ಗಣಿ ಧಣಿ ಜನಾರ್ದನ ರೆಡ್ಡಿ ಮಾವನ ಮನೆಯಲ್ಲಿ ಕಳ್ಳತನ!
ಬಳ್ಳಾರಿ, ಫೆಬ್ರವರಿ 14 : ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಾವ (ಪತ್ನಿ ಲಕ್ಷ್ಮಿ ಅರುಣಾ ತಂದೆ) ಪರಮೇಶ್ವರ ರೆಡ್ಡಿ ಮನೆಯಲ್ಲಿ ಕಳವು ಪ್ರಕರಣ ನಡೆದಿದೆ. ಆಂಧ್ರದ ನಂದ್ಯಾಲಕ್ಕೆ ಶಿವರಾತ್ರಿ ಆಚರಣೆಗೆ ಹೋಗಿದ್ದಾಗ ಇನ್ನಾರೆಡ್ಡಿ ಕಾಲೊನಿಯಲ್ಲಿ ಇರುವ ಮನೆಯಲ್ಲಿ ಮಂಗಳವಾರ ರಾತ್ರಿ ಅಥವಾ ಬುಧವಾರ ನಸುಕಿನಲ್ಲಿ ಕಳ್ಳತನವಾಗಿದೆ.
ಆದರೆ, ಮನೆಯಲ್ಲಿ ಬಂಗಾರ ಮತ್ತು ನಗದು ಹಣವಿರಲಿಲ್ಲ ಎಂದು ಕುಟುಂಬದ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಕಳ್ಳತನ ನಡೆದ ಮಾಹಿತಿ ಕೌಲ್ ಬಜಾರ್ ಪೊಲೀಸ್ ಠಾಣೆಗೆ ತಲುಪಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ತೆರೆಮರೆಯ ಚಾಣಾಕ್ಷನಿಗೆ ಸಿಕ್ತು ಹೊಸ ನೆಲೆ
ಮನೆಯ ಮಾಲೀಕರಾದ ಪರಮೇಶ್ವರ ರೆಡ್ಡಿ ಸ್ವಗ್ರಾಮವಾದ ಆಂಧ್ರದ ನಂದ್ಯಾಲಯಕ್ಕೆ ತೆರಳಿದ್ದಾರೆ. ನಂದ್ಯಾಲದಲ್ಲಿ ಇರುವ ಅವರಿಗೆ ಕಳ್ಳತನದ ಮಾಹಿತಿ ನೀಡಲಾಗಿದೆ. ಅವರು ಬಳ್ಳಾರಿಗೆ ಬರುತ್ತಿದ್ದಾರೆ. ಅವರು ಬಂದ ನಂತರವೇ ಕಳ್ಳತನದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ಪಂಚನಾಮೆ ನಡೆದಿಲ್ಲ. ಆ ಕಾರಣದಿಂದ ಕಳ್ಳತನದ ಮಾಹಿತಿ ಲಭ್ಯವಿಲ್ಲ. ಪರಮೇಶ್ವರ ರೆಡ್ಡಿ ಅವರು ಸ್ಥಳಕ್ಕೆ ಆಗಮಿಸಿದ ನಂತರವೇ ಮಾಹಿತಿ ಲಭ್ಯವಾಗಲಿದೆ. ರೆಡ್ಡಿ ಸಂಬಂಧಿಕರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಸ್ಥಳದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.