ಬಳ್ಳಾರಿಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ: 600 ಸಿಬ್ಬಂದಿ ನಿಯೋಜನೆ
ಬಳ್ಳಾರಿ, ಮೇ 13 : ಬಳ್ಳಾರಿ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ನಡೆದಿದ್ದು, ಶೇ.74.13ರಷ್ಟು ಮತದಾನವಾಗಿದೆ. ಅತಿ ಹೆಚ್ಚು ಅಂದರೆ ಹಗರಿಬೊಮ್ಮನಳ್ಳಿ ಕ್ಷೇತ್ರದಲ್ಲಿ ಶೇ.78.77ರಷ್ಟು ಮತ್ತು ಅತಿ ಕಡಿಮೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಶೇ.64.44ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ನಗರದ ಆರ್ವೈಎಂಇಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆಯಲಿರುವ ಮತ ಏಣಿಕೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಿ, ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೊದಲ ಬಾರಿಗೆ ಮತ ಎಣಿಕೆಗೆ ಸಿದ್ಧಗೊಂಡ ಬಾಗಲಕೋಟೆ ತೋಟಗಾರಿಕೆ ವಿವಿ
9 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಆರ್ವೈಎಂಇಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಕಲ ವ್ಯವಸ್ಥೆ ಈಗಾಗಲೇ ಮಾಡಿಕೊಳ್ಳಲಾಗಿದೆ. ಪ್ರತಿ ಕ್ಷೇತ್ರಕ್ಕೆ ಒಂದೊಂದು ಕೋಣೆಗಳನ್ನು ಮಾಡಲಾಗಿದೆ. ತಲಾ ಒಂದು ಕ್ಷೇತ್ರಕ್ಕೆ 14 ಟೇಬಲ್ ಗಳನ್ನು ಏಣಿಕೆಗೆ ಹಾಕಲಾಗಿದೆ. ಎರಡು ಟೇಬಲ್ ಗಳಿಗೆ ಒಂದರಂತೆ ವೆಬ್ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಮತ ಏಣಿಕೆಗಾಗಿ 600 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಇಂದು ಸೋಮವಾರವೂ ತರಬೇತಿ ನೀಡಲಾಗುತ್ತಿದೆ. ಶೇ.10ರಷ್ಟು ಹೆಚ್ಚುವರಿ ಸಿಬ್ಬಂದಿ ಮತ ಏಣಿಕೆಗಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಎಸ್ಪಿ ಅರುಣ ರಂಗರಾಜನ್ ಅವರು ಮತ ಏಣಿಕೆಗೆ ಕೈಗೊಳ್ಳಲಾಗಿರುವ ಭದ್ರತೆಗಳನ್ನು ವಿವರಿಸಿದರು. ಮೆರವಣಿಗೆಗೆ ಅವಕಾಶವಿಲ್ಲ ಮತ್ತು ಸೆಕ್ಷನ್ 144 ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಇದ್ದರು.
ಜಿಲ್ಲೆಯಲ್ಲಿ ಶೇಕಡವಾರು ಮತದಾನ
ಹೂವಿನಹಡಗಲಿಯಲ್ಲಿ ಶೇ.75.89, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 72.04, ಕಂಪ್ಲಿ ವಿಧಾನಸಭಾ ಕ್ಷೇತ್ರದ ಶೇ.77.65, ಸಿರಗುಪ್ಪ ಕ್ಷೇತ್ರದಲ್ಲಿ ಶೇ.74.68, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶೇ.74.25, ಸಂಡೂರು ಶೇ.74.45 ಮತ್ತು ಕೂಡ್ಲಿಗಿ ಕ್ಷೇತ್ರದಲ್ಲಿ ಶೇ.76.35ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ 9,54,470 ಪುರುಷರು ಮತ್ತು 9,56,634 ಮಹಿಳೆಯರು ಮತ್ತು 238 ಇತರೆ ಸೇರಿದಂತೆ ಒಟ್ಟು 19,11,342 ಮತದಾರರಿದ್ದು, ಅವರಲ್ಲಿ 7,20,453 ಪುರುಷರು ಮತ್ತು 6,96,467 ಮಹಿಳೆಯರು ಮತ್ತು ಇತರೆ 8 ಜನರು ಸೇರಿದಂತೆ 14,16,928 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
9 ವಿಧಾನಸಭಾ ಕ್ಷೇತ್ರಗಳ 2,127 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ಮತ್ತು ಸೂಸುತ್ರವಾಗಿ ಜರುಗಿದೆ. 85 ಪುರುಷರು ಮತ್ತು 6 ಜನ ಮಹಿಳೆಯರು ಸೇರಿದಂತೆ 91 ಉಮೇದುವಾರರು ಕಣದಲ್ಲಿದ್ದಾರೆ. 1,1995 ಜನ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಿದ್ದಾರೆ.
ಚುನಾವಣೆ ಶಾಂತಿಯುತವಾಗಿ ಜರುಗುವ ನಿಟ್ಟಿನಲ್ಲಿ 660 ಜನರನ್ನು ಬಂಧಿಸಲಾಗಿತ್ತು. ಮತ್ತು ಚುನಾವಣಾ ಕರ್ತವ್ಯಕ್ಕೆ ಭಂಗ ತರುವ ಸಂದೇಹದ ಮೇಲೆ 1,378 ಜನರಿಂದ ಆಸ್ತಿ ಜಾಮೀನು ಪಡೆದುಕೊಳ್ಳಲಾಗಿತ್ತು. ಸಣ್ಣಪುಟ್ಟ ದೋಷಗಳು ಬಂದ 22ಇವಿಎಂ ಮತ್ತು 82ವಿವಿ ಪ್ಯಾಟ್ ಗಳನ್ನು ಬದಲಾಯಿಸಲಾಗಿತ್ತು.