ರೆಡ್ಡಿ ಸಾಮ್ರಾಜ್ಯದ ಶಕ್ತಿ ಕೇಂದ್ರ 'ಕುಟೀರ'ದ ವೈಭವ, ಈಗಿನ ನೀರವ
ಬಳ್ಳಾರಿ, ಏಪ್ರಿಲ್ 28: ಪರ್ಣಕುಟೀರ, ಸ್ವರ್ಣ ಕುಟೀರ ಮತ್ತಿನ್ನಾವುದೋ ಕುಟೀರಗಳನ್ನು ಕಂಡು ಕೇಳಿದವರಿಗಿಂತ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಮತ್ತವರ ಗುಂಪು ರಾಜಕೀಯ ಚಟುವಟಿಕೆಗಳಿಗಾಗಿಯೇ ಮೀಸಲಿಟ್ಟಿದ್ದ ಈ 'ಕುಟೀರ' ಭಿನ್ನವಾಗಿತ್ತು. ರಾಜ್ಯ ರಾಜಕೀಯದ ಶಕ್ತಿ ಕೇಂದ್ರವಾಗಿ, ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ಶಕ್ತಿ ಕೇಂದ್ರವಾಗಿ ರೂಪುಗೊಂಡಿತ್ತು.
'ಕುಟೀರ' ಎಂದರೆ ಕಿವಿ ನಿಮಿರುವ, ಮೈ ಝುಂ ಎನ್ನುವ, ಏನೋ ವಿಶಿಷ್ಟ ಅನುಭವ ನೀಡುವ ದಿನಗಳು ಬಳ್ಳಾರಿಯಲ್ಲಿದ್ದವು. ಆದರೆ ಆ 'ಕುಟೀರ' ಈಗ ಕೇವಲ ನೆನಪು. ಕುಟೀರದ ಸ್ಥಳದಲ್ಲಿ ದೊಡ್ಡದಾದ ಸಭಾಂಗಣ ನಿರ್ಮಾಣ ಆಗಿದ್ದರೂ ಅಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳು ನಡೆಯುತ್ತಿಲ್ಲ. ನಿಸ್ತೇಜ - ನಿರ್ಜನ ಪ್ರದೇಶವಾಗಿದೆ.
ಕವಲು ಹಾದಿಯಲ್ಲಿ ಜನಾರ್ದನ ರೆಡ್ಡಿ 'ಗಾಲಿ', ಪಿಕ್ಚರ್ ಅಭಿ ಬಾಕಿ ಹೈ
ಕಾರಣ, ಅಲ್ಲಿ ಕುಟೀರದ ಚಾಣಕ್ಯ ಜನಾರ್ದನ ರೆಡ್ಡಿಯೂ ಇಲ್ಲ, ರೆಡ್ಡಿ ಆಪ್ತಮಿತ್ರ ಬಿ. ಶ್ರೀರಾಮುಲು ಹೋಗುವುದೂ ಇಲ್ಲ. 2008ರ ನಂತರದ ರಾಜ್ಯ ಬಿಜೆಪಿಯಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರು ಮತ್ತು ಅವರ ಕುಟೀರ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರದ ಎಲ್ಲಾ ಸಂಘಟನೆಗಳಿಗೆ ಪರ್ಯಾಯ ಶಕ್ತಿಯಾಗಿ ಗುರುತಿಸಿಕೊಂಡಿತ್ತು.
ಐಷಾರಾಮಿ ಸೌಲಭ್ಯಗಳಿದ್ದ ಕುಟೀರ
'ಕುಟೀರ'ದ ಕರೆ, ಆಹ್ವಾನ, ಕುಟೀರದ ಭೋಜನ ಎಲ್ಲವೂ ದೊಡ್ಡ ಪ್ರತಿಷ್ಠೆಯ ಸಂಗತಿಗಳಾಗಿದ್ದ ಕಾಲವದು. ಜಿ. ಜನಾರ್ದನರೆಡ್ಡಿ ಮನೆಯಲ್ಲಿ ರಾಜಕೀಯ ಚಟುವಟಿಕೆಗಳನ್ನು ತಪ್ಪಿಸಲಿಕ್ಕಾಗಿಯೇ, ಸಾರ್ವಜನಿಕರು, ನಾಯಕರನ್ನು ಭೇಟಿ ಮಾಡಲು, ಸುದ್ದಿಗೋಷ್ಟಿಗಳನ್ನು ನಡೆಸಲಿಕ್ಕಾಗಿಯೇ ಕುಟೀರ ಮೀಸಲಾಗಿತ್ತು. ಕುಟೀರಕ್ಕೆ ಐಷಾರಾಮಿ ಸೌಲಭ್ಯಗಳು, ಇಂಟರ್ ನೆಟ್, ಟಿವಿ, ಏಸಿಗಳು ಬಂದ ಮೇಲಂತೂ ಒಂದರ್ಥದಲ್ಲಿ ಅಧಿಕಾರದ ನಿರ್ಣಾಯಕ ಸ್ಥಳವಾಗಿ ಗುರುತಿಸಿಕೊಂಡಿತ್ತು.
