ಬಳ್ಳಾರಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ಸಣ್ಣ ಫಕ್ಕೀರಪ್ಪ ಸಂದರ್ಶನ
ಬಳ್ಳಾರಿ, ಮೇ. 08: ಬಳ್ಳಾರಿ ಎಸ್ಟಿ ಮೀಸಲು ಗ್ರಾಮೀಣ ಕ್ಷೇತ್ರ ಬಿ. ಶ್ರೀರಾಮುಲು ಅವರ ಮಾತೃಕ್ಷೇತ್ರ. ಆದರೆ, ಈ ಬಾರಿ ಮೊಳಕಾಲ್ಮೂರು ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿ, ರಾಜ್ಯಮಟ್ಟದ ನೇತಾರರು ಆಗುತ್ತಿರುವ ಹಿನ್ನಲೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಅವರ ಸಹೋದರ ಮಾವ, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಅವರು ಸ್ಪರ್ಧಿಸುತ್ತಿದ್ದಾರೆ.
ಬಿ. ಶ್ರೀರಾಮುಲು ಅವರಿಂದ ತೆರವಾಗಿರುವ ಈ ಕ್ಷೇತ್ರದಲ್ಲಿ ಸಣ್ಣ ಫಕ್ಕೀರಪ್ಪ ಅವರನ್ನು ಕಣಕ್ಕಿಳಿಸಲು ಪಕ್ಷ, ಕುಟುಂಬ ನಿರ್ಧರಿಸಿದಾಗ ಎದುರಾಳಿ ಇನ್ನೂ ನಿರ್ಧಾರವಾಗಿರಲಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಬಿ. ನಾಗೇಂದ್ರ ಅವರ ಸ್ಪರ್ಧೆಯನ್ನು ಕಡೆಗಣಿಸುವಂತಿರಲಿಲ್ಲ.
ಬಿಜೆಪಿಯಿಂದ ಸಿಡಿದು ಕಾಂಗ್ರೆಸ್ ಕೈಹಿಡಿದಿರುವ ಬಿ ನಾಗೇಂದ್ರ ಸಂದರ್ಶನ
ಬಿ. ನಾಗೇಂದ್ರ ಅವರ ಸ್ಪರ್ಧೆ, ಬಿ. ಶ್ರೀರಾಮುಲು ಅವರು ಕ್ಷೇತ್ರ ತೊರೆದಿರುವ ಹಿನ್ನಲೆಯಲ್ಲಿ ಬಳ್ಳಾರಿ ಗ್ರಾಮೀಣ ಎಸ್ಟಿ ಮೀಸಲು ಕ್ಷೇತ್ರದ ಫಲಿತಾಂಶ ಅನೇಕರಲ್ಲಿ ಕುತೂಹಲ ಮೂಡಿಸುತ್ತಿದೆ. ಈ ಹಿನ್ನಲೆಯಲ್ಲಿ ಪ್ರಚಾರ ಭರಾಟೆಯಲ್ಲಿಯೇ ಸಣ್ಣ ಫಕ್ಕೀರಪ್ಪ ಒನ್ ಇಂಡಿಯಾ ಜೊತೆ ಮಾತನಾಡಿದರು.
ಮತದಾರರು ಸ್ವೀಕರಿಸುತ್ತಿದ್ದಾರೆಯೇ?
ಬಳ್ಳಾರಿಯಲ್ಲಿ ಹುಟ್ಟಿದಾಗಿನಿಂದಲೂ ನಾನು ಬಳ್ಳಾರಿ ಮತ್ತು ಬಳ್ಳಾರಿ ಸುತ್ತಲಿನ ಹಳ್ಳಿಗಳಲ್ಲಿ ಅನೇಕರ ಜೊತೆ ಸಂಪರ್ಕ ಹೊಂದಿದ್ದೇನೆ. ಬಿ. ಶ್ರೀರಾಮುಲು ಕ್ಷೇತ್ರದಲ್ಲಿ ಪ್ರಚಾರ ನಿರ್ವಹಿಸುತ್ತಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ. ಗೆಲ್ಲುವ ವಿಶ್ವಾಸವಿದೆ.
ತಂತ್ರಗಾರಿಕೆ ಏನಾದರೂ..?
ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 800 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಅಭಿವೃದ್ಧಿ ಸಾಧಿಸಿಲ್ಲ. ಕ್ಷೇತ್ರಕ್ಕೆ ಸುಳ್ಳು ಭರವಸೆ ನೀಡಿ, ನೂರಾರು ಕೋಟಿ ರೂಪಾಯಿಗಳ ಯೋಜನೆಗಳು ನೆಲಕಚ್ಚಿವೆ. ಕಾಂಗ್ರೆಸ್ ಕೊಟ್ಟ ಮಾತನ್ನು ಮರೆತುಬಿಟ್ಟಿದೆ.
