ಪದ್ಮಾವತಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ರೆಡ್ಡಿ ವಿರುದ್ಧ ಆರೋಪ
ಬಳ್ಳಾರಿ, ಮೇ 1 : ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಪ್ರಕರಣ ಹೊಸ ತಿರುವು ಪಡೆದಿದೆ. ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ವಿರುದ್ಧ ಆರೋಪ ಕೇಳಿ ಬರುತ್ತಿದೆ.
ಕೊಲೆಯಾಗಿರುವ ಪದ್ಮಾವತಿ ಸಹೋದರ ಜಿಲ್ಲಾ ಪೊಲೀಸ್ ಗೆ ಲಿಖಿತ ದೂರು ನೀಡಿದ್ದು, ಚುನಾವಣಾ ಸಂದರ್ಭದಲ್ಲಿ ವಿಷಯ ಸಾಕಷ್ಟು ಮಹತ್ವ ಪಡೆದಿದೆ. ಏಪ್ರಿಲ್ 30 ರ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಅವರಿಗೆ ಸುಬ್ಬಾರಾಯುಡು ಪತ್ರ ಸಲ್ಲಿಸಿದ್ದಾರೆ.
ಪದ್ಮಾವತಿ ಯಾದವ್ ಕೊಲೆ ಪ್ರಕರಣದಲ್ಲಿ ಜಿ. ಜನಾರ್ದನರೆಡ್ಡಿ ಹೆಸರು ಇದುವರೆಗೆ ತಳುಕು ಹಾಕಿಕೊಂಡಿರಲಿಲ್ಲ. ಪ್ರಕರಣದಲ್ಲಿ ಕೊಲೆ ಆರೋಪಿಗಳು ಪತ್ತೆಯಾಗಿಲ್ಲ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಿ ರಿಪೋಟ್ ಸಲ್ಲಿಸಿದ್ದರು.
ಈಗ ದೂರುದಾರ ಜಿ. ಜನಾರ್ದನರೆಡ್ಡಿ ಅವರನ್ನೇ ಆರೋಪಿ ಮಾಡಿ, ಮುಂದಿನ ತನಿಖೆಗೆ ಮನವಿ ಸಲ್ಲಿಸಿರುವುದು ಅನೇಕರಲ್ಲಿ ಅಚ್ಚರಿಯ ಕುತೂಹಲ ಮೂಡಿಸಿದೆ.
ಬಳ್ಳಾರಿ ಉಪ ಮೇಯರ್ ಪದ್ಮಾವತಿ ಕೊಲೆ ಹಿಂದೆ ಯಾರ ಕೈ?: ಟಪಾಲ್ ಪ್ರಶ್ನೆ
ಫೆ.4, 2010 ರಂದು ಪದ್ಮಾವತಿ ಯಾದವ್ ಅವರು ನಿರ್ಮಾಣ ಹಂತದಲ್ಲಿದ್ದ ಅವರ ಹೊಸ ಮನೆಯಂಗಳದಲ್ಲಿಯೇ ಭರ್ಬರವಾಗಿ ಹತ್ಯೆಗೀಡಾಗಿದ್ದರು.
ಪ್ರಕರಣವನ್ನು ಸಿಐಡಿ ತನಿಖೆ ಮಾಡಿ, ಐದು ವರ್ಷಗಳಾದರೂ ನ್ಯಾಯಲಯಕ್ಕೆ ಪ್ರಕರಣದ ಅಂತಿಮ ತನಿಖಾ ವರದಿ ಸಲ್ಲಿಸದೇ ಇದ್ದಾಗ ದೂರುದಾರ ಸುಬ್ಬರಾಯುಡು, ಹೈಕೋರ್ಟ್ ಮೊರೆ ಹೋಗಿದ್ದರು.
ಆಗ, ಕೇವಲ ಮೂರು ತಿಂಗಳಲ್ಲೇ ತನಿಖೆ ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ 2015 ಡಿಸೆಂಬರ್ ನಲ್ಲಿ ಕೋರ್ಟ್ ಸಿಐಡಿಗೆ ಆದೇಶ ನೀಡಿತ್ತು.
ಆರೋಪಿಗಳು ಪತ್ತೆಯಾಗಿಲ್ಲ ಎಂದು 2016 ಸೆಪ್ಟೆಂಬರ್ ನಲ್ಲಿ ಸಿಐಡಿ ಬಳ್ಳಾರಿಯ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿತ್ತು. ಸಿಐಡಿ ತನಿಖೆಯ ವರದಿಯನ್ನು ಪ್ರಶ್ನಿಸಿ ಸುಬ್ಬುರಾಯುಡು, ಎಸ್ ಐ ಟಿ ತನಿಖೆಗೆ ಒಪ್ಪಿಸಬೇಕು. ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ಪಡೆದಿಲ್ಲ ಎಂದು ಆರೋಪಿಸಿ ನ್ಯಾಯಾಲಯದ ಮೊರೆಹೋಗಿದ್ದರು.