಾಬಾದ್ ನಡುವೆ ವಿಮಾನ ಸೇವೆ
ಸಾಮಾನ್ಯ ಜನರೂ ವಿಮಾನದಲ್ಲಿ ಸಂಚಾರ ನಡೆಸಬೇಕು ಎಂಬುದು ಕೇಂದ್ರ ಸರ್ಕಾರದ ಆಶಯ. ಅದಕ್ಕಾಗಿ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು ಜಾರಿಗೆ ತರಲಾಗಿದೆ. ಉಡಾನ್ ಯೋಜನೆ ಅನ್ವಯ ಎರಡೂ ನಗರಗಳ ನಡುವೆ ವಿಮಾನ ಸೇವೆಯನ್ನು ಆರಂಭಿಸಲಾಗಿದೆ.
ಸುಮಾರು 9 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ವಿಮಾನ ಹಾರಾಟ ಆರಂಭವಾಗಿದೆ. ಅಕ್ಟೋಬರ್ ತಿಂಗಳಿನಿಂದ ಬಳ್ಳಾರಿಯಿಂದ ಬೆಂಗಳೂರು, ಮುಂಬೈಗೆ ವಿಮಾನ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ.
ವಿಮಾನದ ವೇಳಾಪಟ್ಟಿ
70 ಆಸನಗಳನ್ನು ಹೊಂದಿರುವ ವಿಮಾನ ಪ್ರತಿದಿನ ಬಳ್ಳಾರಿ-ಹೈದರಾಬಾದ್ ನಡುವೆ ಸಂಚಾರ ನಡೆಸಲಿದೆ. ಬೆಳಗ್ಗೆ 6.20ಕ್ಕೆ ಹೈದರಾಬಾದ್ನಿಂದ ಹೊರಡುವ ವಿಮಾನ 7.25ಕ್ಕೆ ಬಳ್ಳಾರಿ ತಲುಪಲಿದೆ. ಬಳ್ಳಾರಿಯಿಂದ 7.55ಕ್ಕೆ ಹೊರಡುವ ವಿಮಾನ 9 ಗಂಟೆಗೆ ಹೈದರಾಬಾದ್ ತಲುಪಲಿದೆ.
ಪ್ರಯಾಣದರದ ಮಾಹಿತಿ
ಹೈದರಾಬಾದ್ ಮೂಲಕ ಟ್ರೂ ಜೆಟ್ ಬಳ್ಳಾರಿ-ಹೈದರಾಬಾದ್ ನಡುವೆ ಸಂಪರ್ಕ ಕಲ್ಪಿಸಿದೆ. ಪ್ರಯಾಣದರ 999 ರೂ. ನಿಂದ 2500 ರೂ. ತನಕವಿದೆ. ಮೊದಲದಿನವಾದ ಇಂದು ಹೈದರಾಬಾದ್ನಿಂದ 20 ಜನರು ಬಳ್ಳಾರಿಗೆ ಆಗಮಿಸಿದರು. ಬಳ್ಳಾರಿಯಿಂದ 41 ಜನರು ಹೈದರಾಬಾದ್ಗೆ ತೆರಳಿದರು.
ಮುಂಬೈ, ಬೆಂಗಳೂರಿಗೆ ವಿಮಾನ
ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಮಾತನಾಡಿ, 'ಅಕ್ಟೋಬರ್ನಿಂದ ಬಳ್ಳಾರಿ-ಬೆಂಗಳೂರು, ಬಳ್ಳಾರಿ-ಮುಂಬೈ ನಡುವೆ ವಿಮಾನ ಸಂಚಾರ ಆರಂಭಿಸಲಾಗುತ್ತದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲೂ ವಿಮಾನ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ' ಎಂದರು.
ಸಂಸದ ಶ್ರೀರಾಮುಲು ಭಾಗಿ
ವಿಮಾನ ಹಾರಾಟಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಂಸದ ಶ್ರೀರಾಮುಲು, ಸಚಿವ ಸಂತೋಷ್ ಲಾಡ್, ಕೆ.ಸಿ.ಕೊಂಡಯ್ಯ, ಶಾಸಕ ಆನಂದ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.