ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ
ಹೊಸಪೇಟೆ, ಫೆಬ್ರವರಿ 10 : ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿ ಅವರು ಹೊಸಪೇಟೆಯಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿರ್ಮಿಸಲಾಗಿರುವ ಭಾರೀ ವೇದಿಕೆಯ ಮೇಲೆ ಬಿಕೆ ಹರಿಪ್ರಸಾದ್, ನಟ ಅಂಬರೀಷ್, ಅನಿಲ್ ಲಾಡ್, ಇಡೀ ಸಮಾವೇಶದ ಉಸ್ತುವಾರಿ ವಹಿಸಿರುವ ಆನಂದ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಹುಲ್ ಅವರನ್ನು ಖುದ್ದಾಗಿ ಹೊಸಪೇಟೆಗೆ ಕರೆತಂದರು.
ನೆರೆದಿರುವ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಆರಂಭಿಕ ಮಾತುಗಳನ್ನಾಡಿದ ಬಿಕೆ ಹರಿಪ್ರಸಾದ್ ಅವರು, ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹಿಂದೂಗಳ ಹತ್ಯೆಯ ಹಿಂದೆ ಹಿಂದೂಗಳೇ ಇದ್ದಾರೆಯೇ ಹೊರತು ಅನ್ಯ ಕೋಮಿನವರಲ್ಲ ಎಂದು ಹೇಳಿಕೆ ನೀಡಿದರು.
Newest FirstOldest First
ಮೋದಿಯವರೇ, ರಾಫೆಲ್ ಯುದ್ಧ ವಿಮಾನ ಖರೀದಿಯ ಒಪ್ಪಂದವನ್ನು ಎಚ್ ಎಎಲ್ ನಿಂದ ಕಸಿದುಕೊಂಡಿದ್ದು ಏಕೆ? ಇದರಲ್ಲಿ ನಿಮ್ಮ ಹಿತಾಸಕ್ತಿ ಇಲ್ಲವೇ?- ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಭ್ರಷ್ಟಾಚಾರದಲ್ಲಿ ವಿಶ್ವದಾಖಲೆ ಬರೆದಿದ್ದು ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರ ಎಂಬುದನ್ನು ಅವರು ಮರೆತಿದ್ದಾರೆ -ರಾಹುಲ್ ಗಾಂಧಿ
ತಾವು ಗುಜರಾತನ್ನು ಬದಲಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲ ಹೇಳಿಕೊಂಡು ಓಡಾಡುತ್ತಾರೆ. ಆದರೆ ನನಗೆ ಗುಜರಾತಿಗೆ ಹೋದಾಗ ತಿಳಿಯಿತು, ಗುಜರಾತ್ ಬದಲಾಗಿದ್ದು ಮೋದಿಯಿಂದಲ್ಲ, ಗುಜರಾತ್ ಬದಲಾವಣೆಯಾಗಿದ್ದು, ಅಲ್ಲಿನ ಜನ, ವ್ಯಾಪಾರಸ್ಥರು, ರೈತರು, ಕಾರ್ಮಿಕರಿಂದ. ಆದರೆ ಆ ಗುಜರಾತ್ ಅನ್ನು ಇದೀಗ ಪ್ರಧಾನಿ ಮೋದಿಯವರು ಕೆಲ ಉದ್ಯಮಿಗಳಿಗೆ ಕೊಟ್ಟಿದ್ದಾರೆ- ರಾಹುಲ್ ಗಾಂಧಿ
ನರೇಂದ್ರ ಮೋದಿಯವರು ಸರ್ಕಾರದ ಗಾಡಿಯನ್ನು ಓಡಿಸುವಾಗ ಮುಂದೆ ನೋಡುವ ಬದಲು ಕನ್ನಡಿಯಲ್ಲಿ ಹಿಂದೇನಿದೆ ಎಂದೇ ನೋಡಿಕೊಂಡು ಓಡಿಸುತ್ತಿದ್ದಾರೆ. ಹೀಗೆ ಹಿಂದೆ ನೋಡಿಕೊಂಡು ಓಡಿಸಿದ್ದರಿಂದಲೇ ಅಪನಗದೀಕರಣದಂಥ ಕೆಟ್ಟ ನಿರ್ಧಾರ ಕೈಗೊಂಡಿದ್ದು. ಇದರಿಂದಾಗಿಯೇ ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಅನ್ನಾಗಿ ಬದಲಾಯಿಸಿದ್ದು!- ರಾಹುಲ್ ಗಾಂಧಿ