ಬಿ. ಶ್ರೀರಾಮುಲು ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ರಸ್ತೆ, ಕಾಲುವೆ ದುರಸ್ತಿ, ಶೌಚಾಲಯ, ವಿದ್ಯುತ್ ದೀಪ ಎಲ್ಲವನ್ನೂ ಪೂರೈಸಿದ್ದಾರೆ.
ಕ್ಷೇತ್ರದ ಪರಿಹಾರ ಹೇಗೆ?
ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 25ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ಕುಡಿಯುವ ನೀರು, ವಿದ್ಯುತ್ ಪೂರೈಕೆ, ಆರೋಗ್ಯ ಸಮಸ್ಯೆ ಹೆಚ್ಚಿವೆ. ನೀರಾವರಿ ಸಮಸ್ಯೆ ದೊಡ್ಡದಾಗಿ ರೈತರನ್ನು ಕಾಡುತ್ತಿದೆ.
ನಿಮ್ಮ ಯೋಜನೆಗಳು ಏನಿವೆ?
ನಮ್ಮ ವಚನದ ಅಡಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಪ್ರಣಾಳಿಕೆ ಸಿದ್ಧವಾಗಿದೆ. ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವುದೇ ಪ್ರಥಮ ಆದ್ಯತೆ.
ಹಗರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿಶೇಷ ಅನುದಾನ ತರುವೆ. ಕೃಷಿ ಕಾಲೇಜು ಸ್ಥಾಪನೆಗೆ ಆದ್ಯತೆ ನೀಡುವೆ.
ದಶಕಗಳಿಂದ ನೆನೆಗುದಿಗೆ ಬಿದ್ದಿರುವ ವೈ. ಕಗ್ಗಲ್ ಏತ ನೀರಾವರಿ ಯೋಜನೆಯನ್ನು ಪರಿಷ್ಕರಿಸಿ ಸುಧಾರಿತ ಆಧುನಿಕ ತಂತ್ರಜ್ಞಾನದ ನೆರವಿನಿಂದ ಉತ್ತಮ ನೀರಾವರಿ ಯೋಜನೆ ರೂಪಿಸಿ ಶೀಘ್ರದಲ್ಲಿ ಅದನ್ನು ರೈತರಿಗೆ ಅರ್ಪಣೆ ಮಾಡುವೆ. ಈ ಕೆಲಸ ನನ್ನ ಬದ್ಧತೆಗೆ ಸವಾಲು.
ಅಷ್ಟೇ ಅಲ್ಲದೇ, ಈ ಕ್ಷೇತ್ರ ವ್ಯಾಪ್ತಿಯ ವೈದ್ಯಕೀಯ ಅಗತ್ಯತೆಗಳಿಗೆ ಆಸ್ಪತ್ರೆ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆಗಳನ್ನು, ಬಸ್ ಸೌಲಭ್ಯ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುವೆ.
ಎದುರಾಳಿ ಯಾರು?
ನಮ್ಮ ಗರಡಿಯಲ್ಲಿದ್ದವ. ನಾಗೇಂದ್ರ ಈಗ ನನ್ನ ಎದುರಾಳಿ. ಈ ಹಿಂದೆ ಬಿ. ಶ್ರೀರಾಮುಲು ಅವರ ಆಶೀರ್ವಾದದಿಂದ, ಬಿ. ಶ್ರೀರಾಮುಲು ಫೋಟೋ ಇಟ್ಟುಕೊಂಡು ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆ ಆಗಿದ್ದ. ಎರಡನೇ ಬಾರಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ. ಅಲ್ಲಿ, ಆಡಳಿತ ವಿರೋಧಿ ಅಲೆ ಇರುವ ಕಾರಣ ಕ್ಷೇತ್ರ ಬದಲಾವಣೆ.
ಈಗ ನನ್ನ, ನಮ್ಮ ಮತ್ತು ಬಿ. ಶ್ರೀರಾಮುಲು ವಿರುದ್ಧ ಮಾತನಾಡುತ್ತಿದ್ದಾನೆ. ರಾಜ್ಯ ರಾಜಕೀಯದಲ್ಲಿ ಬಿ. ಶ್ರೀರಾಮುಲುಗೆ ಪರ್ಯಾಯವಾಗಿ ಬೆಳೆಯುವ ಕನಸು ಕಂಡು, ವಿಫಲಯತ್ನ ಮಾಡುತ್ತಿದ್ದಾನೆ. ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಬೇಕು, ಪರ್ಯಾಯವಾಗಿ, ಸ್ಪರ್ಧಿಸುವ ಅಗತ್ಯವಿರಲಿಲ್ಲ.
ಮೀನಳ್ಳಿ ನನ್ನೂರು. ರಾಯಾಪುರ ಪತ್ನಿಯ ತವರೂರು. ನಾನು ಇದೇ ಕ್ಷೇತ್ರದವ. 20 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಏನಕ್ಕೂ ಮೇ, 15 ರವರೆಗೂ ಕಾಯಬೇಕಿದೆ.