ಈ ಊರಿನಲ್ಲಿ ಇರುವವರೆಲ್ಲ ಅಡುಗೆಯವರು, ಗ್ರಾಮದ ಹೆಸರು ಚಾಣಕ್ಯನೂರು
ಬಳ್ಳಾರಿ, ಮಾರ್ಚ್ 03: ಈ ಹಳ್ಳಿಯಲ್ಲಿ ಇರುವುದೇ 350 ಮನೆಗಳು. ಇಲ್ಲಿ ಇರುವವರು ಎಲ್ಲರೂ ಬಾಣಸಿಗರು. ಯಾವುದೇ ಸಮಾರಂಭ ಇದ್ದರೂ ಇವರು ಸಿದ್ಧಪಡಿಸಿದ ರುಚಿರುಚಿಯಾದ ಅಡುಗೆ ಅಲ್ಲಿ ಘಮಘಮಿಸುತ್ತದೆ. ನೆರೆದವರು ಬಾಯಿ ಚಪ್ಪರಿಸುತ್ತಲೇ ಇರುತ್ತಾರೆ. ಒಂದು ಸಮಾರಂಭದ ನಂತರ ಮತ್ತೊಂದು ಸಮಾರಂಭಕ್ಕೆ ಅವರು ಬುಕ್ ಆಗುತ್ತಲೇ ಇರುತ್ತಾರೆ. ಇವರಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ.
- ಈ ವರದಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಆಂಧ್ರದ ಗಡಿ ಗ್ರಾಮವಾದ ಚಾಣಕನೂರು ಅಲಿಯಾಸ್ ಚಾಣಕ್ಯನೂರು ಗ್ರಾಮದ್ದು. ಸಿರುಗುಪ್ಪ ತಾಲೂಕಿನ ಬಹುತೇಕ ಸಭೆ - ಸಮಾರಂಭಗಳಲ್ಲಿ ಅಡುಗೆ ಮಾಡಲು ಈ ಗ್ರಾಮದ ಅಡುಗೆಯವರು ಇರುತ್ತಾರೆ. ಚಾಣಕನೂರಿನವರು ಅಡುಗೆ ಮಾಡುತ್ತಾರೆ ಅಂದರೆ ಸಾಕು, ಚಾಣಕನೂರಿನ ಅಡುಗೆಯವರು ತಾನೇ, ನೋ ಪ್ರಾಬ್ಲಂ ಎನ್ನುತ್ತಲೇ ಬಾಯಿ ಚಪ್ಪರಿಸುತ್ತಾರೆ.
ತಿಂಗಳಿಗೆ ಲಕ್ಷಗಟ್ಟಲೆ ದುಡಿಯುವ ಅಡುಗೆ ಭಟ್ಟರ ಮನದಾಳದ ಮಾತು
ಇವರಿಗೆಲ್ಲಾ ನಾವು ನೀಡುವ ಹಣ ಮುಖ್ಯವಲ್ಲ. ಬಾಯಿ ಚಪ್ಪರಿಸಿ, ಹೊಟ್ಟೆಯ ತುಂಬ ಉಂಡು 'ನಿಮ್ಮ ಅಡುಗೆ ಚೆನ್ನಾಗಿತ್ತು' ಅಂದರೆ ಸಾಕು ಅವರೂ ತೃಪ್ತರಾಗುತ್ತಾರೆ. ಮುಂದಿನ ಪೀಳಿಗೆಗೂ ತರಬೇತಿ ನೀಡುತ್ತಲೇ ತಮ್ಮ ವೃತ್ತಿಯ ರಹಸ್ಯಗಳನ್ನು ಹೇಳಿಕೊಡುತ್ತಾರೆ. ಇವರಲ್ಲಿ ಜಾತಿ ಭೇದವಿಲ್ಲ, ಪಂಥ ಭೇದವಿಲ್ಲ, ಲಿಂಗ ತಾರತಮ್ಯವೂ ಇಲ್ಲ. ಎಲ್ಲರೂ ಒಂದಾಗಿ ಕೆಲಸ ಮಾಡುತ್ತಾರೆ.
ನೀರಿನ ಕೊರತೆಯಾದಾಗ ಅಡುಗೆಗೆ ಮುಂದಾದರು
ಕೆಲ ದಶಕಗಳ ಹಿಂದೆ ತುಂಗಭದ್ರಾ ನೀರಿನ ಕೊರತೆ ಉಂಟಾದಾಗ ಊರಿನವರು ಅಡುಗೆ ಮಾಡಿ ದುಡಿಮೆ ಮಾಡಲು ಮುಂದಾದರು. ಕ್ರಮೇಣ ಈ ವೃತ್ತಿ ಗ್ರಾಮಸ್ಥರ ಪ್ರವೃತ್ತಿ ಆಯಿತು. ಇಂದು ಕೃಷಿಯ ಜೊತೆ ಜೊತೆಗೆ ಅಡುಗೆ ಮಾಡುವುದೂ ವೃತ್ತಿಯಾಗಿದೆ. ಬಾಗೇವಾಡಿ ಕಾಲುವೆಯಲ್ಲಿ ಹರಿಯುವ ನೀರು, ಹಗರಿ ನದಿಯಲ್ಲಿ ಹರಿಯುವ ನೀರಿನ ಜೊತೆಜೊತೆಯಲ್ಲಿ ಅಡುಗೆ ವೃತ್ತಿಯಲ್ಲಿ ಇವರು ಮಾಡುವ ದುಡಿಮೆ ಅನೇಕ ಖರ್ಚುಗಳಿಗೆ ನೆರವಾಗಿದೆ.