ನರೇಂದ್ರ ಮೋದಿಯವರು ಒಂದು ತಾಸಿನ ಭಾಷಣದಲ್ಲಿ ದೇಶದ ಭವಿಷ್ಯದ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಇದು ವಿಪರ್ಯಾಸ. ಪ್ರಧಾನಿಯವರೇ, ಒಂದು ಗಂಟೆಯ ಕಾಲ ಕಾಂಗ್ರೆಸ್ ಅನ್ನು ಹಳಿಯುವ ಕೆಲಸವನ್ನೇ ಮಾಡಿದಿರಿ. ನಾವು ಇತಿಹಾಸದ ಬಗ್ಗೆ ಪಾಠ ಕೇಳೋಕೆ ನಿಮ್ಮನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿಲ್ಲ. ದೇಶದ ಭವಿಷ್ಯದ ಬಗ್ಗೆ ಯೋಚಿಸುವುದಕ್ಕೆ ಪ್ರಧಾನಿಯನ್ನಾಗಿ ಮಾಡಿದ್ದೇವೆ- ರಾಹುಲ್ ಗಾಂಧಿ
ಮೋದಿಯವರು ಚುನಾವಣೆಗೂ ಮುನ್ನ ಹೇಳಿದ್ರು. ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂ.ಗಳನ್ನು ತಂದುಹಾಕುತ್ತೇವೆ ಅಂತ. ಆದರೆ ಒಂದು ರೂಪಾಯಿಯನ್ನಾದರೂ ಕೊಟ್ಟಿದ್ದಾರಾ?, ಉದ್ಯೋಗಾವಕಾಶ ಕಲ್ಪಿಸುತ್ತೇವೆ ಎಂದಿದ್ದರು. ಉದ್ಯೋಗಾವಕಾಶ ಸೃಷ್ಟಿಯಾಗಿದೆಯಾ?- ರಾಹುಲ್ ಗಾಂಧಿ
ಹೈದರಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ 371 J ವಿಧಿಯಲ್ಲಿ ತಿದ್ದುಪಡಿ ತರುವಲ್ಲಿ ಹೋರಾಟ ನಡೆಸಿ, ತಿದ್ದುಪಡಿ ತಂದಿದ್ದೇವೆ- ರಾಹುಲ್ ಗಾಂಧಿ
Advertisement
ಯಾರ ಮೇಲೆ ವಿಶ್ವಾಸ ಇಡಬೇಕು ಎಂಬುದನ್ನು ನೀವು ನಿರ್ಧರಿಸಿ. ಕಾಂಗ್ರೆಸ್ ಪಕ್ಷ ಸತ್ಯದ ಪರವಾಗಿದೆ. ಇನ್ನೊಂದು ಕಡೆ ಸುಳ್ಳು ಹೇಳುವ ಭಾರತೀಯ ಜನತಾ ಪಕ್ಷವಿದೆ. ಆಯ್ಕೆ ನಿಮ್ಮ ಮುಂದಿದೆ- ರಾಹುಲ್ ಗಾಂಧಿ
ಉತ್ತರ ಕರ್ನಾಟಕ ಭಾಗದ ಜನ ಕುಡಿಯುವ ನೀರಿಗಾಗಿ ಮಹದಾಯಿ ಯೋಜನೆ ಜಾರಿಗೆ ಬರಲಿ ಎಂದು ಗೋಗರಿಯುತ್ತಿದ್ದಾರೆ. ನಾವೆಲ್ಲ ನಿಯೋಗ ತೆಗೆದುಕೊಂಡು ಹೋದರೂ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಲು ಒಪ್ಪಲಿಲ್ಲ. ಕರ್ನಾಟಕಕ್ಕೆ ಬಂದಿದ್ದಾಗಲೂ ಮಹಾದಾಯಿ ಬಗ್ಗೆ ಸೊಲ್ಲೆತ್ತಲಿಲ್ಲ. ಇಂಥವರಿಗೆ ಪಾಠ ಕಲಿಸುವ ಕಾಲ ಬಂದಿದೆ- ಸಿದ್ದರಾಮಯ್ಯ
ಅನಂತ್ ಕುಮಾರ್ ಒಬ್ಬ ನಾಲಾಯಕ್ ರಾಜಕಾರಣಿ, ಅವರು ಗ್ರಾಮ ಪಂಚಾಯತ್ ಸದಸ್ಯರಾಗುವುದಕ್ಕೂ ನಾಲಾಯಕ್- ಸಿದ್ದರಾಮಯ್ಯ
ಬಳ್ಳಾರಿ ಕಾಂಗ್ರೆಸ್ಸಿನ ಭದ್ರಕೋಟೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ಬಳ್ಳಾರಿ ಮೇಲೆ ಭಾವನಾತ್ಮಕ ಸಂಬಂಧವಿದೆ. ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ, ಬಳ್ಳಾರಿಯಲ್ಲಿ 9 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವುದೂ ಅಷ್ಟೇ ಸತ್ಯ- ಸಿದ್ದರಾಮಯ್ಯ
Advertisement
ಮೋದಿಯವರು ಬಂದಾಗ ಈಕಡೆ ಯಡಿಯೂರಪ್ಪ, ಆಕಡೆ ನಾಯ್ಡು. ನಮ್ಮ ಸರಕಾರವನ್ನು 10 ಪರ್ಸೆಂಟ್ ಸರಕಾರ ಅಂತ ಹೇಳಿದ್ದಕ್ಕೆ ಮೋದಿಯವರಿಗೆ ನಾಚಿಕೆ ಆಗಬೇಕು. ಅವರು ದೇಶದ ಪ್ರಧಾನಿ ಆಗಲು ಅರ್ಹರಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದೇನೆ - ಸಿದ್ದರಾಮಯ್ಯ.
