25 ಸಾವಿರಕ್ಕೂ ಹೆಚ್ಚು ಮಂದಿಗೆ ಬಾಡೂಟ ಹಾಕಿಸಿದ ಸೂರ್ಯನಾರಾಯಣ ರೆಡ್ಡಿ
Recommended Video
ಬಳ್ಳಾರಿ, ಫೆಬ್ರವರಿ 23: ಅಲ್ಲಿ ಬಾಡೂಟದ್ದೇ ಮಾತು. ಮಾಂಸದೂಟ, ಹೋಳಿಗೆಯ ಘಮಘಮ. ರಸ್ತೆಯಲ್ಲಿ ತಿರುಗಾಡುವ ಬಸ್ಸುಗಳಲ್ಲಿದ್ದ ಪ್ರಯಾಣಿಕರ ಬಾಯಲ್ಲಿ ನೀರೂರಿಸುವಂತೆ ಪುಷ್ಕಳ ಭೋಜನದ ಏರ್ಪಾಟು. - ಇದು ಎನ್. ಸೂರ್ಯನಾರಾಯಣರೆಡ್ಡಿ ಅವರು ದರೋಜಿ ಸಮೀಪದ ಕಣಿವೆ ಮಾರೆಮ್ಮ ದೇವಸ್ಥಾನದಲ್ಲಿ 25 ಸಾವಿರಕ್ಕೂ ಹೆಚ್ಚಿನ ಮತದಾರರಿಗಾಗಿ ಏರ್ಪಡಿಸಿದ್ದ ದೇವಿ ಪ್ರಸಾದದ ಮಹಿಮೆ.
ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕಾರಣಿಗಳು ಅಲ್ಲಲ್ಲಿ ಮತದಾರರಿಗಾಗಿಯೇ ಬಾಡೂಟದ ಸಭೆ- ಸಮಾರಂಭಗಳನ್ನು ಏರ್ಪಡಿಸುವುದು ಸಹಜ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಳ್ಳಾರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್. ಸೂರ್ಯನಾರಾಯಣ ರೆಡ್ಡಿ ಶುಕ್ರವಾರ 25 ಸಾವಿರ ಜನರಿಗಾಗಿ ಬಾಡೂಟದ ಸಭೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಏರ್ಪಡಿಸಿದ್ದಾರೆ.
ಪುಕ್ಕಟೆ ಪ್ರವಾಸ, ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ನಾಟಕ
ಎನ್. ಸೂರ್ಯನಾರಾಯಣರೆಡ್ಡಿ ಆಪ್ತರ ಪ್ರಕಾರ, 108 ಕುರಿಗಳನ್ನು ಸಿಂಧನೂರಿನಿಂದ ತರಿಸಿ, ದೇವಲಾಪುರ ಗ್ರಾಮದ ಹೊರವಲಯದಲ್ಲಿ ಒಂದೆರೆಡು ದಿನಗಳ ಕಾಲ ಇರಿಸಿ, ಚೆನ್ನಾಗಿ ಕೊಬ್ಬುವಂತೆ ಮೇವು, ಹಿಂಡಿಯನ್ನು ತಿನ್ನಿಸಿದ್ದಾರೆ. 108 ಕುರಿಗಳಲ್ಲಿ ಕೇವಲ 8 ಕುರಿಗಳನ್ನು ಮಾತ್ರ ದೇವಿಗೆ ಪ್ರಸಾದವಾಗಿ ಅರ್ಪಿಸಿ, ಉಳಿದ ಕುರಿಗಳನ್ನು ನೇರವಾಗಿ ಕತ್ತರಿಸಿ, ಆಹಾರವಾಗಿಸಿದ್ದಾರೆ.