ಕರ್ನಾಟಕ- ಆಂಧ್ರದ ಅನೇಕ ಕಡೆ
ಬೆಂಗಳೂರು, ಹೈದರಾಬಾದ್ ಸೇರಿ ಕರ್ನಾಟಕ - ಆಂಧ್ರದ ಅನೇಕ ನಗರ - ಪಟ್ಟಣಗಳಲ್ಲಿ ಅಡುಗೆ ಮಾಡಿ ಲಕ್ಷಾಂತರ ಜನರು ಬಾಯಿ ಚಪ್ಪರಿಸುವಂತೆ ಮಾಡಿದ್ದೇವೆ. ಹೋದಲೆಲ್ಲಾ ನಮ್ಮ ಕಾಂಟ್ಯಾಕ್ಟ್ ನಂಬರ್ ಪಡೆದು, ಆರ್ಡರ್ ನೀಡುತ್ತಾರೆ. ನನ್ನ ಲಭ್ಯತೆ ಇಲ್ಲದಿದ್ದಾಗ ನಮ್ಮೂರಿನವರಿಗೆ ಹೇಳಿ, ಕಳುಹಿಸುತ್ತೇನೆ. ಎಲ್ಲೇ ಯಾರೇ ಹೋಗಲಿ, ಉತ್ತಮ ರುಚಿ ನೀಡುತ್ತೇವೆ ಎನ್ನುತ್ತಾರೆ ಮುಖ್ಯ ಅಡುಗೆಯವರಾದ ಹನುಮಂತಗೌಡ.
ಉಚಿತ, ರಿಯಾಯಿತಿ ಬೆಲೆಯಲ್ಲಿ
ಮಠಮಾನ್ಯಗಳ ಬೃಹತ್ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಪುರಾಣ - ಪ್ರವಚನಗಳಲ್ಲಿ ಈ ಗ್ರಾಮಸ್ಥರು ಉಚಿತವಾಗಿ ಅಡುಗೆ ಮಾಡಿ ಗುರುಗಳ, ಭಕ್ತಾಧಿಗಳ ಮತ್ತು ಧಾರ್ಮಿಕ ಸಂಸ್ಥೆಗಳ ಆಶೀರ್ವಾದ ಸ್ವೀಕರಿಸುತ್ತಾರೆ. ಚಾಣಕನೂರು ಅಡುಗೆ ತಯಾರಕರ ಸಂಘವನ್ನು ಕಟ್ಟಿಕೊಂಡಿರುವ ಇವರು, ಸಂಘದ ಹೆಸರಲ್ಲಿ ಲಕ್ಷಾಂತರ ರುಪಾಯಿ ಬೆಲೆಯ ಅಡುಗೆ ಸಾಮಾನುಗಳನ್ನು ಖರೀದಿಸಿದ್ದಾರೆ. ಗ್ರಾಮಸ್ಥರಿಗೆ ಉಚಿತವಾಗಿ ಮತ್ತು ರಿಯಾಯಿತಿ ಬೆಲೆಯಲ್ಲಿ ನೀಡುತ್ತಾರೆ.
ಕೃಷಿಯಲ್ಲೂ ಎತ್ತಿದ ಕೈ
ಸಮಾಜಸೇವೆ, ವೃತ್ತಿ - ಪ್ರವೃತ್ತಿಗಳ ಮಧ್ಯೆ ಬದುಕನ್ನು ನಡೆಸುತ್ತಿರುವ ಈ ಗ್ರಾಮಸ್ಥರು ಕೃಷಿಯಲ್ಲೂ ಮುಂದು. ಮೆಣಸಿನಕಾಯಿ, ಹತ್ತಿ, ಭತ್ತ ಸೇರಿದಂತೆ ತೊಗರಿ - ಮೆಕ್ಕೆಜೋಳ ಬೆಳೆಯುವುದರಲ್ಲೂ ಪ್ರಗತಿಪರರು ಎನ್ನುವುದು ವಿಶೇಷ. ಇವರ ಕೈ ಅಡುಗೆ ರುಚಿಯನ್ನು ನೀವೂ ನೋಡಿರಬಹುದು. ಇಲ್ಲದಿದ್ದರೆ ಒಮ್ಮೆ ಪ್ರಯತ್ನಿಸಿ.