ಹಂಪಿ ಉತ್ಸವ 2018ರ ಮೇಲೆ ಲೋಕಸಭೆ ಚುನಾವಣೆಯ ಕರಿನೆರಳು
ಬಳ್ಳಾರಿ, ಅಕ್ಟೋಬರ್ 06 : ನವೆಂಬರ್ 3, 4 ಮತ್ತು 5ರಂದು ಆಚರಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ 'ಹಂಪಿ ಉತ್ಸವ - 2018'ಕ್ಕೆ ಲೋಕಸಭೆ ಮತ್ತು ವಿಧಾನಸಭಾ ಉಪ ಚುನಾವಣೆಯ ಕರಿನೆರಳು ಬೀಳುವ ಆತಂಕ ಅನೇಕರಲ್ಲಿ ಮನೆ ಮಾಡಿದೆ. ಆದರೆ, ಬಳ್ಳಾರಿ ಜಿಲ್ಲಾಡಳಿತದ ಅಧಿಕಾರಿ ವಲಯದಲ್ಲಿ 'ಚುನಾವಣೆಗೆ ಸಿದ್ಧತೆ' ಪೂರ್ಣಗೊಂಡಿದೆ.
ಜಿಲ್ಲಾಧಿಕಾರಿ ಡಾ. ರಾಂಪ್ರಸಾತ್ ವಿ. ಮನೋಹರ್ ಅವರು ವೈಯಕ್ತಿಕ ಮುತುವರ್ಜಿವಹಿಸಿ ಹಂಪಿ ಉತ್ಸವದ ಪೂರ್ವಭಾವೀ ಸಿದ್ಧತೆಗಳನ್ನು ಪ್ರತಿನಿತ್ಯವೂ ಪರಿಶೀಲಿಸಿ, ಕಲಾವಿದರ ಆಯ್ಕೆ, ವೇದಿಕೆಗಳ ನಿರ್ಮಾಣ, ಹಣಕಾಸು ವ್ಯವಸ್ಥೆ, ಆಹಾರ - ವಸತಿ ಸೇರಿ ಅನೇಕ ಉಪ ಸಮಿತಿಗಳನ್ನು ರಚಿಸಿ, ಉತ್ಸವದ ಯಶಸ್ವಿಗಾಗಿ ಅಧಿಕಾರಿಗಳನ್ನು ಕಳೆದ ಒಂದು ತಿಂಗಳಿನಿಂದಲೇ ಮಾನಸಿಕವಾಗಿ ಸಿದ್ಧಗೊಳಿಸುತ್ತಿದ್ದಾರೆ.
ಮಾರಾಟ ಮಳಿಗೆಗಳ ನಿರ್ಮಾಣ, ಬಸ್ ನಿಲ್ದಾಣ, ಸಾರಿಗೆ ವ್ಯವಸ್ಥೆ, ಕಾನೂನು ಮತ್ತು ಶಾಂತಿಯ ಪಾಲನೆ, ಕುಡಿಯುವ ನೀರು, ಶೌಚ ಅಷ್ಟೇ ಅಲ್ಲದೇ, ಆಹ್ವಾನಿತರ ಕಾಳಜಿ ಎಲ್ಲವನ್ನೂ ಪ್ರತೀ ಹಂತದಲ್ಲೂ ಗಮನಿಸುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲೂ ಬಳ್ಳಾರಿ ಲೋಕಸಭಾ ಉಪ ಚುನಾವಣೆಗಾಗಿ ಮತಗಟ್ಟೆಗಳ ಪಟ್ಟಿ, ಇವಿಎಂ ಯಂತ್ರಗಳ ಪರಿಶೀಲನೆ, ಮತದಾರರ ಪಟ್ಟಿ, ಇನ್ನಿತರೆ ಕೆಲಸಗಳನ್ನೂ ನಿರ್ವಹಿಸುತ್ತಿದ್ದಾರೆ.
ಶನಿವಾರದಂದು ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ನೋಟಿಫಿಕೇಷನ್ ಪ್ರಕಟ ಆಗುತ್ತಿರುವ ಹಿನ್ನಲೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೂ ಚುನಾವಣೆ ಘೋಷಣೆ ಆಗಲಿದೆ ಎಂದು ಅಧಿಕಾರಿಗಳು ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಅನೇಕರು ಹಂಪಿ ಉತ್ಸವಕ್ಕೆ ಕನಿಷ್ಠ 30 ಕೋಟಿ ರೂಪಾಯಿ ದುಂದುವೆಚ್ಚ ಮಾಡುವ ಬದಲು, ಉರಿ ಬಿಸಿಲಲ್ಲಿ ಕಲಾವಿದರು, ಆಹ್ವಾನಿತರು ಮತ್ತು ಕಲಾಪ್ರೇಮಿಗಳನ್ನು ಬಾಧಿಸುವ ಬದಲು ಚುನಾವಣೆ ನಡೆದು, ಉತ್ಸವ ಮುಂದೂಡುವುದೇ ಸೂಕ್ತ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಿ. ಶ್ರೀರಾಮುಲು ಅವರು ಲೋಕಸಭಾ ಚುನಾವಣೆ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವ ಸುಳಿವು ಅಧಿಕಾರಿಗಳಲ್ಲಿ ಇದೆ.
ಅಷ್ಟೇ ಅಲ್ಲ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೆರವು ಮಾಡಿರುವ ರಾಮನಗರ ವಿಧಾನಸಭಾ ಕ್ಷೇತ್ರ ಮತ್ತು ಸಿದ್ದು ನ್ಯಾಮಗೌಡ ಅವರ ನಿಧನದಿಂದ ತೆರವಾಗಿರುವ ಜಮಖಂಡಿ ವಿಧಾನಸಭಾ ಉಪ ಚುನಾವಣೆ ದಿನಾಂಕ ಘೋಷಣೆ ಆದರೂ, ನೀತಿ ಸಂಹಿತೆ ಹಿನ್ನಲೆಯಲ್ಲಿ ಹಂಪಿ ಉತ್ಸವ ರದ್ದಾಗಲಿದೆ ಎನ್ನುವುದು ಅನೇಕರ ಲೆಕ್ಕಾಚಾರವಾಗಿದೆ.