ಒಂದಾನೊಂದು ಕಾಲದಲ್ಲಿ ಬಳ್ಳಾರಿ ಸಂಪದ್ಭರಿತವಾಗಿತ್ತು. ಇದನ್ನು ಸಂತೋಷ್ ಹೆಗಡೆ ಅವರೇ ಹೇಳಿದ್ದಾರೆ. ಬಳ್ಳಾರಿ ಬ್ರದರ್ಸ್ ಅಕ್ರಮ ಗಣಿಗಾರಿಕೆಯಲ್ಲಿ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಈ ಕಳಂಕವನ್ನು ತೊಳೆದುಹಾಕಬೇಕು. ಭಯದ ವಾತಾವರಣ ಹೋಗಬೇಕು. ಇದಕ್ಕಾಗಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ರೆಡ್ಡಿ ಬ್ರದರ್ಸ್ ಗೆ ಸವಾಲು ಹಾಕಿದ್ದೆ - ಸಿದ್ದರಾಮಯ್ಯ.
ನವಕರ್ನಾಟಕ ನಿರ್ಮಾಣ ಆಗಬೇಕಾದರೆ ಕರ್ನಾಟಕದಲ್ಲಿ ಕಾಂಗ್ರೆಸ ಮತ್ತೆ ಅಧಿಕಾರಕ್ಕೆ ಬರಲೇಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜನರು ಬಿಜೆಪಿ ಆಡಳಿತ ನೋಡಿದ್ದಾರೆ. ನಾಡಿನ ಸಂಪತ್ತನ್ನು ಲೂಟಿ ಹೊಡೆದಂಥ ಸರಕಾರ ಯಾವುದಾದರೂ ಇದ್ದರೆ ಅದು ಬಿಜೆಪಿ ಸರಕಾರ, ಬೇರೆ ಯಾವುದೇ ಸರಕಾರವಲ್ಲ - ಸಿದ್ದರಾಮಯ್ಯ.
ಅನ್ನ ಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯ, ಆರೋಗ್ಯ ಭಾಗ್ಯ, ಇಂದಿರಾ ಕ್ಯಾಂಟೀನ್... ನಾವು ಕೊಟ್ಟಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಕರ್ನಾಟಕದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ 90ರಷ್ಟು ಜನರಿಗೆ, ಎಲ್ಲ ಜಾತಿಯವರಿಗೆ, ಎಲ್ಲ ಬಡವರಿಗೆ ಒಂದಲ್ಲ ಒಂದು ಸೌಲಭ್ಯ ಕೊಟ್ಟಿದ್ದೇವೆ, ಶಕ್ತಿ ತುಂಬುವಂಥ ಕೆಲಸ ಮಾಡಿದ್ದೇವೆ - ಸಿದ್ದರಾಮಯ್ಯ.
ವಿಜಯನಗರದ ಅರಸರು ಎಲ್ಲರೂ ಸ್ಮರಣೆ ಮಾಡುವಂಥ ಆಡಳಿತ ಕೊಟ್ಟಿದ್ದರು. ಎಲ್ಲರೂ ಶಾಂತಿಯಿಂದ ನೆಲೆಸುವಂಥ ವಾತಾವರಣ ನಿರ್ಮಾಣ ಮಾಡಿಕೊಟ್ಟಿದ್ದರು. ಅಂಥ ಸ್ಥಳದಿಂದ ರಾಹುಲ್ ಗಾಂಧಿಯವರು,
ಅಧ್ಯಕ್ಷರಾದನಂತರ ಮೊದಲನೇ ಬಾರಿಗೆ ಕರ್ನಾಟಕಕ್ಕೆ ಬಂದಿದ್ದಾರೆ. ನೀವೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ರಾಹುಲ್ ಮಾತನ್ನು ಕೇಳಲು ಬಂದಿದ್ದೀರಿ. ರಾಜ್ಯದ ಜನತೆಯ ಪರವಾಗಿ ರಾಹುಲ್ ಅವರಿಗೆ ಹಾರ್ದಿಕ ಸ್ವಾಗತ ಕೋರುತ್ತೇನೆ - ಸಿದ್ದರಾಮಯ್ಯ.
