ಗಣಿ ರೆಡ್ಡಿಗಳ ವೈರಿ ಟಪಾಲ್ ಗಣೇಶ್ ಗೆ ಜೆಡಿಯುನಿಂದ ಆಹ್ವಾನ
ಬಳ್ಳಾರಿ, ಫೆಬ್ರವರಿ 26: ಅಂತೂ ಇಂತೂ ಟಪಾಲ್ ಗಣೇಶ್ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷವೊಂದರಿಂದ ಆಹ್ವಾನ ಪಡೆದಿದ್ದಾರೆ.
ಆರ್ಟಿಐ ಕಾರ್ಯಕರ್ತನಾಗಿ, ಗಾಲಿ ಜನಾರ್ದನರೆಡ್ಡಿ ಮತ್ತು ಅವರ ಸಹೋದರರ ವಿರುದ್ಧ ಹೋರಾಟ ಮಾಡುತ್ತಲೇ ಪ್ರಾಣಾಪಾಯಕ್ಕೆ ಸಿಲುಕಿ ಜನಪ್ರಿಯತೆ ಪಡೆದಿರುವ ಟಪಾಲ್ ಗಣೇಶ್, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎನ್ ಸಿಪಿ, ಎಎಪಿ ಹೀಗೇ ಅನೇಕ ಪಕ್ಷಗಳ ಕದ ತಟ್ಟಿ ಈಗ ಜೆಡಿ(ಯು)ನಿಂದ ಟಿಕೆಟ್ ಆಹ್ವಾನ ಪಡೆದಿದ್ದಾರೆ.
ಟಪಾಲ್ ಗಣೇಶ್- ಶರದ್ ಪವಾರ್ ಭೇಟಿ, ಬಳ್ಳಾರಿ ರಾಜಕೀಯ ಬಿರುಸು
ಟಪಾಲ್ ಗಣೇಶ್ ಆಪ್ತ ಮೂಲಗಳ ಪ್ರಕಾರ, ಜೆಡಿಯುನ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಮಗ ಮಹಿಮಾ ಪಟೇಲ್ ಮೂಲಕ ಪಕ್ಷಕ್ಕೆ ಆಹ್ವಾನ ಪಡೆದಿದ್ದಾರೆ. ಮಹಿಮಾ ಅವರನ್ನು ಬಳ್ಳಾರಿಗೆ ಸ್ವಾಗತಿಸಿ, ತಮ್ಮ ಸ್ವಕ್ಷೇತ್ರದಲ್ಲೇ ಬೆಂಬಲಿಗರ ಜೊತೆಯಲ್ಲಿ ಪಕ್ಷಕ್ಕೆ ಸೇರುವ ವಿಚಾರ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 15 - 17 ಸಾವಿರ ಸಂಖ್ಯೆಯಷ್ಟು ಬಲಿಜ ಜನಾಂಗದ ಮತದಾರರನ್ನು ಹೊಂದಿದ್ದು, ಕೆ. ಭಾಸ್ಕರನಾಯ್ಡು, ಕೆ. ನಿರಂಜನನಾಯ್ಡು ನಂತರ ಆ ಜನಾಂಗದಿಂದ ಟಪಾಲ್ ಗಣೇಶ್ ಸಕ್ರಿಯ ರಾಜಕಾರಣಕ್ಕೆ ಬರುತ್ತಿದ್ದಾರೆ. ರಾಜಕೀಯ ಸಭೆ- ಸಮಾರಂಭಗಳನ್ನು ನಡೆಸಲಿಕ್ಕಾಗಿಯೇ ತಮ್ಮದೇ ಆದ ಸ್ವಂತ ಸಭಾಂಗಣವನ್ನು, ಪ್ರಚಾರದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.