ಮಳೆಗಾಗಿ ಶವಗಳ ತಲೆಬುರುಡೆ ತೆಗೆದು ಸುಡ್ತಾರೆ ಕೂಡ್ಲಿಗೆಯ ಈ ಜನ!
ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಹಳ್ಳಿಯೊಂದರಲ್ಲಿ ತಲೆಬುರುಡೆಯನ್ನು ಹೊರತೆಗೆಯುವ ಹಳ್ಳಿಗರು. ತಲೆಬುರುಡೆಯನ್ನು ಊರಾಚೆ ಕೊಂಡೊಯ್ದು ಅಕ್ಕ-ತಂಗಿಯರ ಕಲ್ಲುಗಳ ಬಳಿಯಿಟ್ಟು ಸುಡುವ ಜನ.
ಬಳ್ಳಾರಿ, ಆಗಸ್ಟ್ 2: ಮಳೆಗಾಗಿ ಜನ ಏನೆಲ್ಲಾ ಮಾಡ್ತಾರೆ ಗೊತ್ತಲ್ಲ? ಕಪ್ಪೆಗಳಿಗೆ ಮದುವೆ ಮಾಡಿಸುತ್ತಾರೆ, ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ, ಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡುತ್ತಾರೆ.... ಒಂದಲ್ಲ, ಎರಡಲ್ಲ. ಹತ್ತು ಹಲವಾರು ರೀತಿಯ ಆಚರಣೆಗಳು ನಮ್ಮ ಸಮಾಜದಲ್ಲಿ ಜಾರಿಯಲ್ಲಿವೆ.
ಆದರೆ, ಸ್ಮಶಾನದಲ್ಲಿ ಹೂತು ಹಾಕಿರುವ ಶವಗಳ ತಲೆಬುರುಡೆಯನ್ನು ಹೊರತೆಗೆದು ಅವುಗಳನ್ನು ಸುಡುವುದನ್ನು ಎಲ್ಲಾದರೂ ನೋಡಿದ್ದೀರಾ, ಕೇಳಿದ್ದೀರಾ? ಇಲ್ಲವೆಂದರೆ, ಇಲ್ಲಿ ಓದಿ. ಗಡಿ ಜಿಲ್ಲೆಯಾದ ಬಳ್ಳಾರಿಯ ಉಜ್ಜನಿ ಎಂಬ ಗ್ರಾಮದಲ್ಲಿ ಮಳೆಗಾಗಿ ಇಂಥ ಒಂದು ಆಚರಣೆ ನಡೆದಿದೆ.
ಈ 'ಸರ್ಕಾರಿ ಮಳೆ'ಯ ಸಂಕಟದಲ್ಲೇ ಸೊಬಗೂ ಹುಡುಕುತ್ತ...
ಉಜ್ಜನಿ ಇರುವುದು ಕೂಡ್ಲಿಗಿ ತಾಲೂಕಿನಲ್ಲಿ. ಇಲ್ಲಿನ ಜನರೇ ವರ್ಷಕ್ಕೊಮ್ಮೆ ಇಂಥ ಆಚರಣೆಯನ್ನು ನಡೆಸುವುದು. ಪ್ರತಿ ವರ್ಷ ಶ್ರಾವಣ ಮಾಸದ ಮೊದಲ ಸೋಮವಾರದಂದು ಇಂಥ ಆಚರಣೆ ನಡೆಯುತ್ತದೆ.
ಮಳೆ ಅವಾಂತರ: ದುರಸ್ತಿಯಾಗದ ಕೊಡಗು-ಕೇರಳ ರಸ್ತೆ
ಆದರೆ, ನೆನಪಿಡಿ. ಈ ಗ್ರಾಮದಲ್ಲಿ ಸಾಯುವ ಎಲ್ಲರ ತಲೆಬುರುಡೆಗಳಿಗೆ ಇಂಥ ಸ್ಥಿತಿ ಬರುವುದಿಲ್ಲ. ತೊನ್ನು ಬಂದು ಸಾವಿಗೀಡಾದ ತಲೆಬುರುಡೆಗಳಿಗೆ ಮಾತ್ರ ಇಂಥ ಅವಸ್ಥೆ ಬರುತ್ತದೆ.
