ಉದ್ಯೋಗ ಖಾತ್ರಿ: ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬಳ್ಳಾರಿ
ಬಳ್ಳಾರಿ, ಮೇ. 31 : ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಗುಳೇ ಹೋಗುವುದನ್ನು ತಪ್ಪಿಸಲು ಇರುವ 'ರಾಷ್ಟ್ರೀಯ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ' ಅಡಿ ಬಳ್ಳಾರಿ ಜಿಲ್ಲೆ 2018-19ನೇ ಆರ್ಥಿಕ ವರ್ಷದ ಮೊದಲ 2 ತಿಂಗಳ ಅವಧಿಯಲ್ಲಿ 4,40,553 ಮಾನವ ದಿನಗಳನ್ನು ಸೃಜಿಸಿ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನದಲ್ಲಿದೆ.
2018-19ನೇ ಸಾಲಿಗೆ ಬಳ್ಳಾರಿ ಜಿಲ್ಲೆಗೆ ಮನರೇಗಾ ಯೋಜನೆ ಅಡಿಯಲ್ಲಿ 45,95,044 ಮಾನವ ದಿನಗಳ ಸೃಜಿಸಬೇಕಾದ ಗುರಿ ಇತ್ತು. ಈಗಾಗಲೇ ಬಳ್ಳಾರಿ ಜಿಲ್ಲೆ 4,40,553 ಮಾನವ ದಿನಗಳನ್ನು ಸೃಜಿಸಿದೆ. ಈ ಮೂಲಕ ವಾರ್ಷಿಕ ಗುರಿಯ ಶೇ.10ರಷ್ಟು ಸಾಧನೆ ಮಾಡಿದೆ.
NTPC ಯಲ್ಲಿ ಡಿಪ್ಲೊಮಾ ಇಂಜಿನಿಯರ್ ಹುದ್ದೆಗೆ ಅರ್ಜಿ ಹಾಕಿ
ಬಳ್ಳಾರಿ ಜಿಲ್ಲೆಯ ಏಳು ತಾಲೂಕುಗಳ 48 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಲಾ 200ಕ್ಕೂ ಅಧಿಕ ಜನ ಕೂಲಿಕಾರರಿಗೆ ಉದ್ಯೋಗ ಒದಗಿಸಿದ ಸಾಧನೆ ಮಾಡಲಾಗಿದೆ.
ನಂ.1 ಸ್ಥಾನದಲ್ಲಿದೆ
ಬಳ್ಳಾರಿ ಜಿಲ್ಲಾ ಪಂಚಾಯತ್ ರಾಜ್ಯಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದುವರೆಗೆ ಅನುಷ್ಠಾನಗೊಳಿಸಿದ 10,144 ಕಾಮಗಾರಿಗಳಲ್ಲಿ 9,722 ಕಾಮಗಾರಿಗಳ ಜಿಯೋ ಟ್ಯಾಗ್ ಮಾಡುವ ಮೂಲಕ ಶೇ.96.22 ಪ್ರತಿಶತ ಸಾಧನೆ ಮಾಡಿ ರಾಜ್ಯದಲ್ಲಿ 1ನೇ ಸ್ಥಾನದಲ್ಲಿದೆ.
ಜಿಯೋ ಟ್ಯಾಗಿಂಗ್
ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಗುಣಮಟ್ಟ ಮತ್ತು ದುರ್ಬಳಕೆ ಆಗದಂತೆ ತಡೆಯಲು ಪ್ರತಿ ಕಾಮಗಾರಿಗೆ ಮೂರು ಹಂತದಲ್ಲಿ ಜಿಯೋ ಟ್ಯಾಗಿಂಗ್ ಅನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದು, ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದೆ.
