ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ ಪಿ.ಟಿ. ಪರಮೇಶ್ವರನಾಯ್ಕ ಅಭಿಮಾನಿ
ಬಳ್ಳಾರಿ, ಜೂನ್. 11 : ಹೂವಿನಹಡಗಲಿಯ ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಊರಿನ ತೇರು ಹನುಮಪ್ಪ ಸ್ವಾಮಿಗೆ ದೀಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತಿದ್ದ ಶಾಸಕರ ಅಭಿಮಾನಿ, ತೇರು ಹನುಮಪ್ಪ ಸ್ವಾಮಿಯ ಭಕ್ತ, ಕಡ್ಲಬಾಳು ಯಮನಪ್ಪ ಅವರು ಶಾಸಕರ ಸಮ್ಮುಖದಲ್ಲಿಯೇ ದೀಡ್ ನಮಸ್ಕಾರ ಹಾಕಿ, ಹರಕೆ ತೀರಿಸಿದ್ದಾರೆ.
ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಟಿ. ಪರಮೇಶ್ವರನಾಯ್ಕ ಅವರ ಗೆಲುವು ಕಷ್ಟಕರವಾಗಿತ್ತು. ಪಕ್ಷೇತರ ಅಭ್ಯರ್ಥಿ ಓದೋ ಗಂಗಪ್ಪ ಮತ್ತು ಬಿಜೆಪಿ ಅಭ್ಯರ್ಥಿ ತೀವ್ರ ಸ್ಪರ್ಧೆ ನೀಡಿ, ಹಾಲಿ ಶಾಸಕರ ಗೆಲುವು ದೊಡ್ಡ ಸವಾಲಾಗಿತ್ತು. ಅಲ್ಲದೇ, ಅವರ ಗೆಲುವು ಕಷ್ಟಕರವಾಗಿದೆ ಎಂದೇ ರಾಜಕೀಯವಾಗಿ ವಿಶ್ಲೇಷಿಸಲಾಗಿತ್ತು.
ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದ ಅಭ್ಯರ್ಥಿಗಳು ಮತ್ತೊಮ್ಮೆ ಸೋಲುತ್ತಾರೆ!
ಈ ಹಿನ್ನಲೆಯಲ್ಲಿ ಕಡ್ಲಬಾಳು ಯಮನಪ್ಪ ಅವರು ಪಿ.ಟಿ. ಪರಮೇಶ್ವರನಾಯ್ಕ ಅವರ ಗೆಲುವಿಗಾಗಿ ಹಡಗಲಿಯ ಎಂ.ಪಿ. ಪ್ರಕಾಶ ನಗರದ ತೇರು ಹನುಮಪ್ಪ ಸ್ವಾಮಿಗೆ ಹರಕೆ ಹೊತ್ತು, ಶ್ರದ್ಧೆಯಿಂದ ಸಂಕಲ್ಪತೊಟ್ಟಿದ್ದರು.
ಚುನಾವಣೆಯ ಫಲಿತಾಂಶ ಬಂದ ಕೂಡಲೇ ಹರಕೆ ತೀರಿಸಲು ಅವರು ನಿರ್ಧರಿಸಿದ್ದರು. ಆದರೆ, ಶಾಸಕರ ಲಭ್ಯತೆ ಇಲ್ಲದ ಕಾರಣ ಅನಿವಾರ್ಯವಾಗಿ ಹರಕೆ ತೀರಿಸುವುದನ್ನು ಮುಂದೂಡಿದ್ದರು.
ಹೂವಿನಹಡಗಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ತೇರು ಹನುಮಪ್ಪ ಸ್ವಾಮಿ ದೇವಸ್ಥಾನದವರೆಗೆ ಕಡ್ಲಬಾಳು ಯಮುನಪ್ಪ ಅವರು ಶಾಸಕರ ಸಮ್ಮುಖದಲ್ಲಿಯೇ ದೀಡ್ ನಮಸ್ಕಾರ ಹಾಕುವ ಮೂಲಕ, ಹರಕೆ ತೀರಿಸಿದ್ದಾರೆ.
ಅಷ್ಟೇ ಅಲ್ಲ, ಹರಕೆ ಹೊತ್ತಿದ್ದನ್ನು ಪೂರ್ಣಗೊಳಿಸಿದ್ದಕ್ಕಾಗಿ ಊರಿನ ತುಂಬ ಎಲ್ಲರಿಂದ ಪ್ರಶಂಸೆಗೆ ಒಳಪಟ್ಟಿದ್ದಾರೆ.
ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಎಲಿಗಾರ ಸಂಘದ ಅಧ್ಯಕ ಅನಂತಪುರ ಖಾಜಾಹುಸೇನ್, ಹುಲಿಗಿ ಬಾಷಾಸಾಬ್, ಸಮೃದ್ ಸಾಬ್, ಮುಕ್ತುಂಸಾಬ್, ಸೊಪ್ಪಿನ ಮಲ್ಲಿಕಾರ್ಜುನ, ಸೋಗಿ ಅಜಮತುಲ್ಲಾ, ಪುರಸಭೆ ಮಾಜಿ ಉಪಾಧ್ಯಕ್ಷ ಕೆ.ಎಸ್.ರಹಿಮಾನ್, ಪುರಸಭೆ ಸದಸ್ಯ ಊಳಿಗದ ಹನುಮಂತಪ್ಪ, ಟಿ.ಮಹಾಂತೇಶ ಈ ಸಂದರ್ಭದಲ್ಲಿ ಹಾಜರಿದ್ದರು.