ಗ್ರಾಮದಲ್ಲಿ ಮೆರವಣಿಗೆ ನಡೆಯುತ್ತೆ
ತೊನ್ನು ಬಂದಿರುವ ಶವಗಳ ತಲೆಬುರುಡೆಯನ್ನು ತೆಗೆದು ಅವುಗಳು ಆಗಸದ ಕಡೆಗೆ ಮುಖಮಾಡುವಂತೆ ಒಂದು ಕೋಲಿಗೆ ಸಿಕ್ಕಿಸಲಾಗುತ್ತದೆ. ಆನಂತರ, ಅವುಗಳನ್ನು ಮೆರವಣಿಗೆ ಮಾಡಿಕೊಂಡು ಊರಾಚೆ ಇರುವ ಅಕ್ಕ ತಂಗಿಯರ ಕಲ್ಲುಗಳ ಬಳಿಗೆ ತರಲಾಗುತ್ತದೆ.
ತಲೆಬುರುಡೆಗಳಿಗೆ ಬೆಂಕಿ ಹಚ್ಚಿ ಕುಣಿತ
ಆನಂತರ, ಅವುಗಳನ್ನು ಅಕ್ಕ-ತಂಗಿ ಕಲ್ಲುಗಳ ಬಳಿ ಸುಡಲಾಗುತ್ತದೆ. ಹಾಗೆ ಮಾಡಲು, ತೆಂಗಿನ ಗರಿ, ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಾಕಲಾಗುತ್ತದೆ. ಬೆಂಕಿ ಆರುವವರೆಗೂ ಕುಣಿದು ಕುಪ್ಪಳಿಸಲಾಗುತ್ತದೆ. ಆನಂತರ, ಎಲ್ಲರೂ ಮನೆಗೆ ತೆರಳುತ್ತಾರೆ.
ಒಪ್ಪಿಗೆ ಸಿಕ್ಕ ನಂತರವಷ್ಟೇ ಪ್ರಕ್ರಿಯೆ
ಅಂದಹಾಗೆ, ಹೀಗೆ ತೊನ್ನು ಬಂದವರ ಶವಗಳ ತಲೆಬರುಡೆಯನ್ನು ಸುಮ್ಮನೇ ತೆಗೆಯುವುದಿಲ್ಲ. ಇದಕ್ಕೂ ಮೊದಲು ತೊನ್ನಿನಿಂದ ಮೃತಪಟ್ಟ ವ್ಯಕ್ತಿಯ ಸಂಬಂಧಿಗಳ ಒಪ್ಪಿಗೆಯನ್ನು ಪಡೆದ ನಂತರವಷ್ಟೇ ಈ ಕ್ರಿಯೆ ನಡೆಸಲಾಗುತ್ತದಂತೆ.
ಮೂರು ದಿನಗಳೊಳಗೆ ಮಳೆ ಬಂದೇ ಬರುತ್ತಂತೆ!
ಅಂತೂ ಇಂತೂ, ಈ ರೀತಿ ಮಾಡಿದರೆ, ಮಳೆ ದೇವರು ಸಂತುಷ್ಟಗೊಳ್ಳುತ್ತಾನೆಂದು ಹೇಳುವ ಈ ಗ್ರಾಮಸ್ಥರು, ಹೀಗೆ, ಮಾಡಿದ ಮೂರು ದಿನಗಳೊಳಗಾಗಿ ಮಳೆ ಬಂದೇ ಬರುತ್ತದೆಂಬ ನಂಬಿಕೆ ವ್ಯಕ್ತಪಡಿಸುತ್ತಾರೆ.