ಪ್ರತ್ಯೇಕ ಸಸ್ಯಾಹಾರದ ವ್ಯವಸ್ಥೆ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಾಮಿಯಾನ, ಶುದ್ಧವಾದ ಕುಡಿಯುವ ನೀರು, ಪ್ರತ್ಯೇಕ ಸಸ್ಯಾಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ಆಹಾರ ಸಿದ್ಧಪಡಿಸಲಿಕ್ಕಾಗಿ ಟನ್ ಗಟ್ಟಲೆ ಕಟ್ಟಿಗೆಯನ್ನೂ ಖರೀದಿ ಮಾಡಲಾಗಿದೆ. ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ ಮತ್ತು ಕಂಪ್ಲಿ ಭಾಗದ ವಿವಿಧ ಪಕ್ಷಗಳ ಮುಖಂಡರು, ಬೆಂಗಲಿಗರು ಮತ್ತು ಅಭಿಮಾನಿಗಳನ್ನು ಮತ್ತು ಮತದಾರರನ್ನು ವೈಯಕ್ತಿಕವಾಗಿ ದೂರವಾಣಿ ಕರೆ ಮೂಲಕ ಆಹ್ವಾನಿಸಿದ್ದಾರೆ ಎನ್. ಸೂರ್ಯನಾರಾಯಣರೆಡ್ಡಿ.
ಒಂದೆರಡು ತಿಂಗಳಿನಿಂದ ಸಿದ್ಧತೆ
ಈ ಬಾಡೂಟದ ಏರ್ಪಾಟಿಗಾಗಿ ಒಂದೆರೆಡು ತಿಂಗಳಿನಿಂದಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಅವರ ಅಭಿಮಾನಿ ಬಳಗದ ಸದಸ್ಯರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಕಣಿವೆ ಮಾರೆಮ್ಮ ದೇವಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿ, ಸಭಿಕರನ್ನು ಉದ್ದೇಶಿಸಿ ಎನ್. ಸೂರ್ಯನಾರಾಯಣ ರೆಡ್ಡಿ ಮಾತನಾಡಿದ್ದಾರೆ.
ಕಾಂಗ್ರೆಸ್ ಗೆಲ್ಲಲಿ ಎಂಬ ಆಶಯ
'ಬಳ್ಳಾರಿ ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನನಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕು. ಕಾಂಗ್ರೆಸ್ ಪಕ್ಷಕ್ಕೆ, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ, ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು, ನೇತಾರರು, ಯುವ ಮುಂದಾಳುಗಳಿಗೆ ಒಳಿತಾಗಲಿ. ಕರ್ನಾಟಕದಲ್ಲಿ ಮಳೆ-ಬೆಳೆ, ಜನತೆಯ ಆರೋಗ್ಯ ಉತ್ತಮವಾಗಿರಲಿ' ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ಸೂರ್ಯನಾರಾಯಣ ರೆಡ್ಡಿ ತಿಳಿಸಿದರು.
ಊಟದ ನಂತರ ವಿಹಾರಕ್ಕೂ ವ್ಯವಸ್ಥೆ
ತುಂಬಾ ಅಚ್ಚುಕಟ್ಟಾಗಿ ಬಾಡೂಟವನ್ನು ಏರ್ಪಡಿಸಲಾಗಿದೆ. ವಾಹನ, ಕುಡಿಯುವ ನೀರು, ಆಹಾರ ಸಿದ್ಧತೆ, ಆಹಾರ ವಿತರಣೆ ಹಾಗೂ ಊಟದ ನಂತರ ಕೆಲ ಹೊತ್ತು ವಿಹರಿಸಲು ಉತ್ತಮ ವ್ಯವಸ್ಥೆ ಇದಾಗಿದೆ. ದೇವಿ ಅವರಿಗೆ ಒಳಿತನ್ನು ಮಾಡಲಿ ಎಂದು 48 ವರ್ಷದ ಬಳ್ಳಾರಿ ನಗರ ನಿವಾಸಿ ಕೆ. ಸಿದ್ದರಾಮಪ್ಪ, ಹೇಳಿದರು.