ಬಳ್ಳಾರಿ : ಕಮಲಾಪುರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ
ಬಳ್ಳಾರಿ, ಫೆಬ್ರವರಿ 19 : ಛತ್ರಪತಿ ಶಿವಾಜಿ ಜಯಂತಿ ಆಚರಣೆಯ ಸಂದರ್ಭದಲ್ಲಿ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಶಿವಾಜಿ ಜಯಂತಿ ಅಂಗವಾಗಿ ಸೋಮವಾರ ನಡೆದ ಮೆರವಣಿಗೆಯ ಸಂದರ್ಭದಲ್ಲಿ ಮಾರ್ಗ ಮಧ್ಯೆ ಇದ್ದ ಟಿಪ್ಪು ಸುಲ್ತಾನ್ ಮಹಾ ಅಭಿಮಾನಿಗಳ ವೇದಿಕೆಯ ಬೋರ್ಡ್ ತೆಗೆಯಲು ಒಂದು ಗುಂಪು ಪ್ರಯತ್ನಿಸಿತು.
ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಪೊಲೀಸರು, ಯುವಕರನ್ನು ಸಮಾಧಾನಪಡಿಸಿ, ಬೋರ್ಡ್ ಅನ್ನು ಯಥಾಸ್ಥಿತಿಯಲ್ಲಿಟ್ಟರು. ಮೆರವಣಿಗೆ ಮುಗಿದು, ಸಾರ್ವಜನಿಕರ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ಯುವಕರು ಮಸೀದಿಯತ್ತ ಹೋಗಿ, ಕಲ್ಲುಗಳನ್ನು ಎಸೆದರು. ಕಲ್ಲು ಎಸೆತದಿಂದಾಗಿ ಮಸೀದಿಯ ಕಿಟಕಿಯ ಗಾಜು ಪುಡಿಯಾಯಿತು.
'ಕಲ್ಲು ತೂರಾಟ ನಡೆಸಿದ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲು ವೀಡಿಯೋಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ದುಷ್ಕರ್ಮಿಗಳನ್ನು ಗುರುತಿಸಿ, ಬಂಧಿಸಲಾಗುತ್ತದೆ' ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಕಮಲಾಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.