ಕಾಂಗ್ರೆಸ್ ಗೆ ತಕ್ಕ ಪಾಠವಾಗಿದೆ: ಎನ್.ವೈ. ಗೋಪಾಲಕೃಷ್ಣ
ಬಳ್ಳಾರಿ, ಮೇ 15 : ನನ್ನ ಗೆಲುವು ಸಿಎಂ ಸಿದ್ಧರಾಮಯ್ಯ ಅವರಿಗೆ. ಕಾಂಗ್ರೆಸ್ ಗೆ ತಕ್ಕ ಪಾಠವಾಗಿದೆ. ನನಗೆ ಟಿಕೆಟ್ ನಿರಾಕರಿಸಲಾಯಿತು. ನನ್ನ ರಾಜಕೀಯ ಜೀವನ ಮುಗಿದೇ ಹೋಯಿತು ಎಂದು ಹೇಳಲಾಯಿತು. ಆದರೆ ನನಗೆ ಬಿಜೆಪಿ ಕರೆದು, ನನಗೆ ಪರಿಚಯವೇ ಇಲ್ಲದ ಕೂಡ್ಲಿಗಿಗೆ ಟಿಕೇಟ್ ನೀಡಿ, ಗೆಲ್ಲಿಸಿದೆ ಎಂದು ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ಬಿಜೆಪಿಯನ್ನು ಪ್ರಶಂಸಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾನು ನಾಲ್ಕು ಅವಧಿಗೆ ಕಾಂಗ್ರೆಸ್ ಶಾಸಕನಾಗಿದ್ದೆ. ಕಾಂಗ್ರೆಸ್ ನಿಷ್ಠಾವಂತ. ಆದರೂ, ಕಾಂಗ್ರೆಸ್ ನನಗೆ ಟಿಕೆಟ್ ನಿರಾಕರಿಸಿತು. ಕಾರಣ ಈಗಲಾದರೂ ಹೇಳಲಿ ಎಂದು ಆಗ್ರಹಿಸಿದರು.
'ಬಿಜೆಪಿಯವರು ಸಚಿವ ಸ್ಥಾನದ ಆಮಿಷವೊಡ್ಡಿದರು'
ಆಗಿದ್ದೆಲ್ಲಾ ಒಳ್ಳೆಯದ್ದಕ್ಕೇ. ನಾನು ಶಾಸಕನಾಗಿದ್ದೇನೆ. ಜನರು ಆಶೀರ್ವಾದ ಮಾಡಿದ್ದಾರೆ. ಇದು ಜನರ ಗೆಲುವು. ನನಗೆ ಬಿಜೆಪಿಯೇ ಹೈಕಮಾಂಡ್. ಪಕ್ಷಕ್ಕಾಗಿ ದುಡಿಯುವೆ ಎಂದು ತಿಳಿಸಿದರು.
ಎನ್.ವೈ. ಗೋಪಾಲಕೃಷ್ಣ ಅವರು ಮೊಳಕಾಲ್ಮೂರು ಕ್ಷೇತ್ರದಲ್ಲಿ 2013 ರಲ್ಲಿ ಸೋಲನುಭವಿಸಿದ ನಂತರ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದನ್ನು ಸ್ಮರಿಸಬಹುದು.