ಈ ಸಮಾವೇಶವನ್ನು ಯಶಸ್ವಿಗೊಳಿಸಲು ಕಾರಣರಾದ ಎಲ್ಲ ಕಾರ್ಯಕರ್ತರಿಗೆ, ಶಾಸಕರಿಗೆ, ಸಂಸದರಿಗೆ, ರಾಹುಲ್ ಗಾಂಧಿಯವರಿಗೆ ಧನ್ಯವಾದ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ನೆಹರೂ ಅವರು ಪ್ರಧಾನಿಯಾಗಿದ್ದಾಗ ಕಾಶ್ಮೀರವನ್ನು ಬಿಟ್ಟುಕೊಟ್ಟಿದ್ದಾರೆ ಎಂಬುದನ್ನು ಬಿಜೆಪಿ ಸಾಬೀತುಪಡಿಸಿದರೆ ನಾನು ಇದ್ದಲ್ಲಿಯೇ ರಾಜೀನಾಮೆ ನೀಡುತ್ತೇನೆ. ಪಟೇಲ್ ಅವರು ಇದ್ದಿದ್ದರೆ ಕಾಶ್ಮೀರ ಬಿಟ್ಟುಕೊಡುತ್ತಿರಲಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಬಿಜೆಪಿಯವರು ಹೇಳುವುದು ಬರೀ ಸುಳ್ಳು - ಸಂಸದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ.
ಜನಾಶೀರ್ವಾದ ಯಾತ್ರೆ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದ ರಾಹುಲ್ ಗಾಂಧಿ. ಹಿನ್ನೆಲೆಯಲ್ಲಿ ಹಿಂದೂಸ್ತಾನವು ಎಂದೂ ಮರೆಯದ ಕಾಂಗ್ರೆಸ್ ಪಕ್ಷದ ರಥಯಾತ್ರೆ ಹಾಡು ಮೊಳಗುತ್ತಿತ್ತು.
ಕಾಂಗ್ರೆಸ್ ಪ್ರದೇಶ ಸಮಿತಿಯ ವತಿಯಿಂದ, ಜನಪರವಾದ ಆಡಳಿತವನ್ನು ನೀಡಿದ ವಿಜಯನಗರ ಅರಸರು ಆಳಿದ ನಾಡಿನಲ್ಲಿ ಐತಿಹಾಸಿಕ ಸಮಾವೇಶವನ್ನು ಆಯೋಜಿಸಲಾಗಿದೆ. ಇಲ್ಲಿಂದಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಹುಲ್ ಗಾಂಧಿಯವರು ರಣಕಹಳೆಯನ್ನು ಊದಲಿದ್ದಾರೆ - ಡಾ. ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ಅವರಿಂದ ಸ್ವಾಗತ ಭಾಷಣ.
ಕರ್ನಾಟಕ ಉಸ್ತುವಾರಿ ವಹಿಸಿರುವ ವೇಣುಗೋಪಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್, ಕೆಪಿಸಿಸಿ ಚುನಾವಣಾ ಪ್ರಚಾರ ಉಸ್ತುವಾರಿ ವಹಿಸಿರುವ ಡಿಕೆ ಶಿವಕುಮಾರ್, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವೇದಿಕೆಯ ಮೇಲೆ ಉಪಸ್ಥಿತಿ. ವಂದೇ ಮಾತರಂ ನಂತರ ನಾಡಗೀತೆಗೆ ಎದ್ದು ನಿಂತ ಸಭಿಕರು.
ತೋರಣಗಲ್ ನ ಜಿಂದಾಲ್ ಏರ್ಪೋರ್ಟ್ ನಿಂದ ಹೆಲಿಕಾಪ್ಟರ್ ಮೂಲಕ ಹೊಸಪೇಟೆಗೆ ಬ್ಲಾಕ್ ಕಮಾಂಡೋಗಳ ಜೊತೆ ರಾಹುಲ್ ಗಾಂಧಿ ಆಗಮನ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಕೂಡ ಆಗಮನ.
Comments
rahul gandhi hospet congress karnataka assembly elections 2018 ballari ರಾಹುಲ್ ಗಾಂಧಿ ಕರ್ನಾಟಕ ವಿಧಾನಸಭೆ ಚುನಾವಣೆ 2018 ಬಳ್ಳಾರಿ ಹೊಸಪೇಟೆ karnataka assembly elections 2018
English summary
Rahul Gandhi Janashirvada rally in Hospet LIVE. Rahul Gandhi is in Karnataka on 4 days visit to kick start campaign for Congress before Karnataka Assembly Elections 2018. He will be addressing public rally in Hospet, Ballari.