ಪರಮೇಶ್ವರ್ ನಾಯ್ಕ್ಗೆ ಏಕೆ ಸಚಿವ ಸ್ಥಾನ? ಭೀಮಾ ನಾಯ್ಕ್ ಆಕ್ರೋಶ
ಬಳ್ಳಾರಿ, ಡಿಸೆಂಬರ್ 22: ಹೂವಿನ ಹಡಗಲಿ ಶಾಸಕ ಪರಮೇಶ್ವರ್ ನಾಯ್ಕ್ ಅವರಿಗೆ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ನೀಡುತ್ತಿದ್ದಂತೆಯೇ ಬಳ್ಳಾರಿ ಕಾಂಗ್ರೆಸ್ನಲ್ಲಿ ಭಾರಿ ಅಸಮಾಧಾನ ಸ್ಫೋಟಗೊಂಡಿದೆ.
ಅದರಲ್ಲಿಯೂ ಮುಖ್ಯವಾಗಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್, ಪಕ್ಷದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ? ಇಲ್ಲಿದೆ ಪಟ್ಟಿ
ಪರಮೇಶ್ವರ್ ನಾಯ್ಕ್ ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದರು. ಹಿಂದೆಯೂ ಸಚಿವರಾಗಿದ್ದ ಅವರ ಆಡಳಿತ ಹೇಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಅವರು ಸಚಿವರಾಗಿದ್ದಾಗ ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಶೂನ್ಯ, ಅಂತಹವರಿಗೆ ಸಚಿವ ಸ್ಥಾನ ನೀಡಬೇಕಿತ್ತೇ? ಎಂದು ಭೀಮಾ ನಾಯ್ಕ್ ಪ್ರಶ್ನಿಸಿದ್ದಾರೆ.
ಬೇರೆ ಅನೇಕ ಹಿರಿಯ ಮತ್ತು ಅರ್ಹ ಶಾಸಕರಿದ್ದರೂ ಪರಮೇಶ್ವರ್ ನಾಯ್ಕ್ ಅವರನ್ನೇ ಏಕೆ ಸಚಿವರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಅವರು ಕೇಳಿದ್ದಾರೆ.
ಈ ನಡುವೆ ಸಚಿವ ಸ್ಥಾನ ದೊರೆತಿದ್ದಕ್ಕೆ ಪರಮೇಶ್ವರ್ ನಾಯ್ಕ್ ಸಂತಸ ವ್ಯಕ್ತಪಡಿಸಿದ್ದಾರೆ.
ನಾನು ಸಚಿವನಾಗುತ್ತಿರುವುದು ಇದು ಮೊದಲೇನಲ್ಲ. ಯಾವ ಖಾತೆ ನೀಡಿದರೂ ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದು ಪರಮೇಶ್ವರ್ ನಾಯ್ಕ್ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿಗೆ ತಪ್ಪಿದ ಸ್ಥಾನ: ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಭೀಮಾ ನಾಯ್ಕ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದರ ಬಗ್ಗೆ ಅವರ ಬೆಂಬಲಿಗರಲ್ಲಿ ಸಹಜವಾಗಿಯೇ ಅಸಮಾಧಾನ ಉಂಟಾಗಿದೆ. ಅವರಿಗೆ ಮುಂದೆ ಪರ್ಯಾಯ ಸ್ಥಾನ ಸಿಗಬಹುದು.
ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರೂ ಪಕ್ಷ ತೊರೆಯಬಾರದು. ಬಿಜೆಪಿ ಕೂಡ ಸರ್ಕಾರ ಬೀಳಿಸುವ ಪ್ರಯತ್ನ ಮಾಡಬಾರದು. ಆಡಳಿತ ನಡೆಸಲು ಬಿಡಬೇಕು ಎಂದು ಸಚಿವ ಶಿವಶಂಕರ್ ರೆಡ್ಡಿ ಬಳ್ಳಾರಿಯಲ್ಲಿ ಹೇಳಿದ್ದಾರೆ.