ಬಳ್ಳಾರಿ: ಸಾವಿನಿಂದ ಕಾಪಾಡಿ ಎಂದು ಪಿಎಂ, ಸಿಎಂಗೆ ಪತ್ರ ಬರೆದ ವಿದ್ಯಾರ್ಥಿಗಳು
ಬಳ್ಳಾರಿ, ಜುಲೈ.31: ಸಿರುಗುಪ್ಪ ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಟ್ಟಡಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಕರೂರು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಧಾನಿ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಮನವಿ ಮಾಡಿದ್ದಾರೆ.
ಪತ್ರದಲ್ಲಿ ತಾಲೂಕಿನಲ್ಲಿರುವ 45 ಶಾಲೆಗಳ 89 ತರಗತಿ ಕೋಣೆಗಳ ದುರಸ್ಥಿಗಾಗಿ ಮತ್ತು ಹೊಸದಾಗಿ ನಿರ್ಮಿಸಲು ಅನುದಾನವನ್ನು ಬಿಡುಗಡೆ ಮಾಡಲು ಕೋರಿದ್ದಾರೆ. ವಿದ್ಯಾರ್ಥಿ ವಿ. ವಿಷ್ಣುವರ್ಧನ್ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರಕ್ಕೆ ಸಹಿ ಹಾಕುವ ಮೂಲಕ ಪತ್ರ ಚಳವಳಿಗೆ ವಿದ್ಯಾರ್ಥಿಗಳು ಚಾಲನೆ ನೀಡಿದರು.
ಜಾಗತಿಕ ತಾಪಮಾನದ ವಿರುದ್ಧ ಯುದ್ಧ ಸಾರಿದ ಮಂಗಳೂರಿನ ಪುಟಾಣಿಗಳು
"ಸಿರುಗುಪ್ಪ ತಾಲೂಕಿನ 45 ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ 89 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಕೊಠಡಿಗಳಲ್ಲಿ ಪಾಠ ಕೇಳಲು ಕಷ್ಟವಾಗುತ್ತಿದೆ. ನಾವು ಪಾಠ ಕೇಳುವ, ಊಟ ಮಾಡುವ ಸಮಯದಲ್ಲಾದರೂ ಛಾವಣಿ ನಮ್ಮ ಮೇಲೆ ಬೀಳುವ ಸಾಧ್ಯತೆ ಇದೆ.
ನಮ್ಮ ತಾಲೂಕಿನ 45 ಶಾಲೆಗಳಲ್ಲಿನ 89 ಕೊಠಡಿಗಳು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಯೋಗ್ಯವಾಗಿಲ್ಲ ಎಂದು ವಿಷ್ಣುವರ್ಧನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜೊತೆಗೆ ವಿದ್ಯಾರ್ಥಿನಿ ಶ್ವೇತಾ, ಶೂಭಾಗ್ಯ, ಅನ್ನಭಾಗ್ಯ, ಕ್ಷೀರಭಾಗ್ಯ, ವಸ್ತ್ರಭಾಗ್ಯ, ಸೈಕಲ್ ಭಾಗ್ಯಗಳನ್ನು ನೀಡಿರುವ ಸರ್ಕಾರ, ತರಗತಿ ಕೋಣೆಗಳನ್ನು ಏತಕ್ಕಾಗಿ ನಿರ್ಮಿಸುತ್ತಿಲ್ಲ. ತಕ್ಷಣವೇ ನಮ್ಮ ತಾಲೂಕಿನಲ್ಲಿರುವ ಶಿಥಿಲಗೊಂಡ ಕೊಠಡಿಗಳ ದುರಸ್ತಿಗೆ ಅನುದಾನ ಒದಗಿಸಿ ನಮ್ಮನ್ನು ಸಾವಿನ ಭಾಗ್ಯದಿಂದ ಮುಕ್ತರನ್ನಾಗಿ ಮಾಡಬೇಕು ಎಂದು ಕೇಳಿದ್ದಾಳೆ.