ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಸಿಇಒ ಎಸಿಬಿ ಬಲೆಗೆ
ಬಳ್ಳಾರಿ, ಆಗಸ್ಟ್ 10: ಗ್ರಾಮ ಪಂಚಾಯಿತಿ ಕ್ರಿಯಾ ಯೋಜನೆ ಮಂಜೂರಾತಿಗಾಗಿ ಲಂಚ ಪಡೆಯುತ್ತಿದ್ದ ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಸಿಇಒ ಜಾನಕಿ ರಾಮ್ ಬುಧವಾರ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದ್ದಿದ್ದಾರೆ.ಜತೆಗೆ ತಾ.ಪಂ ಕಚೇರಿಯ ಗುಮಾಸ್ತ ರಾಮನಾಥ ಎಂಬಾತನನ್ನೂ ಬಂಧಿಸಲಾಗಿದೆ.
ಗುಂಡುಮುಣಗು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಸಿ.ವೀರೇಶ್ ಜೂನ್ ನಲ್ಲಿ ಹಣಕಾಸು ಕ್ರಿಯಾಯೋಜನೆ ಮಂಜೂರಾತಿಗಾಗಿ ಸಲ್ಲಿಸಿದ್ದರು. ಆದರೆ ನಾನಾ ಕಾರಣಗಳನ್ನು ಮುಂದಿಟ್ಟು, ತಾ.ಪಂ. ಸಿಇಒ ಅದನ್ನು ಹಿಂತಿರುಗಿಸಿದ್ದರು.
ಈ ಬಗ್ಗೆ ವಿಚಾರಿಸಲು ತಾ.ಪಂ. ಕಚೇರಿಗೆ ತೆರಳಿದ್ದ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಅವರ ಬಳಿ, ಕ್ರಿಯಾ ಯೋಜನೆಗೆ ಅಧಿಕಾರಿಯಿಂದ ಮಂಜೂರಾತಿ ದೊರಕಿಸಲು ಗುಮಾಸ್ತ ರಾಮನಾಥ 8 ಸಾವಿರ, ಮಂಜೂರಾತಿ ನೀಡಲು ಜಾನಕಿ ರಾಮ್ 25 ಸಾವಿರ ರುಪಾಯಿಗೆ ಬೇಡಿಕೆ ಇಟ್ಟಿದ್ದರು.
ಆ ನಂತರ ಚೌಕಾಶಿ ಮಾಡಿ, ಜಾನಕಿ ರಾಮ್ 15 ಸಾವಿರಕ್ಕೆ, ರಾಮನಾಥ್ 5 ಸಾವಿರಕ್ಕೆ ಒಪ್ಪಿದ್ದರು. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಿಸಲಾಗಿತ್ತು. ಬುಧವಾರ ಲಂಚದ ಹಣವನ್ನು ಪಡೆಯುವಾಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ-1988ರ ರ ಅಡಿ ಪ್ರಕರಣ ದಾಖಲಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಎಸಿಬಿಯಿಂದ ನಡೆದ ಮೊದಲ ದಾಳಿ ಇದಾಗಿದೆ.