ರಾಜ್ಯದಲ್ಲಿ 7ನೇ ಸ್ಥಾನ
ಅಲ್ಲದೇ, ಎಂ ನರೇಗಾ ಯೋಜನೆಗಳ ಅಡಿಯಲ್ಲಿ ಕೂಲಿಕಾರರಿಗೆ ನಿಗದಿತ ಅವಧಿಯಲ್ಲಿ ಕೂಲಿ ಮೊತ್ತ ಪಾವತಿಯಲ್ಲಿಯೂ ಬಳ್ಳಾರಿ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು ಶೇ.99.99ರಷ್ಟು ಕೂಲಿ ಮೊತ್ತ ಪಾವತಿ ಮಾಡಿದ ಸಾಧನೆ ಮಾಡಿ ರಾಜ್ಯದಲ್ಲಿ 7ನೇ ಸ್ಥಾನದಲ್ಲಿ ಇದೆ.
31,573 ಕೂಲಿಕಾರರಿಗೆ ಕೆಲಸ
ಬಳ್ಳಾರಿ ಜಿಪಂ ಸಿಇಒ ಡಾ.ಕೆ.ವಿರಾಜೇಂದ್ರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ನ ಮನರೇಗಾ ಕೋಶದ ಅಧಿಕಾರಿಗಳು ಮತ್ತು ಸಮಾಲೋಚಕರು ನಿಯಮಿತವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ, ಉದ್ಯೋಗ ಖಾತ್ರಿ ಯೋಜನೆಯ ಕಾರ್ಯಗಳನ್ನು ಪರಿಶೀಲಿಸಿ ನಿರ್ವಹಿಸುತ್ತಿದ್ದಾರೆ.
ನಿಗದಿತ ಸಮಯಕ್ಕೆ ಕೂಲಿ ಪಾವತಿ
ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರುತ್ತದೆ. ನಿಗದಿತ ಸಮಯದಲ್ಲಿ ಕೂಲಿ ಪಾವತಿಯಲ್ಲಿ ರಾಜ್ಯದಲ್ಲಿ ಏಳನೇ ಸ್ಥಾನದಲ್ಲಿರುತ್ತದೆ. ಕಾಮಗಾರಿಗಳ ಜಿಯೋ ಟ್ಯಾಗಿಂಗ್ ನಲ್ಲಿ ಮೊದಲನೇ ಸ್ಥಾನದಲ್ಲಿರುತ್ತದೆ.
ಯಾವ ತಾಲೂಕಿನಲ್ಲಿ ಎಷ್ಟು ಜನರು?
2018ರ ಮೇ 22ರ ದಾಖಲೆಗಳ ಅನ್ವಯ ಜಿಲ್ಲೆಯ 7 ತಾಲೂಕುಗಳಲ್ಲಿ ಒಟ್ಟು 31573 ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಬಳ್ಳಾರಿ ತಾಲೂಕಿನಲ್ಲಿ-5311 ಜನರು, ಹಡಗಲಿ-3779, ಹ.ಬೊ.ಹಳ್ಳಿ-9112, ಹೊಸಪೇಟೆ-3661, ಕೂಡ್ಲಿಗಿ-4180, ಸಂಡೂರು-2675 ಮತ್ತು ಸಿರುಗುಪ್ಪ ತಾಲೂಕಿನಲ್ಲಿ 2855 ಜನರು ಕೆಲಸ ಮಾಡುತ್ತಿದ್ದಾರೆ.
ಡಾ.ಕೆ.ವಿ.ರಾಜೇಂದ್ರ ಅನಿಸಿಕೆ
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡಲು ವಿಫಲರಾದ ಇಬ್ಬರು ಪಿ.ಡಿ.ಓ.ಗಳನ್ನು ಅಮಾನತುಗೊಳಿಸಲಾಗಿದೆ. ಕೂಲಿಕಾರರಿಗೆ ಕೆಲಸ ನೀಡುವಲ್ಲಿ ನಿರ್ಲಕ್ಷ್ಯ ತೋರಿರುವ 42 ಗ್ರಾಮ ಪಂಚಾಯತಿ ಪಿ.ಡಿ.ಓ.ಗಳಿಗೆ ಶಿಸ್ತು ಕ್ರಮಕ್ಕಾಗಿ ನೋಟಿಸ್ ನೀಡಲಾಗಿದೆ.