ರಂಗ ಅಭಿನೇತ್ರಿ ಸುಭದ್ರಮ್ಮ ಮನ್ಸೂರ್ ಗೆ ಅಭಿನಂದನಾ ಕಾರ್ಯಕ್ರಮ
ಬಳ್ಳಾರಿ, ಮೇ. 17 : ಎಂಭತ್ತರ ಆಸುಪಾಸಿನಲ್ಲಿರುವ ಗಾನಕೋಗಿಲೆ, ರಂಗ ಅಭಿನೇತ್ರಿ ಸುಭದ್ರಮ್ಮ ಮನ್ಸೂರ್ ಅವರ ಅಭಿನಂದನಾ ಕಾರ್ಯಕ್ರಮ ಮೇ. 27ರಂದು ಸಂಜೆ 6 ಗಂಟೆಗೆ ಬಳ್ಳಾರಿಯ ರಾಘವಕಲಾ ಮಂದಿರಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಸುಭದ್ರಮ್ಮ ಮನ್ಸೂರ್ ಅವರ ಅಭಿಮಾನಿ ಬಳಗ ಈ ಕಾರ್ಯಕ್ರಮ ಏರ್ಪಡಿಸಿದೆ. ಹೇಮರೆಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ ಪಾತ್ರಗಳಲ್ಲಿ ಜೀವಕಳೆ ತುಂಬುತ್ತಲೇ ರಂಗಸಜ್ಜಿಕೆಯಲ್ಲಿ ಭವಿಷ್ಯ ರೂಪಿಸಿಕೊಂಡಿದ್ದವರು ಸುಭದ್ರಮ್ಮ ಮನ್ಸೂರ್.
ಬೆಟ್ಟದಾ ಮೇಲೊಂದು ಮನೆಯ ಮಾಡಿ, ಖಗಮೃಗಳಿಗೆ ಅಂಜಿದೊಡೆ ಎಂತಯ್ಯಾ, ಸಂತೆಯೊಳಗೆ ಮನೆಯಾ ಮಾಡಿ, ಸದ್ದು ಗದ್ದಲಕ್ಕೆ .........' ಎನ್ನುವ ಹಾಡುಗಳನ್ನು ಹೇಳುತ್ತಾ ತಮ್ಮ ಕಂಠಸಿರಿಯಿಂದಲೇ ಖ್ಯಾತಿ ಪಡೆದ ಅವರು ರಂಗಭೂಮಿಯಲ್ಲಿ ಚಿರಪರಿಚಿತರು.
ಬಡತನದಲ್ಲೇ ಸ್ವಯಂ ರೂಪುಗೊಂಡು ಅರಳಿ - ಬೆಳಗಿದ ಸುಭದ್ರಮ್ಮ ಅವರ ಅಭಿನಂದನೆಗಾಗಿ ಅವರ ಬಳಗವು 'ಅಮೃತಾಭಿನಂದನೆ' ಅಭಿನಂದನಾ ಗ್ರಂಥ ಬಿಡುಗಡೆ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಅವರ ರಂಗಗೀತೆಗಳ ಧ್ವನಿ ಸಾಂದ್ರಿಕೆ, ರಂಗಪಯಣ, ಅವರ ಸಾಧನೆ, ಏಳು-ಬೀಳುಗಳು, ಅಭಿಮಾನ - ಸನ್ಮಾನಗಳು ಎಲ್ಲವನ್ನೂ ಮೆಲಕು ಹಾಕುವ ಯತ್ನ ನಡೆಯಲಿದೆ.