ಶೀಘ್ರದಲ್ಲೇ ಜನಾರ್ದನ ರೆಡ್ಡಿ ಸಕ್ರಿಯ ರಾಜಕಾರಣಕ್ಕೆ: ಶ್ರೀರಾಮುಲು
ಬಳ್ಳಾರಿ, ಜನವರಿ 16: ಜನಾರ್ದನ ರೆಡ್ಡಿ ಅವರ ಕುರಿತು ರಾಜ್ಯದ ಮುಖಂಡರು ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದು ಆದಷ್ಟು ಶೀಘ್ರವಾಗಿ ಅವರು ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂದು ಸಂಸದ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಾರ್ದನ ರೆಡ್ಡಿ ಅವರು ಇಲ್ಲಿನ ತಮ್ಮ ನಿವಾಸಕ್ಕೆ ಬಂದು ಕೂತರೆ ಸಾಕು ಜಿಲ್ಲೆಯ ಎಲ್ಲಾ 9 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ ಅಂತಹಾ ವರ್ಚಸ್ಸು ರೆಡ್ಡಿ ಅವರಿಗೆ ಇದೆ ಎಂದು ಅವರು ನುಡಿದಿದ್ದಾರೆ.
ಗಾಲಿ ಜನಾರ್ಧನ ರೆಡ್ಡಿ ಬಿಜೆಪಿಗೆ ಮರುಸೇರ್ಪಡೆ?
ಜನಾರ್ದನ ರೆಡ್ಡಿ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದರೆ ಸಂಪೂರ್ಣ ಉತ್ತರ ಕರ್ನಾಟಕ ಬಿಜೆಪಿ ಮಯವಾಗಿಬಿಡುತ್ತದೆ, ಕೊಪ್ಪಳ, ಬಳ್ಳಾರಿ, ಗದಗ, ರಾಯಚೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಇಲ್ಲವಾಗಿಬಿಡುತ್ತದೆ ಎಂದು ಅವರು ಹೇಳಿದರು.
ಶ್ರೀರಾಮುಲು ಅವರ ಪತ್ನಿ ರಾಜಕೀಯಕ್ಕೆ ಇಳಿಯಲಿದ್ದಾರೆ ಎಂಬ ಗಾಳಿಸುದ್ದಿಯನ್ನು ತಳ್ಳಿಹಾಕಿದ ಅವರು ನಮ್ಮ ಕುಟುಂಬದಿಂದ ಯಾರೊಬ್ಬರೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದರು.
ಬಳ್ಳಾರಿಯ ಬಿಜೆಪಿ ಮುಖಂಡರಲ್ಲಿ ಉಂಟಾಗಿರುವ ವೈಮನಸ್ಯದ ಬಗ್ಗೆ ಮಾತನಾಡಿದ ಅವರು ಕೂಡ್ಲಿಗಿ ಶಾಸಕ ನಾಗೇಂದ್ರ ಅವರು ಬಿಜೆಪಿಯಲ್ಲಿದ್ದರು ಆದರೆ ಈಗ ಇಲ್ಲ ಎಂದರು, ಶಾಸಕ ಆನಂದ್ ಸಿಂಗ್ ಅವರು ಬಿಜೆಪಿ ತೊರೆಯುವ ಬಗ್ಗೆ ಮಾತನಾಡಿದ ಆನಂದ್ ಸಿಂಗ್ ಪಕ್ಷ ಬಿಡುವುದಿಲ್ಲ, ಕೆಲವು ಭಿನ್ನಾಭಿಪ್ರಾಯಗಳು ಇವೆ ಅವನ್ನು ಚರ್ಚೆ ಮುಖಾಂತರ ಬಗೆಹರಿಸಲಾಗುವುದು ಎಂದರು.