ನೆಲ ಕಚ್ಚಿದಾಗ ಸುದ್ದಿಯಾಗಿತ್ತು
ಅನೇಕರು ಬಿಜೆಪಿ ಸೇರಿದ್ದು, ಲೀಡರ್ ಗಳಾಗಿ ಪದವಿಗಳಿಗೆ ನೇಮಕ ಆಗಿದ್ದು, ಚುನಾವಣೆಗಳಲ್ಲಿ ಸ್ಪರ್ಧಿಸುವ, ಬೆಂಬಲ, ಇನ್ನಿತರೆ ನಿರ್ಣಯಗಳು ನಿರ್ಧಾರಿತವಾಗಿ ಶಾಸಕರು, ಜಿಲ್ಲಾ - ತಾಲೂಕು ಪಂಚಾಯಿತಿ ಸದಸ್ಯರಾಗಿದ್ದು, ಸಂಸದರಾಗಿದ್ದು, ಇನ್ನಿತರರು ಸ್ಪರ್ಧಿಸಿ ಸೋಲನುಭವಿಸಿದ್ದು ಎಲ್ಲವೂ 'ಕುಟೀರ'ದಲ್ಲೇ ಎನ್ನುವುದು ವಿಶೇಷ. ವಾಸ್ತು ಸರಿಪಡಿಸುವ ಕಾರಣಕ್ಕಾಗಿ 'ಕುಟೀರ' ನೆಲ ಕಚ್ಚಿದಾಗ ದೊಡ್ಡ ಸುದ್ದಿಯೇ ಆಯಿತು. ಆ ಜಾಗಕ್ಕೆ ಬಂದ ಕಟ್ಟಡ ಅಷ್ಟಾಗಿ ಸದ್ದು ಮಾಡುತ್ತಿಲ್ಲ.
ಮಾಧ್ಯಮಗಳ ಪಾಲಿಗೆ ಸುದ್ದಿ ಕೇಂದ್ರ ಬಿಂದು
ಏಕೆಂದರೆ, ಅಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳು ಕಳೆದ ಆರೇಳು ವರ್ಷಗಳಿಂದ ನಡೆಯುತ್ತಿಲ್ಲ. ಯಾವುದೇ ರಾಜಕೀಯ ನಿರ್ಧಾರವಾಗುತ್ತಿಲ್ಲ. ಯಾರೊಬ್ಬರ ಭವಿಷ್ಯವೂ ರೂಪುಗೊಳ್ಳುತ್ತಿಲ್ಲ. ಕುಟೀರದಲ್ಲಿ ಸುದ್ದಿಗೋಷ್ಠಿ ಎಂದರೆ ಸಾಕು, ಮಾಧ್ಯಮ ಪ್ರತಿನಿಧಿಗಳು ನಿಗದಿತ ಅವಧಿಗಿಂತಲೂ ಮುಂಚಿತವಾಗಿಯೇ ಅಲ್ಲಿ ಹಾಜರು. ಮಾಧ್ಯಮ ಕೇಂದ್ರಗಳಂತೂ 'ಬ್ರೇಕಿಂಗ್ ಸುದ್ದಿ, ಫ್ಲ್ಯಾಷ್ ನ್ಯೂಸ್'ಗಾಗಿ ಪದೇ ಪದೇ ಫೋನಾಯಿಸಿ, ಬಳ್ಳಾರಿಯ ಪ್ರತಿನಿಧಿಗಳ ಬಳಿ ಮಾಹಿತಿ ಪಡೆಯುತ್ತಿದ್ದರು. ಒಂದರ್ಥದಲ್ಲಿ ಸುದ್ದಿಮನೆ ಕುತೂಹಲ.
ರಾಜಕೀಯ ಏಳು-ಬೀಳಿಗೆ ಸಾಕ್ಷಿ
ಸಣ್ಣ ಪ್ರಮಾಣದ ನಾಯಕ ಸುದ್ದಿಗೋಷ್ಟಿಯಲ್ಲಿ ಮಾತನಾಡಲಿ, ಜಿ. ಜನಾರ್ದನರೆಡ್ಡಿಯೇ ಮಾತನಾಡಲಿ, ಉಳಿದ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಮಾಧ್ಯಮಗಳು ಕುಟೀರದಲ್ಲಿ ಹಾಜರಿರುತ್ತಿದ್ದ ಕಾಲವದು. ಈಗ ಅಲ್ಲಿ ಕುಟೀರವೂ ಇಲ್ಲ, ಕನಿಷ್ಠ ಜನರನ್ನು ಮಾತನಾಡಿಸುವ ಜನಗಳೂ ಇಲ್ಲ. ರೆಡ್ಡಿ ಸಹೋದರರು ಬಿಎಸ್ ವೈ ವಿರುದ್ಧ ತೊಡೆ ತಟ್ಟಿ ನಿಂತಿದ್ದೂ ಕುಟೀರದಲ್ಲೇ. ಎಚ್.ಡಿ. ಕುಮಾರಸ್ವಾಮಿ ವಿರುದ್ಧ 150 ಕೋಟಿ ರುಪಾಯಿ ಗಣಿ ಹಗರಣದ ಆರೋಪದ ಏಳು- ಬೀಳುಗಳನ್ನು ಚರ್ಚಿಸಿದ್ದೂ ಕುಟೀರದಲ್ಲಿ. ಈಗ ಕುಟೀರದ ಜಾಗದಲ್ಲಿ ಮೌನ. ಕಾಲ ಮುಂದೆ ಹೋಗಿದೆ. ಅದರ ಮುಳ್ಳು ನಾವೇ ಎಂದವರಿಗೆ ಅಲ್ಲಿ ಸ್ಥಳವಿಲ್ಲ.