ಲಾಡ್ ಬ್ರದರ್ಸ್ ಮತದಾರರ ಮೇಲೆ ಕೆಂಡ ಕಾರೋದು ಎಷ್ಟು ಸರಿ?
ಬಳ್ಳಾರಿ, ಮೇ. 17 : ಜಿಲ್ಲೆಯ ಲಾಡ್ ಸಹೋದರರು ಕಣ್ಣು ಕೆಂಪಾಗಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ಮತದಾರರ ಮೇಲೆ ಕೋಪೋದ್ರಿಕ್ತರಾಗಿದ್ದಾರೆ. ಪ್ರಸ್ತುತ ರಾಜಕೀಯ ಪ್ರಹಸನದಲ್ಲಿ ರೆಡ್ಡಿ ಬ್ರದರ್ಸ್ ಗೆ ಎದಿರೇಟು ಹೊಡೆಯಲು ಲಾಡ್ ಬ್ರದರ್ಸ್ ದೊಡ್ಡ ಸುದ್ದಿಯೇ ಆಗುತ್ತಿದ್ದರು ಆದರೆ ಈಗಿಲ್ಲ.
ಸಂಡೂರು ನಿವಾಸಿಗಳಾಗಿರುವ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂತೋಷ್ ಎಸ್. ಲಾಡ್, ಕಲಘಟಗಿ ಕ್ಷೇತ್ರದಿಂದ ಎರಡುಬಾರಿ ಗೆಲುವು ಸಾಧಿಸಿದ್ದರೂ, ಹ್ಯಾಟ್ರಿಕ್ ಛಾನ್ಸ್ ನಿಂದ ವಂಚಿತರಾದರು. ಅವರ ಸೋಲಿಗೆ ಅವರೇ ನೇರವಾಗಿ ಕಾರಣ.
'ಸುರೇಶಬಾಬು ಸೋಲಿಗೆ ಅವರೇ ಕಾರಣ, ಕಾಂಗ್ರೆಸ್ ಅಲ್ಲ'
ಆದರೂ, ಅವರು ಪಕ್ಷ, ಕಾರ್ಯಕರ್ತರು ಮತ್ತು ಮುಖಂಡರನ್ನು ಗುರಿ ಮಾಡಿ ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಎಚ್. ಲಾಡ್, ಸಂತೋಷ್ ಲಾಡ್ ಅವರ ಸಹೋದರ ಸಂಬಂಧಿ. ಸಂಡೂರು ನಿವಾಸಿ. ಕಬ್ಬಿಣದ ಅದಿರು ವ್ಯವಹಾರದ ಪಾಲುದಾರ.
ಇವರು ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ಇವರ ಸೋಲಿಗೂ ಅವರ ಸ್ವಯಂಕೃತ ಅಪರಾಧಗಳೇ ಕಾರಣ. ಇವರೂ ಗುರಿ ಮಾಡುತ್ತಿರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತದಾರರು ಮತ್ತು ಲೋಕಲ್ ಲೀಡರುಗಳನ್ನು.
ಆದರೆ, ಇಬ್ಬರೂ ತಮ್ಮ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ. ಇವರ ಗರಡಿಯಲ್ಲಿ ಬೆಳೆದ ಇ. ತುಕಾರಾಂ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ, ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.